ಮಹಿಳೆಯರ ಸೀಟಲ್ಲಿ ಕೂರ್ಬೇಡಿ ಏಳಿ ಅಂದ ಕಂಡಕ್ಟರ್ ಗತಿ ಏನಾಯ್ತು?
ಬೆಂಗಳೂರು, ಫೆಬ್ರವರಿ 3: ಬಸ್ನಲ್ಲಿ ಸೀಟಿನ ವಿಚಾರವಾಗಿ ಆರಂಭವಾದ ಜಗಳ ಕೊನೆಗೆ ಕಂಡಕ್ಟರ್ ಮೇಲೆ ಹಲ್ಲೆ ಮಾಡುವ ಮಟ್ಟಿಗೆ ತಲುಪಿತ್ತು.
ಬಳಿಕ ಬಸ್ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯಲ್ಲಿ ನಡೆದಿದೆ.
ಕಂಡಕ್ಟರ್ ಐಎಎಸ್ ಪಾಸ್; ಸುಳ್ಳು ಸುದ್ದಿ ಸ್ಫೂರ್ತಿ ತುಂಬಿದ ಕಥೆ
ಹೊಸಕೋಟೆ ಡಿಪೋಗೆ ಸೇರಿದ ಬಿಎಂಟಿಸಿ ಬಸ್ನ ಕಂಡಕ್ಟರ್ ಬಸವರಾಜು ಅವರಿಗೆ ಗಾಯವಾಗಿದೆ. ಘಟನೆ ಸಂಬಂಧ ದಾಂಧಲೆ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಂಟಿಸಿ ಬಸ್ ಹೊಸಕೋಟೆಯಿಂದ ದೊಡ್ಡಬಳ್ಳಾಪುರಕ್ಕೆ ಹೊರಟಿತ್ತು. ಸೂಲಿಬೆಲೆಯಲ್ಲಿ ಬಸ್ ಹತ್ತಿದ ವ್ಯಕ್ತಿಯೊಬ್ಬ ಲೇಡೀಸ್ ಸೀಟಿನಲ್ಲಿ ಕುಳಿತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳಾ ಪ್ರಯಾಣಿಕರೊಬ್ಬರು ಸೀಟನ್ನು ಬಿಡಿಸಿ ಕೊಡುವಂತೆ ಕಂಡಕ್ಟರ್ಗೆ ಹೇಳಿದ್ದಾರೆ.
ಕಂಡಕ್ಟರ್ ಲೇಡೀಸ್ ಸೀಟ್ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಸೀಟು ತೆರವು ಮಾಡುವಂತೆ ಹೇಳಿದ್ದು, ಈ ವಿಚಾರಕ್ಕೆ ಬಸ್ಸಿನಲ್ಲಿದ್ದ ಒಂದು ಕೋಮಿನ ಯುವಕರು ತಗಾದೆ ತೆಗೆದಿದ್ದಾರೆ.
ಸೀಟಿನಲ್ಲಿ ಕುಳಿತ ಪ್ರಯಾಣಿಕ ತಮಿಳುನಾಡಿನವನಾಗಿದ್ದು, ಆತ ತನ್ನ ಪಾಡಿಗೆ ತಾನು ಹೋಗಿದ್ದಾನೆ. ಆದರೆ ಇದೇ ವಿಚಾರಕ್ಕೆ ವೈಮನಸ್ಸು ಬೆಳೆಸಿಕೊಂಡ ಯುವಕರು, ಮತ್ತೆ ಬಸ್ ಹಿಂತಿರುಗುವವರೆಗೆ ಕಾದಿದ್ದಾರೆ.
ಸಂಜೆ 5.30ಕ್ಕೆ ವಾಪಸ್ ಬಂದ ಬಸ್ಸನ್ನು ಯುವಕರ ಗುಂಪು ಹಿಂಬಾಲಿಸುತ್ತಿರುವುದು ಅರಿತ ಕಂಡಕ್ಟರ್ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ.
ತಕ್ಷಣ ಇಬ್ಬರು ಪೊಲೀಸರು ಬಸ್ ಹತ್ತಿದ್ದಾರೆ. ಬಳಿಕ ಬಸ್ ನಿಲ್ದಾಣಕ್ಕೆ ಹೋಗುತ್ತಿರುವಾಗ ಸೂಲಿಬೆಲೆಯ ಟೌನ್ನಲ್ಲಿ ಸುಮಾರು 50ಕ್ಕೂ ಹೆಚ್ಚು ಜನರ ಗುಂಪು ಸುತ್ತುವರೆದು ಕಲ್ಲು ತೂರಾಟ ನಡೆಸಿದೆ.
ಅಲ್ಲದೆ ಬಸ್ ಒಳನುಗ್ಗಿ ಪೊಲೀಸರನ್ನೇ ತಳ್ಳಾಡಿ ಕಂಡಕ್ಟರ್ ಬಸವರಾಜುಗೆ ಥಳಿಸಿದ್ದಾರೆ. ಇಬ್ಬರು ಪೊಲೀಸರು ಅವರನ್ನು ರಕ್ಷಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕಡೆಸಿಕೊಂಡು ಗುಂಪನ್ನು ಚದುರಿಸಿದೆ.
ಘಟನೆಯನ್ನು ವಿಡಿಯೋ ಮಾಡುತ್ತಿದ್ದವರ ಮೇಲೂ ಕೂಡ ಹಲ್ಲೆ ನಡೆಸಿದ್ದಾರೆ.