ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ವಾರೆಂಟ್!
ಬೆಂಗಳೂರು, ಡಿಸೆಂಬರ್ 29: ಯುಬಿ ಸಿಟಿಯ ಸ್ಕೈಬಾರಿನಲ್ಲಿ ಎರಡು ವರ್ಷದ ಹಿಂದೆ ನಡೆದ ಹಲ್ಲೆ, ದಾಂಧಲೆ, ಕಾನೂನು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ವಾರೆಂಟ್ ಜಾರಿಗೊಳಿಸಲಾಗಿದೆ.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಮೇಲೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದು, ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ, ಸಮನ್ಸ್ ಗೆ ಉತ್ತರ ನೀಡದ ವಿಜಯಾನಂದ ಅವರ ವಿರುದ್ಧ ವಾರೆಂಟ್ ಜಾರಿಗೊಳಿಸಲಾಗಿದೆ.[ಸಿಸಿಬಿ ಪೊಲೀಸರ ಮುಂದೆ ಕಾಶಪ್ಪನವರ್ ಹೇಳಿದ್ದೇನು?]
ಜುಲೈ 1, 2014 ರಂದು ಕಬ್ಬನ್ ಪಾರ್ಕ್ ಠಾಣೆಯ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಬಾಗಲಕೋಟೆ ಜಿಲ್ಲೆ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಅವರ ಬಲಗೈ ಬಂಟ ರೌಡಿ ಶೀಟರ್ ಸೋಮಶೇಖರ್ ಗೌಡ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ನಂತರ ಸಿಸಿಬಿಗೆ ವರ್ಗಾಯಿಸಲಾಯಿತು. ಎರಡು ವರ್ಷಗಳ ಬಳಿಕ ಆರೋಪಿ ನಂ.1 ಸೋಮಶೇಖರ್ ಗೌಡ ಹಾಗೂ ನಂ. 2 ವಿಜಯಾನಂದ ಕಾಶಪ್ಪನವರ್ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲಾಗಿದೆ.
ಘಟನೆ ಹಿನ್ನಲೆ: ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಯುಬಿ ಸಿಟಿಯ ಸ್ಕೈ ಬಾರ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಅವರ ಬೆಂಬಲಿಗರು ಹುಟ್ಟುಹಬ್ಬದ ಪಾರ್ಟಿ ನಡೆಸುತ್ತಿದ್ದರು. ರಾತ್ರಿ 11 ಗಂಟೆ ನಂತರ ಮದ್ಯ ಪೂರೈಕೆ ಮಾಡುವಂತೆ ಆಗ್ರಹಿಸಿ, ಸೋಮಶೇಖರ್ ಗೌಡ ದಬಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.[ಶಾಸಕ ವಿಜಯಾನಂದ ಕಾಶಪ್ಪನವರಗೆ ಕ್ಲೀನ್ ಚಿಟ್?]
ರಾತ್ರಿ ಗಸ್ತಿನಲ್ಲಿದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗಳಾದ ಕಿರಣ್ ಮತ್ತು ಪ್ರಶಾಂತ್ ನಾಯಕ್ ದಾಂಧಲೆ ಬಗ್ಗೆ ಪ್ರಶ್ನಿಸಿದ್ದಾರೆ ಮತ್ತು ಅದನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ಶಾಸಕರು ಮತ್ತು ಅವರ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈಗ ಮತ್ತೊಮ್ಮೆ ಪ್ರಕರಣಕ್ಕೆ ಜೀವ ಬಂದಿದ್ದು, ಆರೋಪಿಗಳ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಕೆಯಾಗಿದೆ. ಕಾಶಪ್ಪವರ್ ವಿರುದ್ಧ ಸರಿ ಸುಮಾರು 16 ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿವೆ. (ಒನ್ಇಂಡಿಯಾ ಸುದ್ದಿ)