ಅಶೋಕ್ 'ಕಿರೀಟ' ಅಶ್ವಥ್ ನಾರಾಯಣ್ ತಲೆಗೆ; ಬದಲಾಯ್ತಾ ಬೆಂಗಳೂರು ಬಿಜೆಪಿ ಆದ್ಯತೆ?
ಬೆಂಗಳೂರು ನಗರದ ಸಿಂಹಾಸನದಿಂದ ಬಿಜೆಪಿ 'ಸಾಮ್ರಾಟ' ಅಶೋಕ್ (ಆರ್. ಅಶೋಕ್) ಕೆಳಗಿಳಿಯುವ ಅಥವಾ ಪ್ರಭಾವ ತಗ್ಗುವ ಕಾಲ ಬಂದಾಯಿತೇ? ಅಶೋಕ್ ಗೆ ಪರ್ಯಾಯವಾಗಿ ಒಕ್ಕಲಿಗ ನಾಯಕರೊಬ್ಬರು ಕೇಸರಿ ಪಕ್ಷಕ್ಕೆ ಸಿಕ್ಕಾಗಿದೆಯಾ? ಆ ಕಾರಣದಿಂದಲೇ ಅಶೋಕ್ ಗೆ ಅಭದ್ರತೆ ಕಾಡಲು ಶುರು ಆಗಿದೆಯಾ?
ಈ ಎಲ್ಲ ಪ್ರಶ್ನೆಗಳಿಗೂ 'ಹೌದು, ಹೌದು, ಹೌದು' ಎಂಬ ಉತ್ತರವೇ ಪ್ರತಿಧ್ವನಿಸುತ್ತದೆ. ಯಾಕೆಂದರೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ, ಐವತ್ತೊಂದು ವರ್ಷದ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಈಗ ಸಚಿವರು. ಜತೆಗೆ ಪಕ್ಷದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಆಪರೇಷನ್' ಕಮಲದಲ್ಲಿ ಈ ಡಾಕ್ಟರ್ ಕೈ ಗುಣ ಚೆನ್ನಾಗಿ ಕೆಲಸ ಮಾಡಿದೆ ಎಂಬ ಅಭಿಪ್ರಾಯ ಎಲ್ಲ ಕಡೆ ಇದೆ.
ಮುಗಿದ ಖಾತೆ ಕಿತ್ತಾಟ: ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
ಯಾವ ಅಶೋಕ್ ರಿಂದ ಸಾಧಿಸಲು ಸಾಧ್ಯವಾಗಲಿಲ್ಲವೋ ಅದನ್ನು ಅಶ್ವಥ್ ನಾರಾಯಣ್ ಸಾಧಿಸಿ ತೋರಿಸಿದ್ದಾರೆ ಎಂಬ ಕಾರಣಕ್ಕೆ ಡಿಸಿಎಂ ಹುದ್ದೆ ತೋಫಾ ಆಗಿ ಸಿಗಬಹುದು. ಇಷ್ಟೆಲ್ಲ ಆಗುತ್ತಿರುವಾಗ ಅಶೋಕ್ ಮಂಕಾದಂತೆ, ಪಕ್ಷದ ಪ್ರಮುಖರ ವಲಯದೊಳಗೆ ತಮ್ಮ ವರ್ಚಸ್ಸು ಕಳೆದುಕೊಂಡಂತೆ ಕಾಣುತ್ತಿದ್ದಾರೆ.
ಗಾಳಿಪಟ ಹಾರಿಬಿಟ್ಟಿದ್ದರು ಆರ್. ಅಶೋಕ್
ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಕರ್ನಾಟಕದ ಕೆಲ ಪತ್ರಕರ್ತರನ್ನು ಖಾಸಗಿಯಾಗಿ ಭೇಟಿ ಆಗಿದ್ದ ಆರ್. ಅಶೋಕ್, ಮುಂಬೈ ಎಪಿಸೋಡ್ ನಲ್ಲಿ ನಾನು ಬಹಳ ಕೆಲಸ ಮಾಡಿದೆ. ಈ ಬಾರಿ ಬಿಜೆಪಿ ಸರಕಾರದಲ್ಲಿ ನನಗೆ ಗೃಹ ಸಚಿವ ಸ್ಥಾನ ಸಿಕ್ಕರೂ ಅಚ್ಚರಿ ಇಲ್ಲ ಎಂದು ಗಾಳಿಪಟವನ್ನು ಹಾರಿಬಿಟ್ಟಿದ್ದಾರೆ. ಆದರೆ ಮುಂಬೈನಲ್ಲಿ ಬಿಡಾರ ಹೂಡಿ, ಅತೃಪ್ತರು ಉಳಿದುಕೊಂಡಿದ್ದ ಹೋಟೆಲ್ ಗಳಿಗೆ ಬಂದು ಹೋದವರು ಯಾರು ಎಂದು ಗೊತ್ತಿದ್ದ ಪತ್ರಕರ್ತರು ನಕ್ಕು ಸುಮ್ಮನಾಗಿದ್ದಾರೆ ಎನ್ನುತ್ತಾರೆ ದೆಹಲಿಯಲ್ಲಿ ಈ ಬಗ್ಗೆ ಮಾಹಿತಿ ಇರುವ ಮಾಧ್ಯಮ ಪ್ರತಿನಿಧಿಗಳು.
ಅಶ್ವಥ್ ನಾರಾಯಣ್ ರ ಪ್ರಭಾವ ವಿಸ್ತರಣೆ ಆಗುತ್ತಲೇ ಇದೆ
ಇನ್ನು ಮೇಲುನೋಟಕ್ಕೆ ಗೊತ್ತಾಗುವಂತೆ ಸಚಿವ ಅಶ್ವಥ್ ನಾರಾಯಣ್ ರ ಪ್ರಭಾವ ವಿಸ್ತರಣೆ ಆಗುತ್ತಲೇ ಇದೆ. ರಾಜ್ಯ ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವ ವಿಚಾರಕ್ಕೆ ಬಂದರೆ ಆರ್. ಅಶೋಕ್ ಕಡೆಗೇ ನೋಡಲಾಗುತ್ತಿತ್ತು. ಆದರೆ ಈಗ ಬೆಂಗಳೂರಿನಿಂದಲೇ ಪರ್ಯಾಯವನ್ನು ಪಕ್ಷದಿಂದ ಹುಡುಕಲಾಗಿದೆ. ಈ ಬಗ್ಗೆ ವರ್ಷದ ಹಿಂದೆಯೇ ಸೂಚನೆಯೊಂದು ಸಿಕ್ಕಿತ್ತು. ವಿಧಾನಸಭೆ ಚುನಾವಣೆ, ಬಿಬಿಎಂಪಿ ಮೈತ್ರಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಅಶೋಕ್ ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎಂಬ ಆರೋಪ ಇತ್ತು. ಜತೆಗೆ ಅನಂತಕುಮಾರ್ ಅವರು ನಿಧನರಾದ ಮೇಲೆ ಬೆಂಗಳೂರು ರಾಜಕಾರಣದ ಸಮೀಕರಣವೇ ಸಂಪೂರ್ಣ ಬದಲಾಗಿದೆ.
ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕನ ಬೆಳೆಸಲು ಸೂಚನೆ
ಬೆಂಗಳೂರಿಗೆ ಸಂಬಂಧಿಸಿದಂತೆ ಅಶೋಕ್ ನಿರ್ಧಾರವೇ ಅಂತಿಮ ಎಂಬ ಕಾಲವೊಂದಿತ್ತು. ಈ ಬಗ್ಗೆ ಸ್ವತಃ ಯಡಿಯೂರಪ್ಪ ಆಗಲೀ ಅಥವಾ ಪಕ್ಷದಲ್ಲಿ ರಾಷ್ಟ್ರಮಟ್ಟದ ಜವಾಬ್ದಾರಿ ವಹಿಸಿಕೊಂಡವರು ಸಹ ತಲೆ ಹಾಕುತ್ತಿರಲಿಲ್ಲ. ಅನಂತಕುಮಾರ್ ಅವರು ನಿಧನರಾಗುವ ತನಕ ಆ ನಿಯಮವನ್ನು ಅನುಸರಿಸಿಕೊಂಡು ಬರಲಾಗಿತ್ತು. ಆದರೆ ಪಕ್ಷದೊಳಗೆ ಅಂಥದ್ದೊಂದು ಹೊಂದಾಣಿಕೆ ಆ ನಂತರ ಸಡಿಲವಾಯಿತು. ಜತೆಗೆ ಅಶೋಕ್ ಕೆಲವು ಸಂಗತಿಗಳಲ್ಲಿ ಮೈ ಮರೆತರು. ಹೈ ಕಮಾಂಡ್ ಮಟ್ಟದಲ್ಲಿ ಆದ ಬದಲಾವಣೆಗಳು ಗುರುತಿಸುವಲ್ಲಿ ವಿಫಲರಾದ ಪರಿಣಾಮ ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕನನ್ನು ಬೆಳೆಸುವುದಕ್ಕೆ ಹೈ ಕಮಾಂಡ್ ನಿಂದಲೇ ಸಿಕ್ಕ ಸೂಚನೆಯ ಫಲವೇ ಈಗಿನ ಬೆಳವಣಿಗೆ ಎನ್ನುತ್ತವೆ ಬಿಜೆಪಿ ಮೂಲಗಳು.
ಡಿಸಿಎಂ ಹುದ್ದೆಗೆ ಹೆಸರು ಕೇಳಿಬಂದಿದೆ
ಮಲ್ಲೇಶ್ವರ ಕ್ಷೇತ್ರದಿಂದ ಆರಿಸಿ ಬರುತ್ತಿರುವ ಡಾ. ಅಶ್ವಥ್ ನಾರಾಯಣ್ ಗೆ ಇಮೇಜ್ ಸಮಸ್ಯೆ ಇಲ್ಲ. ಶಿಕ್ಷಣ, ಭಾಷೆ, ವಯಸ್ಸು, ಹುಮ್ಮಸ್ಸು ಎಲ್ಲವೂ ಕೈ ಹಿಡಿದಿದೆ. ಇದೇ ಸಂದರ್ಭಕ್ಕೆ ಆಪರೇಷನ್ ಕಮಲವನ್ನು ಯಶಸ್ವಿಯಾಗಿ ಪೂರೈಸಲು ಸಾಕಷ್ಟು ಶ್ರಮಿಸಿರುವುದರಿಂದ ಬಿಜೆಪಿಯು ಏನನ್ನು ನಿರೀಕ್ಷೆ ಮಾಡುತ್ತಿತ್ತೋ ಆ ಎಲ್ಲ ಪ್ಯಾಕೇಜ್ ಒಟ್ಟಿಗೆ ಸಿಕ್ಕಂತೆ ಆಗಿದೆ. ಇನ್ನೇನಿದ್ದರೂ ಬೆಳವಣಿಗೆಯ ಹಂತಗಳು ಹೇಗೆ ಸಾಗುತ್ತವೆ ಎಂಬುದನ್ನಷ್ಟೇ ಕಾದು ನೋಡಬೇಕು. ಏಕೆಂದರೆ, ಡಿಸಿಎಂ ಹುದ್ದೆಗೆ ಹೆಸರು ಕೇಳಿಬರುತ್ತಿರುವುದು ಸಹ ಕಡಿಮೆ ಏನಲ್ಲ. ಒಂದು ವೇಳೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಅಶೋಕ್ ರಾಜಕೀಯ ಬದುಕು ಕಷ್ಟ ಕಷ್ಟ.