ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ಇದೆಯೋ, ಇಲ್ವೋ? ಸಿದ್ದರಾಮಯ್ಯ ಸ್ಪಷ್ಟನೆ
Recommended Video
ಬೆಂಗಳೂರು, ಜೂನ್ 11: ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ಜೂನ್ 14ಕ್ಕೆ ಮುಂದೂಡಲ್ಪಟ್ಟಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ, ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಬಹುತೇಕ ಕಮ್ಮಿ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೋಮವಾರ (ಜೂ 10) ರಾತ್ರಿ ಬೆಂಗಳೂರು ಮಡಿವಾಳದ ಕಾರ್ಪೋರೇಟರ್ ಮತ್ತು ರಾಮಲಿಂಗಾ ರೆಡ್ಡಿಯವರ ಪರಮಾಪ್ತ ಮಂಜುನಾಥ ರೆಡ್ಡಿ ಮತ್ತು ರೆಡ್ಡಿ ಜನಸಂಘದ ಹಲವು ಪ್ರಮುಖರು ಸಿದ್ದರಾಮಯ್ಯನವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.
ರಾಮಲಿಂಗಾ ರೆಡ್ಡಿ ಸಿಟ್ಟಿಗೆ ಕರಗಿದ ಕಾಂಗ್ರೆಸ್, ಸಚಿವ ಸ್ಥಾನ ಪಕ್ಕಾ
ಈ ವೇಳೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ತಮ್ಮ ಅಸಾಹಯಕತೆ ತೋಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಬಾರಿ ರಾಮಲಿಂಗಾ ರೆಡ್ಡಿಯವರಿಗೆ ಸಚಿವ ಸ್ಥಾನ ಸಿಗುವುದಿಲ್ಲ, ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಖಂಡಿತ ಪರಿಗಣಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆಯನ್ನು ನೀಡಿದ್ದಾರೆ.
ನನ್ನಂತೆಯೇ, ರಾಮಲಿಂಗಾ ರೆಡ್ಡಿ ಕೂಡಾ ಹಿರಿಯರು ಮತ್ತು ಪಕ್ಷಕ್ಕೆ ಹಳಬರು. ಅವರು ಎಲ್ಲವನ್ನೂ ಅರಿತಿದ್ದಾರೆ, ಹೀಗಾಗಿ ಇಂತಹ ಸಂದರ್ಭದಲ್ಲಿ ಪಕ್ಷದ ಪರವಾಗಿ ಅವರು ನಿಲ್ಲಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗೃಹ ಖಾತೆ ಸೇರಿ ಉನ್ನತ ಇಲಾಖೆಗಳನ್ನು ನಿಭಾಯಿಸಿದ್ದ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಹಿಂದೆ ವರದಿಯಾಗಿತ್ತು. ರಾಮಲಿಂಗಾ ರೆಡ್ಡಿ ಅವರು ಇತ್ತೀಚೆಗಷ್ಟೆ ಕಾಂಗ್ರೆಸ್ ಮುಖಂಡರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು, ಕೆಪಿಸಿಸಿ ಕಚೇರಿ ಎದುರು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.
ಹೊಸ ಪಟ್ಟಿ ಪ್ರಕಾರ ಸಚಿವ ಸ್ಥಾನ ಪಡೆಯಲಿರುವ ಮೂವರು ಶಾಸಕರ ಯಾರು?
ಎನ್.ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಸಚಿವ ಸ್ಥಾನವನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡಲಾಗುವುದು ಎಂದು ಖುದ್ದು ಸಿದ್ದರಾಮಯ್ಯನವರೇ ಸ್ಪಷ್ಟನೆಯನ್ನು ನೀಡಿದ್ದರು.
ರಾಮಲಿಂಗಾ ರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಕುಷ್ಟಗಿ ಶಾಸಕ ಅಮರೇಗೌಡ ಲಿಂಗನಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.