"ಯೋಗಿ ಮತ್ತೆ ರಾಜ್ಯಕ್ಕೆ ಬಂದ್ರೆ ಸಿದ್ದರಾಮಯ್ಯ 'ಜೈ ಶ್ರೀರಾಮ್' ಅಂತಾರೆ!"
ಬೆಂಗಳೂರು, ಜನವರಿ 08: 'ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ನೊಮ್ಮೆ ಕರ್ನಾಟಕಕ್ಕೆ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಜೈ ಶ್ರೀರಾಮ್' ಎನ್ನುತ್ತಾರೆ' ಎಂದು ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಅಣಕಿಸಿದ್ದಾರೆ.
ಮಂಗಳೂರಿನ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಕೊಲೆ ಖಂಡಿಸಿ, ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಲೇವಡಿ ಮಾಡಿದರು.
ಗೋಡ್ಸೆ ಅನುಯಾಯಿ ಆದಿತ್ಯನಾಥ್ ರಿಂದ ನಮಗೆ ಪಾಠ ಬೇಡ: ಸಿದ್ದರಾಮಯ್ಯ
ಸಿದ್ದು ಸರ್ಕಾರದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾಪತ್ತೆಯಾಗಿದೆ ಎಂದ ಅವರು, ಚುನಾವಣೆ ಹತ್ತಿರ ಬರುತ್ತಿರುವುದರಿಂದಲೇ ಸಿದ್ದರಾಮಯ್ಯ ಹಿಂದುಗಳ ಓಲೈಕೆಗೆ ತೊಡಗಿದ್ದಾರೆ. ಯೋಗಿ ಆದತ್ಯನಾಥ್ ಮೊದಲ ಬಾರಿ ಕರ್ನಾಟಕಕ್ಕೆ ಬಂದಿದ್ದಾಗ, ಸಿದ್ದರಾಮಯ್ಯ ಹಿಂದುತ್ವದ ಬಗ್ಗೆ ಮಾತನಾಡಿದ್ದರು. ಅವರು ಎರಡನೇ ಬಾರಿ ಭೇಟಿ ನೀಡಿದಾಗ, 'ತಮ್ಮ(ಸಿದ್ದರಾಮಯ್ಯ) ಹೆಸರಿನಲ್ಲೇ ರಾಮನಿದ್ದಾನೆ' ಎಂದಿದ್ದರು. ಯೋಗಿಯವರು ಮತ್ತೊಮ್ಮೆ ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯನವರು ಖಂಡಿತ 'ಜೈ ಶ್ರೀರಾಮ್' ಎನ್ನುತ್ತಾರೆ ಎಂದು ಅವರು ಅಣಕಿಸಿದರು.
ಕರ್ನಾಟಕ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ಯಾತ್ರೆ ಜ.7 ರಂದು ಬೆಂಗಳೂರಿಗೆ ಆಗಮಿಸಿದ್ದ ಕಾರಣ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸಿ, ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸಿದ್ದರು.