ಯೋಗ ದಿನಾಚರಣೆಗೆ ಯೂರೋಪಿಯನ್ ಸಂಸತ್ತಿನಲ್ಲಿ ಶ್ರೀಶ್ರೀ ರವಿಶಂಕರ್
ಬೆಂಗಳೂರು, ಜೂನ್ 19: ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರರು ಯೂರೋಪಿಯನ್ ನ ಸಂಸತ್ತಿನಲ್ಲಿ ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಿಕೊಡಲಿದ್ದಾರೆ.
ಯೂರೋಪಿನ ಸಂಸತ್ತು ಬೆಲ್ಜಿಯಂ ದೂತಾವಾಸದ ಸಹಯೋಗದೊಂದಿಗೆ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರನ್ನು ಆಹ್ವಾನಿಸಿದ್ದು, 21ನೆಯ ಜೂನ್, 2018ರಂದು ಯೆಹೂದಿ ಮೆನುಹಿನ್ ಸ್ಪೇಸ್ ನಲ್ಲಿ, ಮಧ್ಯಾಹ್ನ 12ರಿಂದ 1.30ಕ್ಕೆ , ಸಂಸತ್ತಿನ ಹೊರಗೆ ಯೋಗದ ಸಮಾರಂಭ ನಡೆಯಲಿದೆ.
ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ
ಸಂಸದರು, ಯೂರೋಪಿಯನ್ ಕಮಿಷನ್ ನ ಅಧಿಕಾರಿಗಳು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಆಸನಗಳನ್ನು, ಉಸಿರಾಟದ ವ್ಯಾಯಾಮಗಳನ್ನು ಮತ್ತು ಧ್ಯಾನವನ್ನು ಒಳಗೊಂಡ ಯೋಗದ ಪ್ರಕ್ರಿಯೆಗಳನ್ನು ಆಂತರಿಕ ಶಾಂತಿ ಮತ್ತು ಒಳಿತಿಗಾಗಿ ನಡೆಸಿಕೊಡಲಿದ್ದಾರೆ. ಅಲ್ಲಿನ ಸಂಸತ್ತಿನ ಅಧ್ಯಕ್ಷರು ಮತ್ತು ಭಾರತದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಆಧುನಿಕ ಜೀವನಶೈಲಿಯಿಂದಾಗಿ ಹೆಚ್ಚು ಹೆಚ್ಚು ಜನ ಯೋಗದತ್ತ ಆಕರ್ಷಿತರಾಗಿದ್ದಾರೆ. ಯೋಗವು ಧರ್ಮ, ಸಂಸ್ಕೃತಿ ಮತ್ತು ಭಾಷೆಯ ತಡೆಗಳೆಲ್ಲವನ್ನೂ ಮುರಿದು, ನಿತ್ಯದ ಜೀವನಶೈಲಿಯ ಅಂಗವಾಗಿದೆ. ಶಕ್ತಿಯುತವಾಗಿಸುವ, ಶಾಂತಿ ಮತ್ತು ಸಮೃದ್ಧಿಯನ್ನು ತರಬಲ್ಲ ಯೋಗದ ಸಾಮರ್ಥ್ಯವೇ ಇದಕ್ಕೆ ಕಾರಣ.
ನಾಲ್ಕನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಒಂದು ವಾರದ ಕಾರ್ಯಕ್ರಮವನ್ನು ಜಗತ್ತಿನ ಎಲ್ಲೆಡೆಯೂ ಆಯೋಜಿಸಿದೆ. ಯೋಗದ ಸಾರ ಮತ್ತು ಅದರ ನೈಜ ಅಭ್ಯಾಸವನ್ನು ಎತ್ತಿ ಹಿಡಿಯುವುದೇ ಈ ಕಾರ್ಯಕ್ರಮಗಳ ಉದ್ದೇಶವಾಗಿದೆ. 150 ದೇಶಗಳ 2000 ಸ್ಥಳಗಳಲ್ಲಿ ಕೋಟ್ಯಂತರ ಯೋಗೋತ್ಸಾಹಿಗಳು ಶ್ರೀ ಶ್ರೀ ಯೋಗದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮತ್ತೊಂದು ದಾಖಲೆ ನಿರ್ಮಿಸಲು ಅಣಿಯಾಗುತ್ತಿದೆ ಸಾಂಸ್ಕೃತಿಕ ನಗರಿ
ಭಾರತದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಫ್ರೆಂಚ್ ಸ್ಪೋರ್ಟ್ಸ್ ನ ಚಿಲ್ಲರೆ ವ್ಯಾಪಾರಿಯಾದ ಡೆಕತ್ಲಾನ್ ನೊಡನೆ ಜಂಟಿಯಾಗಿ ಶ್ರೀ ಶ್ರೀ ಯೋಗದ ಕಾರ್ಯಕ್ರಮವನ್ನು ದೆಹಲಿಯ 61 ಅಂಗಡಿಗಳಲ್ಲಿ ನಡೆಸಲಿದೆ. ಜೂನ್ 21ರಂದು ಶ್ರೀ ಶ್ರೀ ಯೋಗದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಜಾಲತಾಣದ ಮೂಲಕ ಶ್ರೀ ಶ್ರೀ ರವಿಶಂಕರ್ ನೇರವಾಗಿ ಮಾತನಾಡಲಿದ್ದಾರೆ.
ಅಂತಾರಾಷ್ಟ್ರೀಯ ದಿನಾಚರಣೆಯ ಪೂರ್ವ ಸಿದ್ಧತೆಯಾಗಿ 90 ದೇಶಗಳಲ್ಲಿ, ಜನರು ಸೂರ್ಯ ನಮಸ್ಕಾರ ಮಾಡಲಿದ್ದಾರೆ. ಇದಲ್ಲದೆ ಜೂನ್ 21ರಂದು ಜಗತ್ತಿನ ಎಲ್ಲೆಡೆ ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ದಿನಾಚರಣೆಯ ಅಂಗವಾಗಿ ಶ್ರೀ ಶ್ರೀ ರವಿಶಂಕರರು 17ನೆ ಜೂನ್ ರಂದು ಆಮ್ ಸ್ಟರ್ ಡ್ಯಾಂ ನ ಮ್ಯೂಸಿಯಂ ಪ್ಲೇನ್ ನಲ್ಲಿ ಸಮಾರಂಭವನ್ನು ಉದ್ಘಾಟಿಸಿ, ಮುಖ್ಯ ಭಾಷಣವನ್ನು ನೀಡಿದರು. ಯುರೋಪ್ ನ ಪ್ರವಾಸದಲ್ಲಿರುವ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರು 23ನೆಯ ಜೂನ್ ರಂದು ಮ್ಯೂನಿಕ್ ನಲ್ಲಿ ಯೋಗ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ.
ಜೂನ್ 25ರಂದು ಆಸ್ಲೋದಲ್ಲಿ ಶ್ರೀ ಶ್ರೀ ರವಿಶಂಕರರು, "ಕ್ರೀಡೆಯಲ್ಲಿ ಡೋಪಿಂಗ್" ಎಂಬ ಸಮಾವೇಶದ ಮುಖ್ಯ ವಕ್ತಾರರಾಗಿ ಮಾತನಾಡಲಿದ್ದು, ನಾರ್ವೆಯ ಪ್ರಧಾನಿಗಳಾದ ಎರ್ನ ಸೋಲ್ಬರ್ಗ್ ಅವರು ಶ್ರೀ ಶ್ರೀ ಗಳೊಡನೆ ಜಂಟಿಯಾಗಿ ಕ್ರೀಡಾ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.