ಜನವಸತಿ ಪ್ರದೇಶದ ಬಳಿ ತುರ್ತಾಗಿ ಕೆಳಗಿಳಿದ ಸೇನಾ ಹೆಲಿಕಾಪ್ಟರ್
ಬೆಂಗಳೂರು, ಫೆಬ್ರವರಿ 6: ದಕ್ಷಿಣ ಬೆಂಗಳೂರು ವ್ಯಾಪ್ತಿಯ ತಲಘಟ್ಟಪುರ ಹತ್ತಿರದ ನಿವಾಸಿಗಳು ಭಾರೀ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ಆರ್ಮಿ ಏವಿಯೇಷನ್ ಕಾರ್ಪ್ಸ್ ನ ಹೆಲಿಕಾಪ್ಟರ್ ಒಂದು ಜಮೀನಿನಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಸಿಬ್ಬಂದಿ ಸುರಕ್ಷಿತವಾಗಿದ್ದು, ಸಹಾಯಕ ತಂಡವು ಅ ನಂತರ ಹೆಲಿಕಾಪ್ಟರ್ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಭಾರತೀಯ ಸೇನೆಯ ರುದ್ರ MK4 ಹೆಲಿಕಾಪ್ಟರ್ ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ತುರ್ತಾಗಿ ಕೆಳಗೆ ಇಳಿದಿದೆ. ತಕ್ಷಣವೇ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಎಚ್ ಎಎಲ್ ಹೇಳುವಂತೆ, ಲಭ್ಯ ಮಾಹಿತಿಯ ಪ್ರಕಾರ ಇದು ಮುಂಜಾಗ್ರತಾ ಲ್ಯಾಂಡಿಂಗ್. ಸಂಸ್ಥೆಯ ತಾಂತ್ರಿಕ ತಂಡ ಸ್ಥಳಕ್ಕೆ ತೆರಳಿ ನೆರವು ನೀಡಿದೆ. ಆ ನಂತರ ಹೆಲಿಕಾಪ್ಟರ್ ಮತ್ತೆ ಹಾರಾಟ ನಡೆಸಿ, ವಾಪಸಾಗಿದೆ.
ಎಚ್ಎಎಲ್ ವಿಮಾನ ದುರಂತ ; ವಾಯುಪಡೆಯಿಂದ ತನಿಖೆ ಆರಂಭ
ಹೈಡ್ರಾಲಿಕ್ ವೈಫಲ್ಯ ಆಗಬಹುದು ಎಂಬ ಮುಂಜಾಗ್ರತೆ ಕಾರಣಕ್ಕೆ ತುರ್ತಾಗಿ ಕೆಳಗೆ ಇಳಿಸಲಾಗಿದೆ. ರಕ್ಷಣಾ ಸಚಿವಾಲಯದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಚೆಗಷ್ಟೇ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಮಿರೇಜ್ ವಿಮಾನಪತನವಾಗಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದರು.
ರುದ್ರ ಹೆಲಿಕಾಪ್ಟರ್ ಅನ್ನು ಭಾರತೀಯ ಸೇನೆಗಾಗಿ ಎಚ್ ಎಎಲ್ ನಿರ್ಮಾಣ ಮಾಡಿದೆ. ಇದಲ್ಲಿ ವೆಪನ್ ಸಿಸ್ಟಮ್ ಸಹ ಇದೆ. ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ಇದಾಗಿದೆ. ಭಾರತದಲ್ಲೇ ನಿರ್ಮಾಣವಾಗಿರುವ ಮೊದಲ ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಇದು.