ಅರ್ಕಾವತಿ ಹಗರಣ, ತನಿಖೆ ಆರಂಭಿಸಿದ ಆಯೋಗ
ಬೆಂಗಳೂರು, ಜೂ. 18 : ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಬೆಂಗಳೂರಿನ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ಕುರಿತ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ನೇತೃತ್ವದ ತನಿಖಾ ಆಯೋಗ ಗುರುವಾರ ಆರಂಭಿಸಿದೆ.
ಮೊದಲ ದಿನದ ವಿಚಾರಣೆ ಆರಂಭಿಸಿದ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅಧಿಕಾರಾವಧಿಯಲ್ಲಿ ಮಾಡಲಾಗಿರುವ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಿದೆ. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]
ಬಡಾವಣೆಯ ವಿವಾದಕ್ಕೆ ಸಂಬಂಧಿಸಿದಂತೆ ಪರ ಹಾಗೂ ವಿರುದ್ಧವಾಗಿರುವ ಅರ್ಜಿದಾರರು ಜು. 4 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಲಾಯಿತು. ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಇಂದು 2001 ರಿಂದ ಇಲ್ಲಿಯ ತನಕ ಆದ ಡಿನೋಟಿಫಿಕೇಷನ್ಗಳ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಕೆ ಮಾಡಿದರು. [ಅರ್ಕಾವತಿ ಬಡಾವಣೆ ಫೈಟ್ ಯಾರು, ಏನು ಹೇಳಿದರು?]
ಅರ್ಕಾವತಿ ಡಿನೋಟಿಫಿಕೇಷನ್ ಆರೋಪ ಕೇಳಿ ಬಂದ ನಂತರ ಸರ್ಕಾರ ಪ್ರಕರಣದ ತನಿಖೆಗೆ 2014ರ ಆಗಸ್ಟ್ನಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ನೇತೃತ್ವದ ತನಿಖಾ ಆಯೋಗ ನೇಮಕ ಮಾಡಿತ್ತು. ಆಯೋಗದ ಅವಧಿ ಪೂರ್ಣಗೊಂಡಿದ್ದರಿಂದ 2015ರ ಮಾ.1 ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳಿಗೆ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಸಿಎಂ ವಿರುದ್ಧವೂ ದೂರು ದಾಖಲಾಗಿದೆ
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ದೂರು ಸಲ್ಲಿಕೆಯಾಗಿದೆ. ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ತನಿಖಾ ಆಯೋಗಕ್ಕೆ ದೂರು ಮತ್ತು 810 ಪುಟಗಳ ದಾಖಲೆಗಳನ್ನು ಬಿಜೆಪಿ ಬೆಂಬಲಿತ ವಕೀಲರಾದ ಎಸ್.ನಟರಾಜ್ ಶರ್ಮಾ ಮತ್ತು ದೊರೆರಾಜು ಅವರು ಸಲ್ಲಿಕೆ ಮಾಡಿದ್ದಾರೆ.
ಏನಿದು ಅರ್ಕಾವತಿ ವಿವಾದ?
ನ್ಯಾಯಾಲಯದ ಮಾರ್ಗಸೂಚಿಯಂತೆ ಡಿನೋಟಿಫಿಕೇಷನ್ ನಡೆದಿಲ್ಲ. ಬಿಡಿಎ ಕೈಕೊಂಡ ನಿರ್ಣಯದಲ್ಲಿಯೂ ದೋಷಗಳಿವೆ. ಸರ್ಕಾರ ಮಧ್ಯವರ್ತಿಗಳ ಲಾಬಿಗೆ ಮಣಿದಿದೆ. ಬಿಡಿಎ ಕೈಗೊಂಡ ನಿರ್ಣಯ ಪ್ರಕಾರ 422.25 ಎಕರೆಯನ್ನು ಅಧಿಸೂಚನೆಯಿಂದ ಕೈಬಿಡಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚುವರಿಯಾಗಿ 119 ಎಕರೆ ಸೇರಿಸಿ 541.25 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬುದು ಬಿಜೆಪಿ ಆರೋಪ.
ಬಿಜೆಪಿಯಿಂದ ಸತ್ಯಶೋಧನಾ ಸಮಿತಿ
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಬಗ್ಗೆ ವರದಿ ನೀಡಲು ಪ್ರತಿಪಕ್ಷ ಬಿಜೆಪಿ ಪಕ್ಷದ ಆಂತರಿಕ ಸತ್ಯಶೋಧನಾ ಸಮಿತಿ ರಚನೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮಾರ್ಗಸೂಚಿಯನ್ನು ಉಂಲ್ಲಘನೆ ಮಾಡಿ, ಅರ್ಕಾವತಿ ಬಡಾವಣೆಯಲ್ಲಿ 707 ಎಕರೆ ಡಿನೋಟಿಫೀಕೇಷನ್ ಮಾಡಿದ್ದಾರೆ ಎಂದು ಸಮಿತಿ ವರದಿ ಹೇಳಿತ್ತು.
ಕುಮಾರಸ್ವಾಮಿ ಪುಸ್ತಕ ಬಿಡುಗಡೆ ಮಾಡಿದ್ದಾರೆ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರವಹಿಸಿಕೊಂಡ ಮೇಲೆ ನ್ಯಾಯಾಲಯದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಅರ್ಕಾವತಿ ಬಡಾವಣೆಯ 702 ಎಕರೆಯನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಕುರಿತು 'ಅರ್ಕಾವತಿ ಕರ್ಮಕಾಂಡ' ಪುಸ್ತಕವನ್ನು ಅವರು ಬಿಡುಗಡೆ ಮಾಡಿದ್ದಾರೆ.
ಎಲ್ಲಾ ಮುಖ್ಯಮಂತ್ರಿಗಳ ಅವಧಿಯ ತನಿಖೆ
ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿವಿ ಸದಾನಂದ ಗೌಡ ಅಧಿಕಾರಾವಧಿಯಲ್ಲಿ ಮಾಡಲಾಗಿರುವ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ತನಿಖೆ ನಡೆಸಲಿದೆ.