ಲೈಂಗಿಕ ದೌರ್ಜನ್ಯ ದೂರು: ಅರ್ಜುನ್ ಸರ್ಜಾ ಅಲ್ಪ ನಿರಾಳ
ಬೆಂಗಳೂರು, ಅಕ್ಟೋಬರ್ 02: ತಮ್ಮ ವಿರುದ್ಧ ದಾಖಲಾಗಿದ್ದ ಲೈಂಗಿಕ ಪ್ರಕರಣದ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದೆ. ಜೊತೆಗೆ ಅವರನ್ನು ಬಂಧಿಸದಂತೆ ಸೂಚನೆ ಸಹ ನೀಡಿದೆ.
ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಪರ ವಕೀಲರ ವಿಸ್ತೃತ ವಾದ ಆಲಿಸಿದ ಹೈಕೋರ್ಟ್ನ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನವೆಂಬರ್ 14 ಕ್ಕೆ ಮುಂದೂಡಿದೆ.
ತಮ್ಮ ವಿರುದ್ಧ ಶ್ರುತಿ ಹರಿಹರನ್ ದಾಖಲಿಸಿದ್ದ ಲೈಂಗಿಕ ಕಿರುಕುಳ ದೂರಿಗೆ ಪೊಲೀಸರು ಹೂಡಿದ್ದ ಎಫ್ಐಆರ್ ಅನ್ನು ರದ್ದು ಮಾಡಬೇಕು ಎಂದು ನಟ ಅರ್ಜುನ್ ಸರ್ಜಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಲಾಯಿತು.
ಅರ್ಜುನ್ ಸರ್ಜಾ ಪರ ವಕೀಲ ಆಚಾರ್ಯ ಹಾಗೂ ಶ್ರುತಿ ಪರ ವಕೀಲ ಬಾಲನ್ ಅವರು ತಮ್ಮ ವಾದಗಳನ್ನು ಮಂಡಿಸಿದರು. ಇಂದಿನ ಕೋರ್ಟ್ ಅವಧಿ ಮುಗಿದ ಕಾರಣ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಲಾಯಿತು. ಈ ಪ್ರಕರಣದಲ್ಲಿ ಆತುರ ಬೇಡ ಎಂದು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.
ಯಾರನ್ನೂ ಬಂಧಿಸುವುದು ಬೇಡ
ಮೂರು ವರ್ಷ ಕಾಲ ಹಳೆಯ ಕೇಸು ಇದಾಗಿರುವ ಕಾರಣ ವಿಚಾರಣೆ ಮುಗಿಯುವವರೆಗೆ ಯಾರನ್ನೂ ಬಂಧಿಸಬಾರದು ಎಂದು ನ್ಯಾಯಾಲಯವು ಮಧ್ಯಂತರ ಆದೇಶ ನೀಡಿದೆ. ಆದರೆ ತನಿಖೆಗೆ ತಡೆ ನೀಡಲು ನಿರಾಕರಿಸಿದೆ. ಪ್ರಕರಣದಲ್ಲಿ ಯಾವುದೇ ತರಾತುರಿ ಬೇಡ ಎಂದು ಹೈಕೋರ್ಟ್ ಹೇಳಿದೆ.
ಫೇಸ್ಬುಕ್ ದೂರಿಗೆ ಠಾಣೆ ದೂರಿಗೂ ವ್ಯತ್ಯಾಸ
ಮೀಟೂ ಅಭಿಯಾನದಲ್ಲಿ ಭಾಗಿಯಾಗಿ ಹೆಸರು ಮಾಡಬೇಕೆಂಬ ಆಸೆಯಿಂದ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಹೆಸರನ್ನು ಬಳಸಿಕೊಂಡಿದ್ದಾರೆ. ಅಲ್ಲದೆ ಅವರು ಮೊದಲಿಗೆ ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ಗೂ ಆ ನಂತರ ಪೊಲೀಸರಿಗೆ ನೀಡಿದ ದೂರಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಸರ್ಜಾ ಪರ ವಕೀಲ ಆಚಾರ್ಯ ಹೇಳಿದರು.
'ಸಿಕ್ಕಿಹಾಕಿಸಬೇಕು ಎಂದು ದೂರು ನೀಡಿರುವ ಶ್ರುತಿ'
ಶ್ರುತಿ ಅವರು ಐಪಿಸಿ ಸೆಕ್ಷನ್ ಓದಿ, ವಕೀಲರ ಸಹಾಯ ತೆಗೆದುಕೊಂಡು ದೂರು ನೀಡಿದ್ದಾರೆ, ಇದನ್ನು ಅವರೇ ಹೇಳಿಕೆಯಲ್ಲಿ ನೀಡಿದ್ದಾರೆ. ಶ್ರುತಿ ಅವರು ಸರ್ಜಾ ಅವರನ್ನು ಕೇಸಿನಲ್ಲಿ ಸಿಕ್ಕಿ ಹಾಕಿಸಬೇಕೆಂದೇ ಅವರು ಈ ಆರೋಪ ಹೊರಿಸಿರುವುದು ಇದರಿಂದ ಖಾತ್ರಿ ಆಗುತ್ತದೆ ಎಂದು ಆಚಾರ್ಯ ವಾದ ಮಂಡಿಸಿದ್ದಾರೆ.
ಏಕಾಂತದಲ್ಲಿ ನಡೆದಿರುವ ಘಟನೆ ಅಲ್ಲ
ಶ್ರುತಿ ಅವರು ಫೇಸ್ಬುಕ್ನಲ್ಲಿ ಮಾಡಿದ ಆರೋಪ ಮತ್ತು ಆ ಘಟನೆ ನಡೆದಿರುವುದು ಏಕಾಂತದಲ್ಲಲ್ಲ, ಸಿನಿಮಾದ ದೃಶ್ಯದ ತಾಲೀಮಿನ ವೇಳೆ ಆ ಘಟನೆ ನಡೆದಿದೆ ಎಂದಿದ್ದಾರೆ. ಲೈಂಗಿಕ ದೌರ್ಜನ್ಯ ಎಂದರೆ ಬಲವಂತಪಡಿಸುವುದು, ಲೈಂಗಿಕವಾಗಿ ಘಾಸಿಗೊಳಿಸುವುದು, ಲೈಂಗಿಕ ವಿಷಯಗಳನ್ನು ಉದ್ದೇಶಪೂರಕವಾಗಿ ಆಡುವುದು ಇನ್ನಿತರೆ ಆಗುತ್ತದೆ ಇದು ಲೈಂಗಿಕ ದೌರ್ಜನ್ಯ ಆಗುವುದಿಲ್ಲ ಎಂದೂ ಸಹ ಆಚಾರ್ಯ ವಾದ ಮಾಡಿದರು.
'ಲೈಂಗಿಕ ಕಿರುಕುಳ ನೀಡಿರುವುದು ನಿಜ'
ತಮ್ಮ ವಾದ ಮಂಡಿಸಿದ ಶ್ರುತಿ ಹರಿಹರನ್ ಬಾಲನ್ ಅವರು, ಅರ್ಜುನ್ ಸರ್ಜಾ ಅವರು ತಮ್ಮ ಕಕ್ಷೀದಾರರಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜ, ಈಗಾಗಲೇ ಮಹಜರ್ ಆಗಿದೆ, ಪೊಲೀಸರು ಚಾರ್ಜ್ ಶೀಟ್ ಸಲ್ಲಲಿಸುವವರೆಗೆ ಎಫ್ಐಆರ್ ರದ್ದು ಮಾಡಬಾರದು. ಸರ್ಜಾ ಪ್ರಭಾವಿ ವ್ಯಕ್ತಿ ಆಗಿರುವ ಕಾರಣ ಅವರು ಸಾಕ್ಷಿ ಮೇಲೆ ಪ್ರಭಾವ ಬೀರಬಹುದು ಎಂದು ಸಹ ಅವರು ವಾದ ಮಂಡಿಸಿದರು.
ಸರ್ಜಾ ಅವರಿಗೆ ಬಂಧನ ಭೀತಿ ಇಲ್ಲ
ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸರ್ಜಾ ಅವರು ಬಂಧನ ಭೀತಿಯಿಂದ ಹೊರಬಂದಿದ್ದಾರೆ. ಆದರೆ ಅವರನ್ನು ಪೊಲೀಸರು ವಿಚಾರಣೆಗೆ ಕರೆಯಬಹುದಾಗಿದೆ. ಎಫ್ಐಆರ್ ರದ್ದಾಗಿದ್ದರೆ ವಿಚಾರಣೆ ಸಹ ಎದುರಿಸುವ ಅವಶ್ಯಕತೆ ಇರಲಿಲ್ಲ.