ಅರ್ಜುನ್ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಂಚು : ಶ್ರುತಿ ವಿರುದ್ಧ ಕ್ರಿಮಿನಲ್ ದೂರು
ಬೆಂಗಳೂರು, ಅಕ್ಟೋಬರ್ 25 : ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ನಟಿ ಶ್ರುತಿ ಹರಿಹರನ್ ವಿರುದ್ಧ 5 ಕೋಟಿಯ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವುದರೊಂದಿಗೆ, ನಟ ಅರ್ಜುನ್ ಸರ್ಜಾ ಅವರು ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಿದ್ದಾರೆ.
ಇನ್ಫಾರ್ಮೇಶನ್ ಟೆಕ್ನಾಲಜಿ ಆಕ್ಟ್ 2000ರ ಸೆಕ್ಷನ್ 66(ಸಿ), 66(ಡಿ) ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 385, 34, 419, 114, 420 ಅಡಿಯಲ್ಲಿ ಶ್ರುತಿ ಹರಿಹರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಶ್ರೀರಾಮ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆಯ ಶಿವ ಅರ್ಜುನ್ ಎಂಬುವವರು ಈ ದೂರನ್ನು ದಾಖಲಿಸಲಿಸಿದ್ದಾರೆ.
ಶ್ರುತಿ ವಿರುದ್ಧ ಅರ್ಜುನ್ 5 ಕೋಟಿ ರು. ಆಗ್ರಹಿಸಿ ಮಾನನಷ್ಟ ಮೊಕದ್ದಮೆ
ಅರುಣ್ ವೈದ್ಯನಾಥನ್ ನಿರ್ದೇಶನದ 'ವಿಸ್ಮಯ' ಚಿತ್ರದ ಚಿತ್ರೀಕರಣ ಸಮಯದಲ್ಲಿ ಶ್ರುತಿ ಹರಿಹರನ್ ಮೇಲೆ ನಡೆದಿದೆಯೆನ್ನಲಾದ ಲೈಂಗಿಕ ಕಿರುಕುಳದ ಆರೋಪ, ಸಣ್ಣಗೆ ಆರಂಭವಾಗಿದ್ದು, ಬೆಂಕಿಗೆ ಕೆಲವರು ತುಪ್ಪ ಸುರಿದಿದ್ದರಿಂದ ಭಾರೀ ಜ್ವಾಲೆಯಾಗಿ ಪರಿಣಮಿಸಿದೆ. ಇದು ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಅವರಿಬ್ಬರ ವ್ಯಕ್ತಿತ್ವವನ್ನು ದಹಿಸುತ್ತಿದೆ.
35 ವರ್ಷಗಳ ಕಾಲ ಚಿತ್ರರಂಗದಲ್ಲಿ ಚಿತ್ರನಟರಾಗಿ ರಂಜನೆ ನೀಡಿರುವ ಅರ್ಜುನ್ ಸರ್ಜಾ ಮತ್ತು 30 ವರ್ಷದ ಚಿತ್ರನಟಿ ಶ್ರುತಿ ಹರಿಹರನ್ ಅವರಿಬ್ಬರೂ ಈ ಪ್ರಕರಣವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿದ್ದು, ಸದ್ಯಕ್ಕೆ ಅಂಬರೀಶ್ ಎದುರಿಗೆ ಸಂಧಾನದ ಹಂತಕ್ಕೆ ಬಂದು ನಿಂತಿದೆ. ಆದರೆ, ಅಷ್ಟರಲ್ಲಿಯೇ ಅರ್ಜುನ್ ಸರ್ಜಾ ಅವರು ಸಿವಿಲ್ (ಮಾನನಷ್ಟ ಮೊಕದ್ದಮೆ) ಮತ್ತು ಕ್ರಿಮಿನಲ್ (ಒಳಸಂಚು, ವಂಚನೆ ಮತ್ತಿತರ ಆರೋಪ) ಮೊಕದ್ದಮೆಯನ್ನು ಶ್ರುತಿ ಹರಿಹರನ್ ವಿರುದ್ಧ ಹೂಡಿದ್ದಾರೆ.
ಶ್ರುತಿ ಹರಿಹರನ್ ಅವರ ವಿರುದ್ಧ ದೂರಿನ ಸಾರಾಂಶ
ಶ್ರುತಿ ಹರಿಹರನ್ ಅವರು ಇತರರೊಂದಿಗೆ ಒಟ್ಟಾರೆಯಾಗಿ ಒಳಸಂಚು ರೂಪಿಸಿ, ಪ್ರಚೋದಿಸಿ ಅರ್ಜುನ್ ಸರ್ಜಾ ಮತ್ತು ಅವರ ಕುಟುಂಬದ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಏಕೋದ್ದೇಶದಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ವಾಟ್ಸಾಪ್ ಗಳಲ್ಲಿ ಅವಹೇಳನಕಾರಿ ಮಾಹಿತಿಯನ್ನು ಪೋಸ್ಟ್ ಮಾಡಿ, ಸಾರ್ವಜನಿಕ ವಲಯದಲ್ಲಿ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ್ದಾರೆ.
ಸೈಬರ್ ಕ್ರೈಂಗೆ ವಿಚಾರಣೆ ವರ್ಗಾವಣೆ
ಶಿವ ಅರ್ಜುನ್ ಅವರು ನೀಡಿರುವ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಇದನ್ನು ಸೈಬರ್ ಕ್ರೈಂ ಪೊಲೀಸರಿಗೆ ವಿಚಾರಣೆಗಾಗಿ ವರ್ಗಾವಣೆ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಲು ನಿರಾಕರಿಸಿದಲ್ಲಿ ಸಿಆರ್ ಪಿಸಿಯ ಕಲಂ 157ರ ಅಡಿಯಲ್ಲಿ ಕಾರಣ ದಾಖಲಿಸಬೇಕು ಎಂದು ಆದೇಶಿಸಲಾಗಿದೆ.
ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು
ಈ ಸಂಚಿನಲ್ಲಿ ಇಬ್ಬರು ಹಿರಿಯ ನಟರು ಕೂಡ ಭಾಗಿ
ಈ ಬಗ್ಗೆ ಮಾಧ್ಯಮಗಳಿಗೆ ಹೆಚ್ಚಿನ ವಿವರಗಳನ್ನೂ ನೀಡಿರುವ ಉದ್ಯಮಿ ಮತ್ತು ಅರ್ಜುನ್ ಸರ್ಜಾ ಅವರ ಹಿತೈಷಿ ಪ್ರಶಾಂತ್ ಸಂಬರ್ಗಿ ಅವರು, ಈ ಸಂಚಿನಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ನಟರು ಕೂಡ ಭಾಗಿಯಾಗಿದ್ದು, ಬೆಂಗಳೂರು, ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಹಣದ ವಹಿವಾಟವೂ ನಡೆದಿದೆ. ಸದ್ಯಕ್ಕೆ ಆ ನಟರು ಯಾರೆಂದು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಸರ್ಜಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳಸಂಚು: ಸ್ಫೋಟಕ ಸುದ್ದಿ ನೀಡಿದ ಪ್ರಶಾಂತ್ ಸಂಬರ್ಗಿ
ಶ್ರುತಿ ಹರಿಹನ್ ಅವರು ಏನೆಂದು ಆರೋಪಿಸಿದ್ದಾರೆ?
ಲೂಸಿಯಾ, ರಾಟೆ, ಸವಾರಿ2, ದ್ಯಾವ್ರೆ, ವಿಸ್ಮಯ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟಿ, ನೃತ್ಯಗಾರ್ತಿಯಾಗಿರುವ ಶ್ರುತಿ ಹರಿಹರನ್ ಅವರು, ವಿಸ್ಮಯ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ರಿಹರ್ಸಲ್ ಮಾಡುವಾಗ ಕಲೆ ಮತ್ತು ಕಾಮದ ನಡುವಿನ ಗೆರೆಯನ್ನು ಮೀರಿದ್ದರು, ಅನಗತ್ಯವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ತಬ್ಬಿಕೊಳ್ಳುತ್ತಿದ್ದರು, ಅನುಮತಿ ಇಲ್ಲದೆ ಬೆನ್ನ ಮೇಲೆಲ್ಲ ಕೈಯಾಡಿಸುತ್ತಿದ್ದರು. ಈ ದೈಹಿಕ ಕಿರುಕುಳದಿಂದಾಗಿ ಬೇಸತ್ತು ನಾನು ರಿಹರ್ಸಲ್ಲಿಗೆ ಹೋಗುತ್ತಿರಲಿಲ್ಲ. ಅನೇಕ ಬಾರಿ ರೆಸಾರ್ಟಿಗೆ ಬಾ ಎಂದು ಕೂಡ ಪೀಡಿಸುತ್ತಿದ್ದರು ಎಂದೇಲ್ಲ ಆರೋಪಗಳ ಸುರಿಮಳೆ ಸುರಿಸಿದ್ದಾರೆ.