ಮಳೆ ಅನಾಹುತಗಳ ತುರ್ತು ಕಾರ್ಯಾಚರಣೆಗೆ ಏರಿಯಾ ಮ್ಯಾಪಿಂಗ್
ಬೆಂಗಳೂರು, ಮೇ 1: ಬೆಂಗಳೂರಿನಲ್ಲಿ ಕಳೆದ ಎರಡು ದಿನ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿಯಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಅನಾಹುತಗಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಮೇಯರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೂಡಲೆ ತೆಗೆದುಕೊಳ್ಳಬೇಕಾಗಿದೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಲು ಆಯುಕ್ತರ ನೇತೃತ್ವದಲ್ಲಿ "ಟಾಸ್ಕ್ ಪೋರ್ಸ್" ರಚನೆ ಮಾಡುವಂತೆ ಆಯುಕ್ತರಿಗೆ ಆರ್.ಅಶೋಕ್, ಮೇಯರ್ ಗೌತಮ್ ಕುಮಾರ್ಗೆ ಸೂಚನೆ ನೀಡಿದರು.
ಕರ್ನಾಟಕದಲ್ಲಿ 49 ತಾಲೂಕುಗಳು ಬರ ಪೀಡಿತ; ಆರ್ ಅಶೋಕ್
ಪ್ರಮುಖವಾಗಿ ತಗ್ಗು ಪ್ರದೇಶ ಹಾಗೂ ಪ್ರವಾಹ ಉಂಟಾಗುವ ಪ್ರದೇಶಗಳನ್ನು ಬಣ್ಣದ ಆಧಾರದಮೇಲೆ(ಕೆಂಪು, ಕಿತ್ತಳೆ, ಹಳದಿ ಹಾಗೂ ಹಸಿರು) ಗುರುತಿಸಿ ಮ್ಯಾಪಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ 60 ಮಿ.ಮೀ, 80 ಮಿ.ಮೀ, 100 ಮಿ.ಮೀ, 120 ಮಿ.ಮೀ ಮಳೆ ಬಂದರೆ ಯಾವ ಪ್ರದೇಶಗಳು ಜಲಾವೃತಗೊಳ್ಳುತ್ತವೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಿ ಮ್ಯಾಪಿಂಗ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಆರ್ ಅಶೋಕ್ ತಿಳಿಸಿದರು.
63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿ
ಮಳೆಗಾಲದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಈಗಾಗಲೇ ಪಾಲಿಕೆ ಕೇಂದ್ರ ಕಛೇರಿ ಹಾಗೂ ವಲಯ ಕೇಂದ್ರ ಕಛೇರಿಗಳು ಸೇರಿದಂತೆ ಒಟ್ಟು 9 ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, ಅದರ ಜೊತೆಗೆ ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಬಂಧ ನಿಯಂತ್ರಿಣ ಕೊಠಡಿಗಳ ಸಮರ್ಪಕ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲು ಸೂಚಿಸಲಾಗಿದೆ. ಅಲ್ಲದೆ ಮಳೆಯಿಂದ ಜಲಾವೃತಗೊಳ್ಳುವ ಪ್ರದೇಶದಲ್ಲಿ ತುರ್ತಾಗಿ ನೀರನ್ನು ಹೊರಹಾಕಲು 16 ಹೈ ಪ್ರಶರ್ ಪಂಪ್ ಹಾಗೂ 2 ತಳ್ಳುವ ಪಂಪ್ಗಳು ಇವೆ ಎಂದು ಅಶೋಕ್ ತಿಳಿಸಿದರು.
28 ತಂಡಗಳು ಕಾರ್ಯನಿರ್ವಹಿಸುತ್ತಿವೆ
ಮಳೆಗಾದಲ್ಲಿ ಧರೆಗುರುಳುವ ಮರ, ರೆಂಬೆಗಳನ್ನು ಕೂಡಲೆ ತೆರವುಗೊಳಿಲು 28 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಅಪಾಯ ಸ್ಥಿಯಲ್ಲಿರುವ, ಒಣ ಮರಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಅಪಾಯ ಸ್ಥಿಯಲ್ಲಿರುವ, ಒಣ ಮರಗಳು ಎಲ್ಲೆಲ್ಲಿವೆ ಎಂದು ಸಮೀಕ್ಷೆ ನಡೆಸಿ ಅದನ್ನು ತೆರವುಗೊಳಿಸಲು ಎಷ್ಟು ವೆಚ್ಚವಾಗಲಿದೆ ಎಂಬ ಅಂದಾಜು ಪಟ್ಟಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ಹೇಳಿದರು.
ಸಿಬ್ಬಂದಿ ಜೊತೆ ಸಮನ್ವಯ ಸಭೆ ನಡೆಸಬೇಕು
ನಮ್ಮ ಪಾಲಿಕೆ, ಬೆಸ್ಕಾಂ, ಅಗ್ನಿ ಶಾಮಕ ಹಾಗೂ ಬಿ.ಡಬ್ಲ್ಯೂ.ಎಸ್.ಎಸ್.ಬಿ(ಜಲಮಂಡಳಿ) ಸಿಬ್ಬಂದಿ ಜೊತೆ ಸಮನ್ವಯ ಸಭೆ ನಡೆಸಬೇಕು. ರಾಜಕಾಲುವೆಯ Bottle Neck ಪ್ರದೇಶಗಳಲ್ಲಿ ಕಾಲುವೆ ತೆರವಿಗೆ ಕೂಡಲೆ ಕ್ರಮ ಕೈಗೊಳ್ಳಬೇಕು. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದ ಸಂದರ್ಭದಲ್ಲಿ ಅವರಿಗೆ ಸಮುದಾಯ ಭವನಗಳಲ್ಲಿ ಆಶ್ರಯ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ
ರಸ್ತೆ ಬದಿಯ Shoulder Drain / Side Drain ಗಳಲ್ಲಿ ಕಸ ಕಡ್ಡಿ ಸಂಗ್ರಹವಾಗಿ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ Shoulder Drain / Side Drain ಗಳಲ್ಲಿ ಕೂಡಲೆ ಕಸ/ಕಡ್ಡಿ, ಹೂಳನ್ನು ತೆರವುಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತೆರವುಗೊಳಿಸದೇ ಇರುವ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಅದಲ್ಲದೆ ಮಿಸ್ಸಿಂಗ್ ಸ್ಲ್ಯಾಬ್ಸ್ ಇಲ್ಲದಿರುವುದನ್ನು ಪತ್ತೆ ಮಾಡಿ ಕೂಡಲೆ ದುರಸ್ತಿಪಡಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ