ಪಟಾಕಿಯಿಂದ ಜೀವವೂ ಹೋಗಬಹುದಾ?: 5 ಪ್ರಶ್ನೆಗಳಿಗೆ ವೈದ್ಯರ ಉತ್ತರ
"ಪಟಾಕಿಯಿಂದ ಪರಿಸರದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆ ಆಗುತ್ತದೆ. ವರ್ಷದಲ್ಲಿ ಎರಡು ದಿನ ಪಟಾಕಿ ಹೊಡೆಯುವುದರಿಂದ ಏನೂ ಆಗಲ್ಲ ಅಂತ ವಾದ ಮಾಡುವವರಿದ್ದಾರೆ. ಆದರೆ ವರ್ಷವಿಡೀ ವಾಹನದಿಂದ ಆಗುವ ಮಾಲಿನ್ಯಕ್ಕೆ ಪಟಾಕಿಯು ಮತ್ತಷ್ಟು ಕೊಡುಗೆ ನೀಡುತ್ತದೆ ಎಂಬುದು ಕಾಳಜಿ. ಪಟಾಕಿಯಿಂದ ಆಗುವ ಪ್ರಮುಖ ಆರೋಗ್ಯ ಸಮಸ್ಯೆ ಅಂದರೆ ಶ್ವಾಸಕೋಶಕ್ಕೆ."
ದೀಪಾವಳಿ: ಮಹಾರಾಷ್ಟ್ರದಲ್ಲೂ ಪಟಾಕಿ ಮಾರುವಂತಿಲ್ಲ
-ಬೆಂಗಳೂರಿನ ಹನುಮಂತನಗರದಲ್ಲಿ ಕ್ಲಿನಿಕ್ ನಡೆಸುವ ವೈದ್ಯ ರಘು ಅವರನ್ನು ಒನ್ಇಂಡಿಯಾ ಕನ್ನಡದಿಂದ ಸಂದರ್ಶನ ಮಾಡಲಾಗಿದೆ. ದೀಪಾವಳಿಯಲ್ಲಿ ಆಗುವ ಸಮಸ್ಯೆಗಿಂತ ಹೆಚ್ಚಾಗಿ ಪಟಾಕಿಯಿಂದ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದರು. ಈ ದೇಶದಲ್ಲಿ ದೀಪಾವಳಿಗೆ ಮಾತ್ರ ಪಟಾಕಿ ಹೊಡೆಯಲ್ಲ. ಶವ ಮೆರವಣಿಗೆ, ಮದುವೆ, ವಿಜಯೋತ್ಸವ, ತೇರು, ರಥೋತ್ಸವ...ಯಾವುದಕ್ಕೆ ಪಟಾಕಿ ಹೊಡೆಯಲ್ಲ ಹೇಳಿ?
ದೆಹಲಿಯಲ್ಲಿ ಪಟಾಕಿ ಬ್ಯಾನ್ : ಸುಪ್ರೀಂಕೋರ್ಟ್ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ
ಅಡ್ಡ ಗೆರೆ ಎಳೆದಂತೆ ದೀಪಾವಳಿಯಲ್ಲಿ ಅಂದರೆ ನವೆಂಬರ್ ಒಂದರವರೆಗೆ ಪಟಾಕಿ ನಿಷೇಧ ಮಾಡಲಾಗಿದೆ ಅಂದರೆ, ಆ ನಂತರ ಬರುವ ಕ್ರಿಸ್ ಮಸ್ ಮತ್ತೊಂದಕ್ಕೆ ಪಟಾಕಿ ಹೊಡೆಯಬಹುದು ಅಂತಾಗಲಿಲ್ಲವೆ? ಕೋರ್ಟ್ ಆದೇಶ ಪ್ರಶ್ನೆ ಮಾಡುವುದು ನನ್ನ ಉದ್ದೇಶವಲ್ಲ. ಆದರೆ ಪರಿಸರಕ್ಕೆ ಹಾನಿಕಾರಕವಾದ ಪಟಾಕಿಯನ್ನೇ ನಿಷೇಧಿಸಬೇಕು. ಅದು ದೀಪಾವಳಿಯಲ್ಲಿ ಮಾತ್ರ ನಿಷೇಧ ಮಾಡುವುದಲ್ಲ ಎನ್ನುತ್ತಾರೆ ಡಾ.ರಘು.
ರಘು ಅವರೊಂದಿಗೆ ಸಂದರ್ಶನ ಇಲ್ಲಿದೆ.
ಪ್ರಶ್ನೆ: ಪಟಾಕಿಯಲ್ಲಿರುವ ಅಪಾಯಕಾರಿ ಅಂಶಗಳೇನು?
ರಘು: ಸಲ್ಫರ್ ಡಯಾಕ್ಸೈಡ್, ಕ್ಯಾಡ್ಮಿಯಮ್, ಕಾಪರ್, ಲೆಡ್, ಮ್ಯಾಗ್ನಿಷಿಯಂ, ನೈಟ್ರೇಟ್, ನೈಟ್ರೈಟ್ ಇವೆಲ್ಲ ಇರುತ್ತವೆ. ಇನ್ನು ಬೆಂಕಿ ಹೊತ್ತಿಸುವುದರಿಂದ ಅದು ವಾತಾವರಣದಲ್ಲಿರುವ ಆಮ್ಲಜನಕವನ್ನು ಎಳೆದುಕೊಳ್ಳುತ್ತದೆ. ಇನ್ನು ಈಗಾಗಲೇ ಹೇಳಿದ ರಾಸಾಯನಿಕಗಳು ಬಹಳ ಅಪಾಯಕಾರಿ.
ಪ್ರಶ್ನೆ: ಈ ರಾಸಾಯನಿಕಗಳಿಂದ ದೇಹದ ಮೇಲೆ ಆಗುವ ಪರಿಣಾಮಗಳೇನು?
ರಘು: ಮೊದಲನೆಯದಾಗಿ ಮತ್ತು ಮುಖ್ಯವಾಗಿ ಶ್ವಾಸಕೋಶದ ಸಮಸ್ಯೆಯಾಗುತ್ತದೆ. ಅದರಲ್ಲೂ ಆಸ್ತಮಾದಂಥ ಸಮಸ್ಯೆ ಇರುವವರಿಗೆ ಇದರಿಂದ ಇನ್ನಷ್ಟು ತೊಂದರೆ. ಚರ್ಮ ಹಾಗೂ ಕಣ್ಣಿನ ಸಮಸ್ಯೆಯೂ ಇದರ ಜತೆಗೆ ಬರುತ್ತದೆ. ಇನ್ನು ಮಕ್ಕಳ ವಿಚಾರ ಹೇಳೋದಾಯ್ತು ಅಂದರೆ, ಪ್ರತಿ ವರ್ಷ ಅದೆಷ್ಟು ಮಕ್ಕಳು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ?
ಹೂ ಕುಂಡ ಅಪಾಯಕಾರಿ ಅಲ್ಲ ಅನ್ನೋದು ಬಹುತೇಕರ ವಾದ. ಅದರ ಹೊಗೆ, ಬೆಂಕಿ ಹಾಗೂ ಕೆಲವೊಮ್ಮೆ ಅದು ಸಿಡಿದು ಆಗುವ ಅನಾಹುತ ಯಾವ ಪ್ರಮಾಣದ್ದು ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿದೆಯಾ?
ಪ್ರಶ್ನೆ: ದೀಪಾವಳಿಗೆ ಮಾತ್ರ ಪಟಾಕಿ ನಿಷೇಧಿಸಬೇಕಾ?
ರಘು: ವರ್ಷದ ಎಲ್ಲ ಕಾಲದಲ್ಲೂ ಪಟಾಕಿ ನಿಷೇಧಿಸಬೇಕಾಗುತ್ತದೆ. ಶವ ಮೆರವಣಿಗೆ ಮಾಡುವಾಗಲೂ ಪಟಾಕಿ ಹೊಡೆಯುತ್ತಾರೆ.ವಿಜಯೋತ್ಸವ, ಮದುವೆ, ತೇರು, ರಥೋತ್ಸವ, ಕ್ರಿಸ್ ಮಸ್, ಮೊಹರಂ...ಎಲ್ಲದರಲ್ಲೂ ಪಟಾಕಿಯನ್ನು ನಿಷೇಧಿಸಬೇಕು. ಪಟಾಕಿ ಯಾವ ತಿಂಗಳು, ಹಬ್ಬಕ್ಕೆ ಹೊಡೆದರೂ ಅದು ಅಪಾಯಕಾರಿ.
ಕೆಲವು ಸಾವಿರದಷ್ಟು ಮಂದಿ ಇದೇ ಉದ್ಯಮ ನಂಬಿಕೊಂಡು ಬದುಕುತ್ತಿರುವವರು ಇರಬಹುದು. ಅವರಿಗೆ ಸರಕಾರ ಪರ್ಯಾಯವಾದ ವ್ಯವಸ್ಥೆ ಮಾಡಿಕೊಡಲಿ.
ಪ್ರಶ್ನೆ: ಹಾಗಿದ್ದರೆ ಪರಿಸರಸ್ನೇಹಿ ದೀಪಾವಳಿ ಮಾಡುವುದು ಹೇಗೆ?
ರಘು: ಈ ಬಗ್ಗೆ ವಿಜ್ಞಾನಿಗಳೇ ಸಂಶೋಧನೆ ಮಾಡಬೇಕು. ಪರಿಸರಕ್ಕೆ ಅತ್ಯಂತ ಕಡಿಮೆ ಹಾನಿಯಾಗುವ, ಜನ ಸಾಮಾನ್ಯರಿಗೆ ಕೈಗೆ ಎಟುಕಿಸುವ, ಶಬ್ದ ಮಾಲಿನ್ಯವೂ ಹೆಚ್ಚು ಮಾಡದಂಥ ಪಟಾಕಿಗಳನ್ನು ರೂಪಿಸಬೇಕು. ಇನ್ನೂ ಒಂದು ಮಾತು. ಚೀನಾದಿಂದ ಬರುತ್ತಿರುವ ಪಟಾಕಿಗಳು ನಮ್ಮ ದೇಶದ ಮೇಲೆ ನಡೆಸುತ್ತಿರುವ ಪರೋಕ್ಷ ಯುದ್ಧ.
ನೇರವಾದ ಯುದ್ಧ ಮಾಡಿದರೆ, ಹತ್ತು ದಿನ ಯುದ್ಧ ಮಾಡಿದರೆ ಆ ಎರಡು ದೇಶಗಳ ಅಭಿವೃದ್ಧಿ ಎಪ್ಪತ್ತು ವರ್ಷಗಳ ಕಾಲ ಹಿಂದೆ ಹೋದಂತೆ ಆಗುತ್ತದೆ. ಆ ಕಾರಣಕ್ಕೆ ಅಲ್ಲಿನ ಪಟಾಕಿ ಇಲ್ಲಿಗೆ ರವಾನಿಸಿ, ನಮ್ಮ ದೇಶದ ಯುವ ಜನಾಂಗದ ಆರೋಗ್ಯ ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ನಾವು ಎಚ್ಚರವಾಗಬೇಕು.
ಪ್ರಶ್ನೆ: ಹೊಸ ರೀತಿ ಪಟಾಕಿ ಕಂಡುಹಿಡಿಯುವುದು ದೀರ್ಘಾವಧಿ ಪರಿಹಾರ, ತಾತ್ಕಾಲಿಕವಾಗಿ ಏನು ಮಾಡಬಹುದು?
ರಘು: ಸರಕಾರದಿಂದ ನಿಯಮಾವಳಿ ರೂಪಿಸಿ, ಪ್ರಮಾಣ ಪತ್ರಗಳನ್ನು ವಿತರಿಸಬೇಕು. ಅಂಥ ಕಂಪನಿಯಿಂದ ಮಾತ್ರ ಪಟಾಕಿ ತಯಾರಿ ಹಾಗೂ ಮಾರಾಟ ಆಗಬೇಕು. ಅಧಿಕೃತವಾದ ಮಾರಾಟಗಾರರೇ ಮಾರಬೇಕು. ಟೀ ಅಂಗಡಿಯಿಂದ ದಿನಸಿ ಅಂಗಡಿವರೆಗೆ ಎಲ್ಲರೂ ಪಟಾಕಿ ಮಾರುತ್ತಿದ್ದಾರೆ. ಅದು ನಿಲ್ಲಬೇಕು. ಈಗ ಜನರಿಗೆ ಯಾವುದು ಅಧಿಕೃತ ಕಂಪನಿಯ ಪಟಾಕಿ ಎಂದು ಹೇಗೆ ಗೊತ್ತಾಗುತ್ತದೆ?
ಇನ್ನೊಂದು ಮಾತು, ನಿಶ್ಶಕ್ತರಾದವರು, ದುರ್ಬಲ ಶ್ವಾಸಕೋಶ ಇರುವವರು, ರೋಗ ನಿರೋಧಕ ಶಕ್ತಿಯೇ ಕಡಿಮೆ ಇರುವವರಿಗೆ ಪಟಾಕಿಯಿಂದ ಉಂಟಾಗುವ ಮಾಲಿನ್ಯ ವಿಪರೀತವಾಗಿ ವಿರಳಾತಿವಿರಳ ಅನ್ನೋ ಹಾಗೆ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಯಿರುತ್ತದೆ. ಏಕೆಂದರೆ, ಆಮ್ಲಜನಕದ ಕೊರತೆ ಉಂಟಾಗುವುದೇ ಪಟಾಕಿಯಿಂದ. ಆ ರೀತಿ ಒಂದೋ ಎರಡೋ ಜೀವ ಹೋದರೂ ಅದೇನು ಕ್ಷಮಿಸುವಂಥ ತಪ್ಪು ಖಂಡಿತಾ ಅಲ್ಲ.