ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿ.ಎಸ್ ಪರಮಶಿವಯ್ಯ ನೇಮಕ
ಬೆಂಗಳೂರು, ನವೆಂಬರ್ 24: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬಿ.ಎಸ್ ಪರಮಶಿವಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಉತ್ತರ ಕರ್ನಾಟಕದ ವೀರಶೈವ ಶಾಸಕರೊಬ್ಬರಿಗೆ ಅವಕಾಶ ಕೊಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮುಂದಾಗಿದ್ದರು. ಆದರೆ ಅಭಿವೃದ್ಧಿ ನಿಗಮದ ಅಧ್ಯಕ್ಷಗಿರಿಯನ್ನು ಬಿಜೆಪಿ ಶಾಸಕ ನಯವಾಗಿ ತಿರಸ್ಕರಿಸಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ; 500 ಕೋಟಿ ಅನುದಾನ
ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಅಧಕ್ಷ ಸ್ಥಾನ ನೀಡಲು ಯಡಿಯೂರಪ್ಪ ಆಸಕ್ತಿ ತೋರಿಸಿದ್ದರು. ಸ್ವತಃ ಮುಖ್ಯಮಂತ್ರಿಯೇ ದೂರವಾಣಿ ಕರೆ ಮಾಡಿ ನಿಗಮದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದರು.
ಆದರೆ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷತೆ ಬೇಡ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರಲ್ಲದೇ, ತಮ್ಮ ಬದಲು ವೀರಶೈವ ಸಮುದಾಯದ ಮುಖಂಡ ಬಿ.ಎಸ್ ಪರಮಶಿವಯ್ಯ ಅವರಿಗೆ ನೀಡಲು ವಿನಂತಿಸಿದರು.
ಸಮುದಾಯದ ಅಭಿವೃದ್ಧಿಗೆ 3 ದಶಕಗಳ ಸೇವೆ ಸಲ್ಲಿಸಿರುವ ಪರಮಶಿವಯ್ಯ ಅವರಿಗೆ ಅವಕಾಶ ಕೊಡಿ ಎಂದು ಸಿಎಂ ಬಳಿ ಶಾಸಕ ವೀರಣ್ಣ ಚರಂತಿಮಠ ಮಾಡಿದ ಮನವಿಯನ್ನು ಪುರಸ್ಕರಿಸಿ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಮೊದಲ ಅಧ್ಯಕ್ಷರನ್ನಾಗಿ ಬಿ.ಎಸ್ ಪರಮಶಿವಯ್ಯ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
Recommended Video
ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್ ಪರಮಶಿವಯ್ಯ ಅವರು, ಸಮುದಾಯದ ಕಲ್ಯಾಣಕ್ಕಾಗಿ ಉಚಿತ ಶಿಕ್ಷಣ, ವಸತಿ ನಿಲಯಗಳನ್ನು ನಡೆಸುತ್ತಿದ್ದಾರೆ. ರಾಜ್ಯದ ವಿವಿದೆಡೆಯಲ್ಲೂ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಪರಮಶಿವಯ್ಯಗೆ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅವಕಾಶ ಒದಗಿ ಬಂದಿದೆ.