ವಿಸ್ಟ್ರಾನ್ ಘಟಕಕ್ಕೆ ಪೂರೈಕೆ ನಿಲ್ಲಿಸುವುದೇ ಆ್ಯಪಲ್ ಕಂಪನಿ?
ಬೆಂಗಳೂರು, ಡಿಸೆಂಬರ್ 17: ತೈವಾನ್ ಮೂಲದ ವಿಸ್ಟ್ರಾನ್ ಐಫೋನ್ ತಯಾರಿಕಾ ಘಟಕದಲ್ಲಿ ಈಚೆಗೆ ನಡೆದ ಗಲಭೆ ಹಿನ್ನೆಲೆಯಲ್ಲಿ ಆ್ಯಪಲ್ ತಾತ್ಕಾಲಿಕವಾಗಿ ಘಟಕಕ್ಕೆ ತನ್ನ ಪೂರೈಕೆಯನ್ನು ತಡೆ ಹಿಡಿಯುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ.
Recommended Video
ಬೆಂಗಳೂರು ಸಮೀಪದ ನರಸಾಪುರದಲ್ಲಿರುವ 'ಆ್ಯಪಲ್' ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕ ವಿಸ್ಟ್ರಾನ್ ಮೇಲೆ, ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆಕ್ರೋಶಗೊಂಡ ನೌಕರರು ಡಿ.12ರ ಶನಿವಾರ ದಾಳಿ ನಡೆಸಿದ್ದರು. ಈ ಗಲಭೆಯಲ್ಲಿ ಘಟಕಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಇದೀಗ ಕಂಪನಿಯ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಆ್ಯಪಲ್ ನಿಂದ ಹೆಚ್ಚಿನ ಮಟ್ಟದಲ್ಲಿ ಘಟಕವು ಪೂರೈಕೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಉದ್ಯಮ ವಿಶ್ಲೇಷಕರು ತಿಳಿಸಿದ್ದಾರೆ. ಮುಂದೆ ಓದಿ...
ವಿಸ್ಟ್ರಾನ್ ವ್ಯವಸ್ಥಾಪಕ ನಿರ್ದೇಶಕರಿಂದ ಸರ್ಕಾರಕ್ಕೆ ಪತ್ರ
ಘಟಕದಲ್ಲಿ ನಡೆದ ಗಲಭೆ ಕುರಿತು ಡಿ.14ರಂದು ವಿಸ್ಟ್ರಾನ್ ನ ವ್ಯವಸ್ಥಾಪನಾ ನಿರ್ದೇಶಕ ಸುದೀಪ್ತೊ ಗುಪ್ತಾ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕಂಪನಿಯು ಭಾರತದಲ್ಲಿ 250 ಮಿಲಿಯನ್ ಡಾಲರ್ ನಷ್ಟು ಎಲೆಕ್ಟ್ರಾನಿಕ್ ಉತ್ಪಾದನಾ ಯೋಜನೆ ಹೊಂದಿದ್ದು, ತನ್ನ ಜಾಗತಿಕ ಯೋಜನೆಗಳಿಗೆ ಇದು ಬಹುಮುಖ್ಯವಾಗಿದೆ. ನಮ್ಮ ಘಟಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ನೌಕರರ ಹಿತಾಸಕ್ತಿಗಳಿಗೆ ಬೆಲೆ ಕೊಡುತ್ತೇವೆ. ಆದಷ್ಟು ಬೇಗ ಘಟಕದ ಕಾರ್ಯಾಚರಣೆ ಆರಂಭಿಸಿ ರಾಜ್ಯ ಸರ್ಕಾರದ ಜೊತೆ ಕೈಜೋಡಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಐಫೋನ್ ಕಾರ್ಖಾನೆಯಲ್ಲಿ ದಾಳಿ, 437 ಕೋಟಿ ರೂ. ನಷ್ಟ: ಆ್ಯಪಲ್ ಕಂಪನಿ ಹೇಳಿದ್ದೇನು?
ಆ್ಯಪಲ್ ಬ್ರ್ಯಾಂಡ್ ಇಮೇಜ್ ಗೆ ಧಕ್ಕೆ?
ಮುಂದೆಂದೂ ಇಂಥ ಘಟನೆ ಮರುಕಳಿಸದಂತೆ ರಾಜ್ಯ ಸರ್ಕಾರದೊಂದಿಗೆ ಸಹಕರಿಸಿ ಕೆಲಸ ಮಾಡುತ್ತೇವೆ. ಕಂಪನಿಯು ಪೊಲೀಸ್ ತನಿಖೆಗೂ ಸಹಕರಿಸುತ್ತದೆ ಎಂದು ಸುದೀಪ್ತೊ ಗುಪ್ತಾ ತಿಳಿಸಿದ್ದಾರೆ. ಈ ಘಟನೆಯಿಂದಾಗಿ ವಿಸ್ಟ್ರಾನ್ ಗೆ ಸಾಕಷ್ಟು ಹಾನಿಯಾಗಿದೆ. ಆದರೆ ಇದರ ಹೊರತಾಗಿಯೂ ವೇತನ ಕಡಿತ, ವೇತನ ನೀಡದೇ ಇರುವ ಆರೋಪಗಳು ಗಂಭೀರವೆನಿಸಿದ್ದು, ಆ್ಯಪಲ್ ಬ್ರ್ಯಾಂಡ್ ಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಆ್ಯಪಲ್ ನಿಂದ ಪೂರೈಕೆ ನಿಂತು ನಷ್ಟ ಉಂಟಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ತನಿಖೆ ನಡೆಸುತ್ತಿರುವ ಆ್ಯಪಲ್
ಗಲಭೆ ಹಿನ್ನೆಲೆಯಲ್ಲಿ ಆ್ಯಪಲ್ ಸ್ವಯಂ ತನಿಖೆಯನ್ನೂ ನಡೆಸುತ್ತಿದ್ದು, ನೌಕರರ ವಿಷಯದಲ್ಲಿ ವಿಸ್ಟ್ರಾನ್ ತನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆಯೇ ಎಂಬುದರ ಕುರಿತು ತನಿಖೆಗೆ ತನ್ನ ಸಿಬ್ಬಂದಿಯನ್ನು ನಿಯೋಜಿಸಿದೆ. ಮಾರ್ಗಸೂಚಿ ಉಲ್ಲಂಘನೆ ಕಂಡುಬಂದಲ್ಲಿ ಆ್ಯಪಲ್ ನಿಂದ ವಿಸ್ಟ್ರಾನ್ ಗೆ ನಷ್ಟ ಉಂಟಾಗಲಿದೆ.
ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ; 156 ಮಂದಿ ಬಂಧನ
ಪ್ರತಿಸ್ಪರ್ಧಿಗಳಿಗೆ ಲಾಭ?
ಜೊತೆಗೆ ವಿಸ್ಟ್ರಾನ್ ಗೆ ಪ್ರತಿಸ್ಪರ್ಧಿಗಳಾಗಿದ್ದ ಫಾಕ್ಸ್ ಕಾನ್ ಹಾಗೂ ಪೆಗಟ್ರಾನ್ ಗೂ ಗಲಭೆಯ ಘಟನೆ ಲಾಭವಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ. ಫಾಕ್ಸ್ ಕಾನ್ ಶ್ರೀಪೆರಂಬುದೂರ್ ನಲ್ಲಿ ಘಟಕ ಹೊಂದಿದ್ದು, ಪೆಗಟ್ರಾನ್ 2022ರಲ್ಲಿ ಕಾರ್ಯಾರಂಭ ಮಾಡಲಿದೆ. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಇಲಾಖೆ (Department of Promotion of Industry and Internal Trade -DPIIT) ಕೋಲಾರದಲ್ಲಿ ನಡೆದ ಈ ಘಟನೆ ಕುರಿತು ವಿಚಾರಣೆ ತ್ವರಿತಗೊಳಿಸಲು ಸರ್ಕಾರಕ್ಕೆ ಸೂಚಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು, ನೀತಿ ಆಯೋಗ ಹಾಗೂ ಸರ್ಕಾರದ ಪ್ರತಿನಿಧಿಗಳು ಈ ಕುರಿತು ವರ್ಚುಯಲ್ ಮೀಟಿಂಗ್ ನಡೆಸಿದ್ದಾರೆ.
"ಕಂಪನಿಯ ಪ್ರತಿಷ್ಠೆಗೆ ಧಕ್ಕೆಯಾಗಬಹುದು"
ಗಲಭೆಯಿಂದ ನಷ್ಟವಾಗಿದ್ದು ಒಂದೆಡೆಯಾದರೆ, ಘಟಕ ಸ್ಥಗಿತಗೊಂಡಿರುವುದರಿಂದ ಉತ್ಪಾದನೆ ಮೇಲೆ 8 ರಿಂದ 10%ರಷ್ಟು ಪರಿಣಾಮ ಬೀರಬಹುದು. ಇದರಿಂದ ಆ್ಯಪಲ್ ಆದಾಯಕ್ಕೂ ಕನಿಷ್ಠ ಹಾನಿಯಾಗಲಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆ್ಯಪಲ್ ನ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಕೆಲಸು ಸಂಶೋಧನಾ ಸಂಸ್ಥೆಗಳು ವಿಶ್ಲೇಷಿಸಿವೆ.
'ನೌಕರರ ಕುರಿತಂತೆ ಆ್ಯಪಲ್ ನ ನೀತಿ ನಿಯಮಗಳು ಕಠಿಣವಾಗಿವೆ. ಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲದ ಅಂಶವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕೋಲಾರದ ಘಟಕದಲ್ಲಿ ಐಫೋನ್ SE 2020 ಮತ್ತು ಅದರ ಹಳೆಯ ಮಾದರಿಗಳನ್ನು ತಯಾರಿಸುತ್ತಿದ್ದರೂ, ಐಫೋನ್ 12ಕ್ಕೆ ಭಾರೀ ಬೇಡಿಕೆಯಿದೆ. ಹೀಗಾಗಿ ನಷ್ಟವಾಗದೇ ಇದ್ದರೂ ಕಂಪನಿಯ ಪ್ರತಿಷ್ಠೆಗೆ ಧಕ್ಕೆ ತರಬಹುದು ಎಂದು ಟೆಕ್ ಆರ್ಕ್ ನ ಸಂಸ್ಥಾಪಕ ಹಾಗೂ ಮುಖ್ಯ ವಿಶ್ಲೇಷಕ ಫೈಸಲ್ ಕವೂಸಾ ತಿಳಿಸಿದ್ದಾರೆ.
ಏನಿದು ಘಟನೆ?
ಕೋಲಾರದ ನರಸಾಪುರದಲ್ಲಿರುವ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕ ವಿಸ್ಟ್ರಾನ್ ಮೇಲೆ, ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆಕ್ರೋಶಗೊಂಡ ನೌಕರರು ಡಿ.12ರ ಶನಿವಾರ ದಾಳಿ ನಡೆಸಿದ್ದರು. ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಹಚ್ಚಿ, ಪೀಠೋಪಕರಣ ಧ್ವಂಸ ಮಾಡಿದ್ದರು. ಈ ಗಲಭೆಗೆ ಸಂಬಂಧಿಸಿದಂತೆ ಏಳು ಸಾವಿರ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಘಟನೆಯಲ್ಲಿ 400 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿರುವುದೆಂದು ಅಂದಾಜಿಸಲಾಗಿತ್ತು. ಈ ಕುರಿತು ಕೋಲಾರದ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.