ಯಡಿಯೂರಪ್ಪ ಬಳಿ ಮಹತ್ವದ ಬೇಡಿಕೆ ಇಟ್ಟ ವಹ್ನಿಕುಲ ಕ್ಷತ್ರೀಯರು
ಬೆಂಗಳೂರು, ಸೆ16: ಬೆಂಗಳೂರು ನಗರ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಸೇರಿದ ನೀಲಸಂದ್ರ ಗ್ರಾಮದ ಸರ್ವೇ ನಂ 79 ರ 15 ಏಕರೆ 12 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳನ್ನು ತೆರವುಗೊಳಿಸಿ ದೇವಾಲಯದ ವಶಕ್ಕೆ ನೀಡುವಂತೆ ಕರ್ನಾಟಕ ರಾಜ್ಯ ತಿಗಳ (ವಹ್ನಿಕುಲ ಕ್ಷತ್ರೀಯರ) ಸಂಘ ಅಧ್ಯಕ್ಷರಾದ ಜಯರಾಜ್ ನೇತೃತ್ವದಲ್ಲಿ ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಹಾಗೂ ನಿವೃತ್ತ ಎ ಸಿ ಪಿ ಸುಬಣ್ಣ ಹಾಗೂ ಹೂಡಿ ವಿಜಯಕುಮಾರ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ ನೀಲಸಂದ್ರ ಗ್ರಾಮದ ಸರ್ವೇ ನಂ 79 ರ ವಿಸ್ತೀರ್ಣ 15 ಏಕರೆ 12 ಗುಂಟೆ ಜಮೀನು ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಇನಾಂ ಜಮೀನಾಗಿದೆ. ಇದರಲ್ಲಿ 6 ಏಕರೆ ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿಕೊಂಡಿದ್ದು ಅದರ ವಿರುದ್ದ ಹೈ ಕೋರ್ಟ್ನಲ್ಲಿ ಕೇಸ್ ದಾಖಲಿಸಲಾಗಿರುತ್ತದೆ.
ಕಲಬುರಗಿಯಿಂದಲೇ ಯಡಿಯೂರಪ್ಪ ತುರ್ತು ದೆಹಲಿಗೆ ಪ್ರಯಾಣ!
ಉಳಿದ 9 ಏಕರೆ ಜಮೀನು ಖಾಲಿ ಇದ್ದು ಆ ಜಾಗವನ್ನು ದೇವಾಲಯದ ವಶಕ್ಕೆ ನೀಡಬೇಕು ಮತ್ತು ಅದರ ಸುತ್ತ ತಂತಿ ಬೇಲಿಯನ್ನು ಹಾಕಿಸಬೇಕು ಎಂದು ಸುಪ್ರೀಂ ಕೋರ್ಟ್ 2015 ರಲ್ಲಿ ಆದೇಶ ನೀಡಿದೆ. ಅದರಂತೆ ಜಿಲ್ಲಾಧಿಕಾರಿಗಳು 9 ಏಕರೆ ಜಮೀನನ್ನು ಪೂರ್ಣವಾಗಿ ಖಾಲಿ ಮಾಡಿಸಿ ದೇವಾಲಯದ ವಶಕ್ಕೆ ನೀಡಿದ್ದರು. ಆದರೆ, ಈಗ ಖಾಲಿ ಇದ್ದಂತಹ ಜಾಗದಲ್ಲಿ ಸುಮಾರು 40 ರಿಂದ 50 ಕ್ಕೂ ಹೆಚ್ಚು ಮನೆಗಳನ್ನು ಕಟ್ಟಲಾಗಿದೆ. ಈ ಜಮೀನಿನಲ್ಲಿ ಕಟ್ಟಲಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ತಿಗಳ (ವಹ್ನಿಕುಲ ಕ್ಷತ್ರೀಯರ) ಸಂಘ ಖಜಾಂಚಿ ಹೂಡಿ ವಿಜಯ ಕುಮಾರ್ ಮಾತನಾಡಿ, ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಸ್ವತ್ತಾಗಿರುವ ಸದರಿ ಜಮೀನಿನಲ್ಲಿ ಕಟ್ಟಿರುವಂತಹ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Recommended Video
ತಿಗಳರ ಮಹಾಸಭಾದ ಅಧ್ಯಕ್ಷರು ಹಾಗೂ ಹಾಗೂ ನಿವೃತ್ತ ಎ ಸಿ ಪಿ ಸುಬಣ್ಣ ಅವರು ಮಾತನಾಡಿ, ತಿಗಳ ಸಮಾಜಕ್ಕೆ ರಾಜಕೀಯ ಕ್ಷೇತ್ರದಲ್ಲಿ ಆದ್ಯತೆಯನ್ನು ಹಾಗೂ ಒಳ ಮೀಸಲಾತಿಯನ್ನು ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ವರ್ತೂರು ಶ್ರೀಧರ್, ಹರಿನಾಥ್, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್ ಹಾಗೂ ನಂದೀಶ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.