ದೇಶದ್ರೋಹಿ ಹೇಳಿಕೆಗೆ ಕ್ಷಮೆ ಕೋರುತ್ತೇನೆ, ಆದರೆ ಹಿಂಪಡೆಯೊಲ್ಲ: ಡಿವಿಎಸ್
ಬೆಂಗಳೂರು, ಅಕ್ಟೋಬರ್ 4: ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು 'ದೇಶದ್ರೋಹಿ' ಎಂದು ಪರೋಕ್ಷವಾಗಿ ನಿಂದಿಸಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ. ಆದರೆ ತಾವು ನೀಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ಚಕ್ರವರ್ತಿ ಸೂಲಿಬೆಲೆ ಅವರ ಹೆಸರನ್ನೇ ಪ್ರಸ್ತಾಪಿಸಿರಲಿಲ್ಲ. ಆದರೆ ಮಾಧ್ಯಮದವರು ಅವರ ಹೆಸರನ್ನು ಸುಮ್ಮನೆ ಹಾಕುತ್ತಿದ್ದಾರೆ. ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎನ್ನುವುದು ಗಾಂಧೀಜಿ ಅವರ ಮಾತು. ಮೋದಿ ಬಗ್ಗೆ ಟೀಕೆಗಳನ್ನು ಮಾಡಿರುವುದಕ್ಕೆ ಅವರ ಸಂಪುಟದ ಸಚಿವನಾಗಿ ಹಾಗೆ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಹೇಳಿದರು.
ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ: ಡಿವಿಎಸ್ ಪರೋಕ್ಷ ಆರೋಪ
'ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ' ಎಂದು ಸದಾನಂದ ಗೌಡ ಅವರು ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದರು.
ಇದು ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಸದಾನಂದ ಗೌಡ ವಿರುದ್ಧ ಬಿಜೆಪಿ ಬೆಂಬಲಿಗರೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಸದಾನಂದ ಗೌಡ ಅವರು ತಮ್ಮನ್ನು ಬ್ಲಾಕ್ ಮಾಡಿರುವುದಾಗಿ ಸೂಲಿಬೆಲೆ ತಿಳಿಸಿದ್ದರು.
ಪಾಪದ ವ್ಯಕ್ತಿಯಾಗಿರುವುದರಿಂದ ದಾಳಿ
'ನಾನು ಪಾಪದ ವ್ಯಕ್ತಿಯಾಗಿರುವುದರಿಂದ ನನ್ನ ಮೇಲೆ ದಾಳಿಗಳು ನಡೆಯುವುದು ಜಾಸ್ತಿ. ನಾಲಿಗೆ ಹರಿಬಿಡುವವರ ವಿರುದ್ಧ ಅವರೇನೂ ಹೇಳುವುದಿಲ್ಲ. ನಮ್ಮಂಥವರ ಬಗ್ಗೆ ಮಾತನಾಡುವಾಗ ಮಾತ್ರ ಅವರ ನಾಲಿಗೆ ಕತ್ತಿಯಾಗಿ ಬದಲಾಗುತ್ತದೆ' ಎಂದರು.
ಮೋದಿ, ಶಾ ಸ್ಪಂದಿಸಿದ್ದಾರೆ
'ನೆರೆ ಪರಿಹಾರದ ಕುರಿತು ಯಾರು ಎಷ್ಟೇ ಟೀಕೆಟಿಪ್ಪಣಿಗಳನ್ನು ಮಾಡಿದರೂ ಅಂಜುವುದಿಲ್ಲ. ರಾಜ್ಯ ಸರ್ಕಾರವು ಕೇಂದ್ರಕ್ಕೆ 15 ಸಾವಿರ ಕೋಟಿ ರೂ. ನಷ್ಟದ ಕುರಿತು ವರದಿ ನೀಡಲಾಗಿದೆ. ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದೇವೆ. ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದು ತಿಳಿಸಿದರು.
ಚಕ್ರವರ್ತಿ ಸೂಲಿಬೆಲೆಗೆ ದೇಶದ್ರೋಹ ಪಟ್ಟ: ಟ್ವಿಟ್ಟಿಗರ ಅಭಿಪ್ರಾಯವೇನು?
ದಿಕ್ಕುತಪ್ಪಿಸುವವರ ಬಗ್ಗೆ ಅನುಕಂಪ
'ಪ್ರವಾಹ ಪರಿಹಾರದ ಕುರಿತು ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಜನರ ದಿಕ್ಕುತಪ್ಪಿಸುವವರ ಕುರಿತು ನನಗೆ ಅನುಕಂಪವಿದೆ. ನೆರೆ ಪೀಡಿತ ಪ್ರದೇಶದಲ್ಲಿ ಯಾವ ಯಾವ ಪರಿಹಾರ ಕಾರ್ಯಗಳು ನಡೆಯಬೇಕು ಎಂದು ವರದಿಗಳನ್ನು ತಯಾರಿಸಿರುವುದರ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ. ತತ್ಕ್ಷಣದ ಪರಿಹಾರಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ರಮ ತೆಗೆದುಕೊಂಡಿದ್ದಾರೆ' ಎಂದು ಸದಾನಂದ ಗೌಡ ಟ್ವೀಟ್ ಮಾಡಿದ್ದರು.
ಹೇಳಿದ ಕೂಡಲೆ ದೇಶದ್ರೋಹಿ ಆಗೊಲ್ಲ
ಸದಾನಂದಗೌಡರು ಯಾರನ್ನೂ ವೈಯಕ್ತಿಕವಾಗಿ ಹೆಸರಿಸಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಯೋ ತಿಳಿದಿಲ್ಲ. ಆದರೆ ಹಾಗೆ ಹೇಳಿಕೆ ನೀಡಿದ ಕೂಡಲೇ ಯಾರೂ ದೇಶದ್ರೋಹಿ ಆಗಲು ಸಾಧ್ಯವಿಲ್ಲ. ಸೂಲಿಬೆಲೆ ಅವರು ಯುವಕರನ್ನು ಸಂಘಟನೆ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ್ದರು.
'ಸೂಲಿಬೆಲೆ ದೇಶದ್ರೋಹಿ': ಸದಾನಂದಗೌಡ ವಿರುದ್ಧ ಮುಗಿಬಿದ್ದ ಬಿಜೆಪಿ ಬೆಂಬಲಿಗರು