ಮುಂದೆ ಏನಾದ್ರೂ ಆಗಬಹುದು: ಅತೃಪ್ತ ಕಾಂಗ್ರೆಸ್ ಶಾಸಕ ಸುಧಾಕರ್
ಬೆಂಗಳೂರು, ಸೆಪ್ಟೆಂಬರ್ 12: ರಾಜ್ಯ ರಾಜಕಾರಣ, ಆಪರೇಷನ್ ಕಮಲದ ಭೀತಿಯಲ್ಲಿರುವಾಗಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಹೊರಹಾಕಿ ಕೂತೂಹಲ ಮೂಡಿಸಿದ್ದಾರೆ.
ಸಚಿವ ಸ್ಥಾನ ಸಿಗದೆ ಕಾಂಗ್ರೆಸ್ ಮೇಲೆ ಅತೃಪ್ತರಾಗಿದ್ದ ಶಾಸಕ ಸುಧಾಕರ್ ಅವರು, ಇಂದು ಸುದ್ದಿಗಾರರೊಂದಿಗೆ ಮಾತನಾಡಿ, 'ಮುಂದೆ ಏನು ಬೇಕಾದರೂ ಆಗಬಹುದು' ಎಂದು ಹೇಳಿಕೆ ನೀಡಿ ಪರೋಕ್ಷವಾಗಿ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದ್ದಾರೆ.
vಸಂಪುಟ ವಿಸ್ತರಣೆ : ಕಾಂಗ್ರೆಸ್ ಮುಂದಿರುವ ಮತ್ತೊಂದು ಸವಾಲು!
ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು ಎಂದು ಮಾರ್ಮಿಕವಾಗಿಯೇ ನುಡಿದಿದ್ದಾರೆ. ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡಿರುವ ಸುಧಾಕರ್ ಅವರನ್ನು ಈಗಾಗಲೇ ಬಿಜೆಪಿ ಸಂಪರ್ಕಿಸಿದೆ ಎಂಬ ಗುಲ್ಲು ಕೇಳಿಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ.
ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಸಮಾಧಾನವಿದೆ ಎಂದ ಅವರು, ಅಭಿವೃದ್ಧಿಗೆ ಅನುದಾನ ನೀಡುವಂತೆ ಹಲವು ಬಾರಿ ಸಿಎಂ ಅವರನ್ನು ಕೇಳಿಕೊಂಡರೂ ಸಹ ಅವರು ಗಮನಹರಿಸಿಲ್ಲ ಎಂದು ಕುಮಾರಸ್ವಾಮಿ ವಿರುದ್ಧವೇ ಅಸಮಾಧಾನ ಹೊರಹಾಕಿದರು.
ಸಂಪುಟ ವಿಸ್ತರಣೆ : ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ!
ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದ ಸುಧಾಕರ್ ಅವರು, ಎಂಬಿ.ಪಾಟೀಲ್ ಅವರ ಬಣದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ವಿರುದ್ಧ ಕೆಂಪು ಬಾವುಟ ಹಾರಿಸಿದ್ದರು. ಸಂಪುಟ ವಿಸ್ತರಣೆ ವಿಷಯ ತಿಳಿಯಾದಮೇಲೂ ಸಹ ಸುಧಾಕರ್ ಅವರು ನಿಯಮಿತವಾಗಿ ಮೈತ್ರಿ ಸರ್ಕಾರವನ್ನು ಟೀಕಿಸುತ್ತಲೇ ಬರುತ್ತಿದ್ದಾರೆ.