ಹಿಂದಿ ಹೇರಿಕೆ ವಿರುದ್ಧ ಎಂಎನ್ಎಸ್, ಡಿಎಂಕೆ, ಕರವೇ ಕಿಡಿ
ಬೆಂಗಳೂರು, ಜುಲೈ 15: ಹಿಂದಿ ಭಾಷೆ ಹೇರಿಕೆ ವಿರುದ್ಧ ಕರವೇ, ಎಂಎನ್ಎಸ್ ಹಾಗೂ ಡಿಎಂಕೆ ಮುಖಂಡರು ಬೆಂಗಳೂರಿನಲ್ಲಿ ಶನಿವಾರದಂದು ದುಂಡು ಮೇಜಿನ ಸಭೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿಗಳ ಮೈಲಿಗಲ್ಲುಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ದ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಹಾಗೂ ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಬೇಕು ಎಂದು ಎಂಎನ್ಎಸ್ ನ ರಾಜ್ ಠಾಕ್ರೆ ಅವರು ಹೋರಾಟ ನಡೆಸಿದ್ದು ನೆನಪಿರಬಹುದು.
ಈ ಕಾರಣಕ್ಕಾಗಿ ಕೆ.ಎ ನಾರಾಯಣ ಗೌಡರ ಕರವೇ ಬಣ ಹಾಗೂ ಸಮಾನ ಮನಸ್ಕರು ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತುಕತೆ ನಡೆಸಿದರು.
ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಬೇಡ ಎಂದು ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಲಾಯಿತು.ಎಂಎನ್ಎಸ್ ನಿಂದ ಸಂದೀಪ್ ದೇಶಪಾಂಡೆ, ಡಿಎಂಕೆಯಿಂದ ಸಂಸದ ತಿರುಚ್ಚಿ ಶಿವ, ವಕ್ತಾರ ಶರವಣನ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಸ್ಸಾಂ, ಒಡಿಶಾ, ಬೆಂಗಾಲ, ಆಂಧ್ರಪ್ರದೇಶ ಹಾಗೂ ಕೇರಳದಿಂದಲೂ ಬೆಂಬಲ ಕೋರಲಾಗಿದೆ. ಬ್ಯಾಂಕ್ ಚಲನ್ ಗಳಲ್ಲಿ ಕನ್ನಡ ಭಾಷೆ ಮಾಯವಾಗಿರುವುದು, ರೈಲ್ವೆ ಟಿಕೆಟ್, ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗಿರುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಾಹಿತಿ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.