ಬೆಂಗಳೂರಲ್ಲಿ ಇನ್ನೆರೆಡು ದಿನ ಮಳೆ, ಛತ್ರಿ, ರೈನ್ಕೋಟ್ ಮರಿಬೇಡಿ
Recommended Video
ಬೆಂಗಳೂರು, ಅಕ್ಟೋಬರ್ 16: ರಾಜ್ಯದಾದ್ಯಂತ ಮತ್ತೆ ಮುಂಗಾರು ಚುರುಕಾಗಿದ್ದು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿತ್ತಿದ್ದು, ಬೆಂಗಳೂರಲ್ಲೂ ಮುಂದಿನ 48 ಗಂಟೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸತತ ಒಂದು ವಾರ ಮಳೆ ಸುರಿದ ಬಳಿಕ ಎರಡು ದಿನ ಸ್ವಲ್ಪ ಬಿಡುವು ಪಡೆದಿದ್ದ ಮಳೆರಾಯ ಮಂಗಳವಾರ ಏಕಾಏಕಿ ಸಂಜೆ 6 ಗಂಟೆ ಸುಮಾರಿಗೆ ಮತ್ತೆ ಬಂದಿದ್ದ. ಬನಶಂಕರಿ, ಜಯನಗರ, ಉತ್ತರ ಹಳ್ಳಿ, ಕೆಂಗೇರಿ, ಮೈಸೂರು ರಸ್ತೆ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿತ್ತು.
ಚಿತ್ರಗಳು : ಉಡುಪಿಯಲ್ಲಿ ದಿಢೀರ್ ಮಳೆ; ಕೊಚ್ಚಿ ಹೋದ ರಸ್ತೆ
ಬುಧವಾರ ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಳಿಯು ಗಂಟೆಗೆ 11 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಶೇ.99ರಷ್ಟು ತೇವಾಂಶವೂ ದಾಖಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆ
ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿತ್ತು. ಭಾರಿ ಮಳೆಗೆ ಭೈರಂಪಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ದೂಪದಕಟ್ಟೆಯ ಬಳಿಯ ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿದೆ. ತೋಡಿನ ನೀರು ರಭಸವಾಗಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ಹಲವು ಮೀಟರ್ಗಳಷ್ಟು ರಸ್ತೆ ಹಾಳಾಗಿದೆ.
ಮುಂದಿನ ಐದು ದಿನಗಳ ಕಾಲ ಮಳೆ
ರಾಜ್ಯಾದ್ಯಂತ ಐದು ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಗಾರು ಅಕ್ಟೋಬರ್ ಅಂತ್ಯದವರೆಗೂ ಮಳೆ ಮುಂದುವರೆಯಲಿದೆ. ಚಿಂತಾಮಣಿ, ಭಾಗಮಂಡಲ, ಮಂಗಳೂರು, ಪಣಂಬೂರ್, ಯಲಬುರ್ಗಾ, ಕುಷ್ಟಗಿಯಲ್ಲಿ ಹೆಚ್ಚು ಮಳೆಯಾಗಿದೆ.
ಬೆಳೆ ನಾಶ
ನೆರೆ ಸೃಷ್ಟಿಯಾಗಿ ಕಟಾವಿಗೆ ಬಂದಿದ್ದ ಸುಮಾರು 40ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನಾಶವಾಗಿದೆ. ತೋಟಗಾರಿಕಾ ಪ್ರದೇಶಗಳಿಗೆ ನೀರು ನುಗ್ಗಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ. ಜತೆಗೆ ಹಲವು ಮನೆಗಳು ನೆರೆಯಿಂದ ಜಲಾವೃತಗೊಂಡಿದೆ.
ಬೆಂಗಳೂರಲ್ಲಿ ಹವಾಮಾನ ಹೇಗಿದೆ?
ಬೆಂಗಳೂರಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.6 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.3 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.