ಬೆಂಗಳೂರಿನಲ್ಲಿ ಮತ್ತೊಬ್ಬ ವಿದೇಶಿ ಯುವತಿ ಮೇಲೆ ಹಲ್ಲೆ
ಬೆಂಗಳೂರು, ಮೇ 22 : ವಿದೇಶಿ ಮಹಿಳೆಯರ ಪಾಲಿಗೆ ಬೆಂಗಳೂರು ಅಸುರಕ್ಷಿತ ತಾಣವಾಗುತ್ತಿದೆಯಾ? ತಾಂಜಾನಿಯಾ ಮಹಿಳೆ ಮೇಲೆ ಹಲ್ಲೆಯಾದ ಮೂರೇ ತಿಂಗಳಲ್ಲಿ ಮತ್ತೊಬ್ಬ ವಿದೇಶಿ ಯುವತಿಯ ಮೇಲೆ ಹಲ್ಲೆಯಾಗಿರುವ ವರದಿ ಬಂದಿದೆ. ಈ ಬಾರಿ ಹಲ್ಲೆಗೊಳಗಾಗಿರುವ ಮಹಿಳೆ ಕೀನ್ಯಾ ಮೂಲದವರು.
ಮೂವರು ಆಟೋ ಡ್ರೈವರೊಬ್ಬರು ನನ್ನ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಿತ್ತುಕೊಂಡು, ನನ್ನನ್ನು ಬೆತ್ತಲೆಗೊಳಿಸಲು ಪ್ರಯತ್ನಿಸಿದರು. ನಾನು ಪ್ರತಿಭಟಿಸಿದಾಗ ರಕ್ತ ಬರುವಂತೆ ನನ್ನ ಹೊಟ್ಟೆಗೆ ಹೊಡೆದಿದ್ದಾರೆ ಎಂದು 29 ವರ್ಷದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯಲಹಂಕದ ಕಾಲೇಜೊಂದರಲ್ಲಿ ಬಿಬಿಎ ಓದುತ್ತಿರುವ ಯುವತಿ ಕೊತ್ತನೂರಿನಲ್ಲಿರುವ ಮನೆಗೆ ಮಧ್ಯರಾತ್ರಿ ತೆರಳುತ್ತಿದ್ದಾಗ ಕಮ್ಮನಹಳ್ಳಿಯ ಬಳಿ ಮೇ 12ರಂದು ಈ ಘಟನೆ ನಡೆದಿದೆ. ಗಾಯದಿಂದ ಅವರು ಚೇತರಿಸಿಕೊಳ್ಳುತ್ತಿದ್ದರೂ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಉಸಿರಾಟವಾಡುವಾಗ ತೊಂದರೆ ಅನುಭವಿಸುತ್ತಿದ್ದಾರೆ. ['ಬೆಂಗಳೂರು ನನಗೆ ಮನೆಯಾಗಿತ್ತು, ಈಗ ತತ್ತರಿಸಿದ್ದೇನೆ!']
ಅಂದು ರಾತ್ರಿ ಆದದ್ದೇನು? : "ನನಗೆ ಪರಿಯಚದ ಆಟೋ ಡ್ರೈವರೊಂದಿಗೆ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದೆ. ಆಗ ಎಂಪೈರ್ ಹೋಟೆಲ್ ಬಳಿ ಮೂವರಿದ್ದ ಮತ್ತೊಂದು ಆಟೋ ನಮ್ಮನ್ನು ಹಿಂದೆ ಹಾಕಲು ಯತ್ನಿಸಿದೆ. ನಮ್ಮ ಆಟೋಗೆ ಅವರ ಆಟೋ ಬಡಿದೆದೆ. ಕೂಡಲೆ ಅವರು ನಮ್ಮ ಮೇಲೆ ಕೂಗಾಡುತ್ತ ಮತ್ತೆ ನಮ್ಮನ್ನು ಓವರ್ ಟೇಕ್ ಮಾಡಿ ನಮ್ಮನ್ನು ನಿಲ್ಲಿಸಿದೆ."
"ನಮ್ಮ ಬಳಿ ಬಂದ ಮೂವರು ನನ್ನನ್ನು ಹೊರಗೆಳೆದರು. ನಾನು ಓಡಲು ಯತ್ನಿಸಿ ಕೆಳಗೆ ಬಿದ್ದಾಗ ಓರ್ವ ಬಂದು ನನ್ನ ಮೊಬೈಲ್ ಕಿತ್ತುಕೊಂಡು ತಲೆಗೆ ಜೋರಾಗಿ ಹೊಡೆದ. ಮತ್ತಿಬ್ಬರು ನನ್ನ ಬಟ್ಟೆ ಕಳಚಲು ಯತ್ನಿಸಿದಾಗ ನಾನು ಬಲವಾಗಿ ಪ್ರತಿಭಟಿಸಿದೆ. ಇದರಿಂದ ಮತ್ತಷ್ಟು ಕ್ರೋಧಿತರಾದ ಅವರು ನನ್ನ ಹೊಟ್ಟೆಗೆ ಜೋರಾಗಿ ಹೊಡೆಯಲು ಪ್ರಾರಂಭಿಸಿದರು." [ತಾಂಜಾನಿಯ ವಿದ್ಯಾರ್ಥಿನಿ ಮೇಲೆ ಹಲ್ಲೆ : ಪೊಲೀಸರ ಅಮಾನತಿಗೆ ತಡೆ]
"ಕೂಡಲೆ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋದೆ. ಅವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಆದೇಶಿಸಿದರು. ಅಲ್ಲಿ ದೂರು ನೀಡಿದ ನಂತರ, ನನ್ನೊಂದಿಗಿದ್ದ ಆಟೋ ಡ್ರೈವರನ್ನು ಕರೆತರಲು ಹೇಳಿದ್ದಾರೆ. ಆದರೆ, ಆ ಆಟೋ ಡ್ರೈವರ್ ನನ್ನ ಯಾವ ಕರೆಗೂ ಸ್ಪಂದಿಸುತ್ತಿಲ್ಲ" ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.
ದೂರಿನಲ್ಲಿ ಆರೋಪಿಗಳ ಗುರುತಿರುವ ಆಟೋ ಡ್ರೈವರ್ ನೀಡಿರುವ ವಿಳಾಸದಲ್ಲಿ ಆತ ವಾಸಿಸುತ್ತಿಲ್ಲ. ಅಲ್ಲದೆ, ಮೊಬೈಲ್ ಮೂಲಕ ಸಂಪರ್ಕಿಸಿದರೂ ಆತ ಸಿಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಅಂತ ಬರುತ್ತಿದೆ. ಈ ಕಾರಣದಿಂದಾಗಿ ಯಾರನ್ನು ಬಂಧಿಸಲಾ ಸಾಧ್ಯವಾಗಿಲ್ಲ ಎಂದು ಬಾಣಸವಾಡಿ ಠಾಣೆಯ ಇನ್ಸ್ಪೆಕ್ಟರ್ ಮುನಿಕೃಷ್ಣ ಹೇಳುತ್ತಾರೆ.