ಬಿಬಿಎಂಪಿ: ಬಯಲಾಯ್ತು ಸಾವಿರ ಕೋಟಿಯ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ!
ಬೆಂಗಳೂರು, ಸೆ. 15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ ಕಡತ ಕಾಣೆಯಾಗಿದೆ ಎಂದರೆ ಅಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದೇ ಅರ್ಥ. ಪಾಲಿಕೆಯಲ್ಲಿ ಇದ್ದಕ್ಕಿದ್ದಂತೆಯೆ ದಾಖಲಾತಿಗಳು ನಾಪತ್ತೆಯಾಗುವುದು ಸಾಮಾನ್ಯ ಎಂಬಂತಾಗಿದೆ. ಹೀಗೆ ನಾಪತ್ತೆಯಾಗಿದ್ದ ಕಡತವೊಂದನ್ನು ಇದೀಗ ಪತ್ತೆಹಚ್ಚಲಾಗಿದ್ದು, ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಬಿಬಿಎಂಪಿ ಆಸ್ತಿಯನ್ನು ಕಬಳಿಸಲಾಗಿದೆ. ದಶಕಗಳ ಹಿಂದಿನ ಪ್ರಕರಣದ ಬೆನ್ನುಬಿದ್ದಿದ್ದ ಬಿಬಿಎಂಪಿ ಆಡಳಿತ ಪಕ್ಷ ಬಿಜೆಪಿಯ ನಾಯಕರೇ ಈ ಹಗರಣವನ್ನು ಬಯಲಿಗೆ ಎಳೆದಿರುವುದು ವಿಶೇಷ.
ಅಷ್ಟಕ್ಕೂ ಈ ಹಗರಣ ನಡೆದಿರುವುದು ಹೇಗೆ? ಬಿಬಿಎಂಪಿಯ ಯಾವ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ? ಕಾಣೆಯಾಗಿದ್ದ ಕಡತವನ್ನು ಹುಡುಕಿದ್ದು ಹೇಗೆ ಎಂಬುದು ಯಾವ ಪತ್ತೆದಾರಿ ಕಾದಂಬರಿಗೂ ಕಥೆಗೂ ಕಮ್ಮಿಯಿಲ್ಲ. ಪರಭಾರೆಯಾಗಿದ್ದ ಆಸ್ತಿಯನ್ನು ಬಿಬಿಎಂಪಿ ಹೇಗೆ ವಶಕ್ಕೆ ಪಡೆಯಲಿದೆ ಎಂಬುದು ಪ್ರಶ್ನೆ. ಆ ಹಗರಣದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ!
ಸಾವಿರ ಕೋಟಿಯ ಕಡತ ನಾಪತ್ತೆ!
ಸತತವಾಗಿ ಐದು ವರ್ಷಗಳ ಸತತ ಹೋರಾಟದ ಬಳಿಕ ಬಿಬಿಎಂಪಿಯಲ್ಲಿ ನಾಪತ್ತೆಯಾಗಿದ್ದ ಕಡತಗಳನ್ನು ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್ನ 16ನೇ ಮಹಡಿಯಲ್ಲಿರುವ ದಾಖಲೆ ಕೊಠಡಿಯ ಕಪಾಟಿನಲ್ಲಿ ಕೆಲವು ಹಾಗೂ ದೊಮ್ಮಲೂರು ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿರುವ ಲಾಕರ್ ಒಂದರಲ್ಲಿ ಮತ್ತಷ್ಟು ದಾಖಲೆಗಳನ್ನು ಪತ್ತೆ ಮಾಡಿದ್ದೆ ಒಂದು ಸಾಹಸ ಎನ್ನುತ್ತಾರೆ ಬೆಂಗಳೂರು ನಗರ ಜಿಲ್ಲಾ ಘಟಕ ಬಿಜೆಪಿ ಅಧ್ಯಕ್ಷ, ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು.
ಬಿಬಿಎಂಪಿ ಪ್ರತಿ ವಾರ್ಡಗೆ ನೋಡೆಲ್ ಅಧಿಕಾರಿ ನೇಮಕ
2014ರಲ್ಲಿ ನಡೆದಿದ್ದ ಪಾಲಿಕೆಯ ಸಭೆಯಲ್ಲಿ ಎನ್.ಆರ್. ರಮೇಶ್ ಅವರು ಈ ಹಗರಣವನ್ನು ಬಯಲಿಗೆಳೆದ ನಂತರ ಆ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮೂಲ ಕಡತಗಳು ಇದ್ದಕ್ಕಿದಂತೆ ನಾಪತ್ತೆಯಾಗಿದ್ದವು. ಅದಾದ ಬಳಿಕ ರಮೇಶ್ ಅವರು ನಿರಂತರವಾಗಿ ಕಡತಗಳ ಪತ್ತೆಗೆ ತೊಡಗಿದ್ದರು. ಕೊನೆಗೆ ಆತ್ಮೀಯರೊಬ್ಬರು ಕೊಟ್ಟ ಮಾಹಿತಿಯ ಮೇರೆಗೆ ಹುಡುಕಾಟ ನಡೆಸಿದಾಗ ಎರಡು ಕಡೆಗಳಲ್ಲಿ ದಾಖಲೆಗಳು ಪತ್ತೆಯಾಗಿವೆ ಎಂದು 'ಒನ್ಇಂಡಿಯಾ ಕನ್ನಡ'ಕ್ಕೆ ಬಿಜೆಪಿ ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಎನ್.ಆರ್. ರಮೇಶ್ ಅವರು ವಿವರಿಸಿದರು.
ನಕಲಿ ದಾಖಲೆಗಳ ಮೂಲಕ ಆಸ್ತಿ ಕಬಳಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾಕಿ ಸ್ಟೇಡಿಯಂಗೆ ಹೊಂದಿಕೊಂಡಂತೆ ಇರುವ ಸುಮಾರು 91,160 ಚ. ಅಡಿಗಳಷ್ಟು ವಿಸ್ತೀರ್ಣದ ಅಂದರೆ, 2 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ಪಾಲಿಕೆಯ ಆಸ್ತಿಯನ್ನು 1993 ರಲ್ಲಿ ಮೆ. ಶಾಮರಾಜು ಆ್ಯಂಡ್ ಕಂಪನಿ (ಇಂಡಿಯಾ ಪ್ರೈ.ಲಿ) ಎಂಬ ಸಂಸ್ಥೆಯು ಜಂಟಿ ಅಭಿವೃದ್ಧಿ ಹೆಸರಿನಲ್ಲಿ ಪಡೆದಿತ್ತು. ನಂತರ, ನಕಲಿ ದಾಖಲೆಗಳ ಸಹಾಯದಿಂದ ಯಾರ ಗಮನಕ್ಕೂ ಬಾರದಂತೆ ಸಂಪೂರ್ಣ ಸ್ವತ್ತನ್ನು ಕಬಳಿಸಲಾಗಿತ್ತು. ಈ ಭೂ ಹಗರಣವನ್ನು 2014ರಲ್ಲಿ ಆಗ ಪಾಲಿಕೆ ಸದಸ್ಯರಾಗಿದ್ದ ಎನ್.ಆರ್. ರಮೇಶ್ ಅವರು ದಾಖಲೆಗಳ ಸಹಿತ ಪಾಲಿಕೆ ಸಭೆಯಲ್ಲಿ ಬಯಲಿಗೆಳೆದಿದ್ದರು.
ಜಂಟಿ ಅಭಿವೃದ್ಧಿ ಹೆಸರಿನಲ್ಲಿ ನಿರ್ಮಾಣಗೊಂಡ 07 ಅಂತಸ್ತುಗಳ ಬೃಹತ್ ವಾಣಿಜ್ಯ ಕಟ್ಟಡವನ್ನು ಪಾಲಿಕೆಯ ಆರ್ಥಿಕ ಸ್ಥಿತಿ ಸರಿಯಿಲ್ಲವೆಂಬ ಕಾರಣವನ್ನು ನೀಡಿ 1995 ರಲ್ಲಿ ಅಂದು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವು ಮಾರಾಟ ಮಾಡಿತ್ತು ಎಂದು ವಿವರಿಸಿದ್ದಾರೆ ಎನ್.ಆರ್. ರಮೇಶ್.
ಅನುಮಾಗನಳಿಗೆ ಎಡೆ ಮಾಡಿದ್ದ ತೀರ್ಮಾನ
ದಿ. ಮುನಿಸ್ವಾಮಿ ಎಂಬುವರು ಪ್ರತಿನಿಧಿಸುತ್ತಿದ್ದ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಈ ಸ್ವತ್ತನ್ನು ಮೆ. ಶಾಮರಾಜು ಆ್ಯಂಡ್ ಕಂಪನಿ ಇಂಡಿಯಾ ಪ್ರೈ.ಲಿ ಎಂಬ ಸಂಸ್ಥೆಗೆ ಮಾರಾಟ ಮಾಡಲು ಅಂದಿನ ಮಹಾಪೌರರಾಗಿದ್ದ ಕುಪ್ಪಸ್ವಾಮಿ ಅವರು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು.
ಬಿಬಿಎಂಪಿಯ 198 ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ
ಅಂದಿನ ಮಾರುಕಟ್ಟೆ ಬೆಲೆ ಸುಮಾರು 50 ಕೋಟಿ ರೂಪಾಯಿಗಳಿಗೂ ಹೆಚ್ಚು ಇದ್ದಂತಹ ಈ ಅಮೂಲ್ಯ ಸ್ವತ್ತನ್ನು ಕೇವಲ 48 ಲಕ್ಷಗಳಿಗೆ ಮಾತ್ರವೇ ಮಾರಾಟ ಮಾಡುವ ಪಾಲಿಕೆಯ ಅಂದಿನ ನಿರ್ಣಯ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
Recommended Video
ಸಾವಿರ ಕೋಟಿ ಆಸ್ತಿ 48 ಲಕ್ಷಗಳಿಗೆ ಮಾರಾಟ
ದಾಖಲೆಗಳನ್ನು ಪರಿಶೀಲಿಸಿದಾಗ ಸದರಿ ಸ್ವತ್ತಿನ ಮಾರಾಟ ಪ್ರಕ್ರಿಯೆಯ ಹೆಸರಿನಲ್ಲಿ ಅಂದಿನ ಪಾಲಿಕೆಯ ಆಯುಕ್ತ ಕೆ. ಪಿ. ಪಾಂಡೆ ಅವರ ಸಹಿಯನ್ನು ಸಂಪೂರ್ಣವಾಗಿ ನಕಲು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿರಂತರವಾಗಿ ಪತ್ರಗಳ ಮೂಲಕ ಪಾಲಿಕೆ ಆಯುಕ್ತರನ್ನು ಮತ್ತು ಕಾನೂನು ಕೋಶದ ಮುಖ್ಯಸ್ಥರನ್ನು ಒತ್ತಾಯಿಸುತ್ತಲೇ ಇದ್ದ ಎನ್.ಆರ್. ರಮೇಶ್ ಅವರ ಪ್ರಯತ್ನದಿಂದ ಪಾಲಿಕೆಯ ಕಾನೂನು ಕೋಶದ ವಕೀಲರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ 91,160 ಚ. ಅಡಿ ವಿಸ್ತೀರ್ಣದ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ ಸ್ವತ್ತನ್ನು ದಿವ್ಯಶ್ರೀ ಚೇಂಬರ್ಸ್ ನಿಂದ ಮರಳಿ ಪಾಲಿಕೆ ವಶಕ್ಕೆ ಪಡೆಯುವ ಕಾನೂನು ಹೋರಾಟ ಆರಂಭಿಸಿದ್ದಾರೆ.