'ಏಕಾಂತ'ದಲ್ಲಿ ಮತ್ತೊಂದು ವಿವಾದ 'ಮೈಮೇಲೆ' ಎಳೆದುಕೊಂಡ ರಮೇಶ್ ಜಾರಕಿಹೊಳಿ!
ಬೆಂಗಳೂರು, ಮಾ. 04: 'ಸಿಡಿ' ಸ್ಫೋಟದಿಂದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ, ರಾಜ್ಯ ಸರ್ಕಾರಕ್ಕೆ ಮುಜುಗುರ ಕಡಿಮೆಯಾಗಿಲ್ಲ. ಅದರ ಬದಲು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣವಾಗಿರುವುದು ಸಂತ್ರಸ್ತ ಯುವತಿಯೊಂದಿಗೆ ರಮೇಶ್ ಜಾರಕಿಹೊಳಿ ಅವರು ನಡೆಸಿರುವ ಮಾತುಕತೆ.
ಯುವತಿಯೊಂದಿಗೆ ರಮೇಶ್ ಜಾರಕಿಹೊಳಿ ಮಾತನಾಡುವಾಗ ಮುಖ್ಯಮಂತ್ರಿ ಯಡಿಯೂರಪ್ಪ ಕುರಿತು ಮಾತನಾಡಿದ್ದಾರೆ. ಇದೀಗ ರಾಜೀನಾಮೆ ಕೊಟ್ಟರೂ ರಮೇಶ್ ಆಡಿರುವ ಮಾತುಗಳು ಬಿಜೆಪಿಯ ಆಂತರಿಕ ಬೇಗುದಿಯನ್ನು ಮತ್ತಷ್ಟು ಹೆಚ್ಚಿಸಿವೆ. ಮೊದಲೇ ವಲಸಿಗರಿಂದ ಬೇಸತ್ತಿರುವ ಮೂಲ ಬಿಜೆಪಿ ಶಾಸಕರು ಹಾಗೂ ಹಿರಿಯರಿಗೆ ರಮೇಶ್ ಜಾರಕಿಹೊಳಿ ಹೊಸದೊಂದು ಅಸ್ತ್ರ ಒದಗಿಸಿದಂತಾಗಿದೆ.
ಜಾರಕಿಹೊಳಿ ಸಿಡಿ ಪ್ರಕರಣ: ದೂರುದಾರ ದಿನೇಶ್ ಕಲ್ಲಹಳ್ಳಿ ವಿಚಾರಣೆ
ಇದೇ ಅಸ್ತ್ರವನ್ನು ಉಭಯ ಸದನಗಳಲ್ಲಿ ಪ್ರಯೋಗಿಸಲು ವಿರೋಧ ಪಕ್ಷ ಕಾಂಗ್ರೆಸ್ ಕೂಡ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ಅಷ್ಟಕ್ಕು ರಮೇಶ್ ಜಾರಕಿಹೊಳಿ ಅವರು ಯುವತಿಯೊಂದಿಗೆ ಹಂಚಿಕೊಂಡ ಆ 'ಅನುಭವ' ಏನು? ಅದಕ್ಕೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಏನು? ಮುಂದಿದೆ.
ರಾಜೀನಾಮೆಯೊಂದಿಗೆ ಮುಗಿತಿಲ್ಲ ಸಿಡಿ ಪುರಾಣ
ಮಾರ್ಚ್ 2ರ ವರೆಗೆ ಬಿಜೆಪಿಯಲ್ಲಿ ಅನಭಿಷಕ್ತ ದೊರೆಯಂತಿದ್ದ ರಮೇಶ್ ಜಾರಕಿಹೊಳಿ ಅವರು 'ಸಿಡಿ' ಬಾಂಬ್ ಸ್ಫೋಟವಾಗುತ್ತಿದ್ದಂತೆಯೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಹುದ್ದೆಗೇರುವ ಗುರಿ ಇಟ್ಟುಕೊಂಡಿದ್ದ ಜಾರಕಿಹೊಳಿ ಅವರಿಗೆ ಭಾರಿ ಹಿನ್ನೆಡೆಯಾಗಿದೆ. ಆದರೆ ಅವರ ಸಂಕಷ್ಟ ಇಷ್ಟಕ್ಕೆ ನಿಂತಿಲ್ಲ. ಯುವತಿಯೊಂದಿಗೆ ಅವರು ಮಾತನಾಡಿರುವ ವಿಷಯಗಳು ಸಿಡಿಯಲ್ಲಿ ಬಹಿರಂಗವಾಗಿವೆ. ಜೊತೆಗೆ 'ಆ' ಮಾತುಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಗರಂ ಆಗುವಂತೆ ಮಾಡಿವೆ. ಯಾಕೆಂದರೆ ಯುವತಿಯೊಂದಿಗೆ ರಮೇಶ್ ಜಾರಕಿಹೊಳಿ ಅವರು ಸಿಎಂ ಯಡಿಯೂರಪ್ಪ ಅವರ ಕುರಿತು ಮಾತನಾಡಿದ್ದಾರೆ.
ಅದು ಸಿಎಂ ಯಡಿಯೂರಪ್ಪ ಅವರ ಕುರಿತ ರಹಸ್ಯ!
ಈಗ ಸಂತ್ರಸ್ತಳಾಗಿರುವ ಯುವತಿಯೊಂದಿಗೆ ಈ ಹಿಂದೆ ಏಕಾಂತದಲ್ಲಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಭ್ರಷ್ಟರು ಎಂದು ಹೇಳಿರುವ ರಮೇಶ್, ಸಿದ್ದರಾಮಯ್ಯ ಅವರು ಭ್ರಷ್ಟರಲ್ಲ ಎಂದಿದ್ದಾರೆ. ಆ ಮೂಲಕ ಮತ್ತೊಂದು ವಿವಾದವನ್ನು ರಮೇಶ್ ಜಾರಕಿಹೊಳಿ ಅವರು 'ಮೈಮೇಲೆ' ಎಳೆದುಕೊಂಡಿದ್ದಾರೆ.
ಪ್ರತಿಧ್ವನಿಸಲಿದೆ ಏಕಾಂತದ 'ಆ ಮಾತು'
ಸಿಎಂ ಯಡಿಯೂರಪ್ಪ ಅವರು ಭ್ರಷ್ಟ ಎಂದು ಬಿಜೆಪಿ ಪ್ರಭಾವಿ ನಾಯಕ ಆಡಿರುವ ಮಾತನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟ ಎಂದು ಅವರದ್ದೇ ಸಂಪುಟದ ಸಹೋದ್ಯೋಗಿ ಮಾತನಾಡಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯಲೇಬೇಕು. ಜೊತೆಗೆ ಸಿಎಂ ಹಾಗೂ ಮಾಜಿ ಸಚಿವರನ್ನು ವಿಚಾರಣೆಗೊಳಪಡಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಲಿದೆ ಎಂದು ತಿಳಿದು ಬಂದಿದೆ.
Recommended Video
ರಮೇಶ್ ಜಾರಕಿಹೊಳಿ ಸತ್ಯ ಹೇಳಿದ್ದಾನೆ ಎಂದ ಸಿದ್ದರಾಮಯ್ಯ
ಇನ್ನು ರಮೇಶ್ ಜಾರಕಿಹೊಳಿ ಅವರು ಆಡಿದ್ದಾರೆ ಎನ್ನಲಾದ ವಿಷಯದ ಬಗ್ಗೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿ, ನೀವು ಶುದ್ಧ ಹಸ್ತರು, ಸಿಎಂ ಯಡಿಯೂರಪ್ಪ ಭ್ರಷ್ಟರು ಎಂದು ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಕೇಳಿದ್ದಾರೆ. ಅದಕ್ಕ ಉತ್ತರಿಸಿದ ಸಿದ್ದರಾಮಯ್ಯ ಅವರು, ಅವನು ಸತ್ಯವನ್ನೇ ಹೇಳಿದ್ದಾನೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದಿದ್ದಾರೆ.
ಒಟ್ಟಾರೆ 'ಸಿಡಿ' ಬಾಂಬ್ ಸ್ಫೋಟದೊಂದಿಗೆ ಹಲವು ವಿವಾದಗಳನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಎಳೆದುಕೊಂಡಿದ್ದಾರೆ. ಜೊತೆಗೆ ಬಿಜೆಪಿ, ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ಅವರಿಗೂ ಮುಜುಗುರವನ್ನು ತಂದಿಟ್ಟಿದ್ದಾರೆ. ಇನ್ನೂ ಯಾವ್ಯಾವ ಹಂತಕ್ಕೆ ಈ ಸಿಡಿ ಸ್ಫೋಟ ಪ್ರಕರಣ ತಲುಪುತ್ತದೆಯೋ ನೋಡಬೇಕಿದೆ.