ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ ಇಂದಿರಾ ಕ್ಯಾಂಟೀನ್ ಗೆ ವರ್ಷದ ಸಂಭ್ರಮ. ಕಳೆದ 11 ತಿಂಗಳಲ್ಲಿ ಹತ್ತಿರ ಹತ್ತಿರ 6 ಕೋಟಿ ಪ್ಲೇಟ್ ಊಟವನ್ನು ಬೆಂಗಳೂರಿಗೆ ಈ ಕ್ಯಾಂಟೀನ್ ಉಣಬಡಿಸಿದೆ. ಇಂದಿರಾ ಕ್ಯಾಂಟೀನ್ ಹಾಗೂ ಮೊಬೈಲ್ ಕ್ಯಾಂಟೀನ್ ಎರಡರ ಸಂಖ್ಯೆಯೂ ಹೆಚ್ಚು ಮಾಡಲಾಗಿದೆ.
ಆ ನಂತರ ಕೆಲವು ತಿಂಗಳಲ್ಲಿ ಕೆಲವಷ್ಟು ಕೂಡ ಚಟುವಟಿಕೆ ಆರಂಭ ಮಾಡಿದವು. ವರ್ಷ ಪೂರೈಸಿದ ನಂತರ 171 ವಾರ್ಡ್ ಕ್ಯಾಂಟೀನ್ ಗಳು, 17 ಮೊಬೈಲ್ ಕ್ಯಾಂಟೀನ್ ಗಳು ಕಾರ್ಯ ನಿರ್ವಹಿಸುತ್ತಿವೆ. 11 ಕ್ಯಾಂಟೀನ್ ಗಳು ಆರಂಭ ಆಗಬೇಕಿದ್ದು, ಅದಕ್ಕಾಗಿ ಸ್ಥಳವನ್ನು ಇನ್ನೂ ಹುಡುಕಬೇಕಾಗಿದೆ ಎಂಬುದು ಸದ್ಯದ ಮಾಹಿತಿ.
ಬಂದ್ ದಿನವು ಇಂದಿರಾ ಕ್ಯಾಂಟೀನ್ ಗೆ 1 ಲಕ್ಷ ಜನ ಬಂದರಾ?
ಒಟ್ಟಾರೆ ಹೇಳಬೇಕು ಅಂದರೆ, ಇದು ಆರೋಗ್ಯಪೂರ್ಣ, ರುಚಿಯಾದ ಹಾಗೂ ಕೈಗೆಟುಕುವ ಆಯ್ಕೆಯಾಗಿದೆ. ಅದರಲ್ಲೂ ಬಡವರಿಗೆ ಇದರಿಂದ ಹೆಚ್ಚು ಅನುಕೂಲವಾಗಿದೆ. ಕಳೆದ ವರ್ಷ ಆಗಸ್ಟ್ 16ರಂದು ಬಿಬಿಎಂಪಿಯಿಂದ ಒಟ್ಟು ಗುರಿಯ 199ರಲ್ಲಿ ನೂರಾ ಒಂದು ಕ್ಯಾಂಟೀನ್ ಆರಂಭ ಮಾಡಲಾಯಿತು.
ಕ್ಯಾಂಟೀನ್ ಗಳ ಸಂಖ್ಯೆ ಹೆಚ್ಚಾದಂತೆ ಮಾರಾಟ ಹೆಚ್ಚಳ
ಕ್ಯಾಂಟೀನ್ ಗಳ ಸಂಖ್ಯೆ ಹೆಚ್ಚಾದಂತೆ ಪ್ರತಿ ದಿನ ಮಾರಾಟ ಆಗುವ ಪ್ಲೇಟ್ ಗಳ (ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ) ಸಂಖ್ಯೆಯೂ ಹೆಚ್ಚಾಗಿದೆ. 2017ರ ಸೆಪ್ಟೆಂಬರ್ ತಿಂಗಳಲ್ಲಿ 1,09,773 ಇದ್ದದ್ದು, 2018ರ ಜೂನ್ ಹೊತ್ತಿಗೆ ಎರಡು ಪಟ್ಟು ಅಂದರೆ 2,10,200 ತಲುಪಿತ್ತು. ಈ ಸಂಖ್ಯೆ ತೀರಾ ಹೆಚ್ಚಾಗಿದ್ದು ಮಾರ್ಚ್ ನಲ್ಲಿ. ಅಂದರೆ 67,56,450 ತಲುಪಿತ್ತು.
ಸಿದ್ದರಾಮಯ್ಯ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಬಗ್ಗೆ ಎಚ್ಡಿಕೆ ನಿರ್ಲಕ್ಷ್ಯ?
ಆಟೋರಿಕ್ಷಾ ಚಾಲಕರು, ಕಟ್ಟಡ ನಿರ್ಮಾಣ ಕಾರ್ಮಿಕರು
ಆ ನಂತರ ಏಪ್ರಿಲ್, ಮೇನಲ್ಲಿ ಇಳಿಕೆಯಾಯಿತು. ಅದಕ್ಕೆ ವಿಧಾನಸಭೆಯ ಚುನಾವಣೆಗಳೂ ಕಾರಣ ಇರಬಹುದು. ಆದರೆ ಜೂನ್ ನಲ್ಲಿ ಮತ್ತೆ ಏರಿಕೆ ಆಯಿತು. ಕ್ಯಾಂಟೀನ್ ಗಳು ಆರಂಭದಲ್ಲಿ ಆಟೋರಿಕ್ಷಾ ಚಾಲಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ದಿನಗೂಲಿ ಕಾರ್ಮಿಕರಿಗೆ ಹೆಚ್ಚು ತಲುಪಿತು.
ರಾಗಿ ಮುದ್ದೆ ಕೊಡಬೇಕು ಅನ್ನೋ ಪ್ರಸ್ತಾವ
ಇಂದಿರಾ ಕ್ಯಾಂಟೀನ್ ನಲ್ಲಿ ರಾಗಿ ಮುದ್ದೆ ಕೊಡಬೇಕು ಅನ್ನೋ ಪ್ರಸ್ತಾವ ಬಹಳ ಒಳ್ಳೆಯದು. ಇದರ ಜತೆಗೆ ಸಿರಿಧಾನ್ಯದ ಆಹಾರವೂ ನೀಡಲಿ. ಸಾಧ್ಯವಾದರೆ ಮೊಟ್ಟೆ- ಮಾಂಸಾಹಾರವೂ ದೊರೆಯುವಂತಾಗಬೇಕು. ಇದರ ಟೆಂಡರ್ ನ ದೊಡ್ಡ ದೊಡ್ಡ ಕಾಂಟ್ರ್ಯಾಕ್ಟರ್ ಗಳಿಗೆ ಮಾತ್ರ ನೀಡುವ ಬದಲು ಸ್ತ್ರೀಶಕ್ತಿ ಸಂಘಗಳಿಗೆ ನೀಡಿದರೆ ಒಳ್ಳೆಯದು ಎಂದು ಎನ್ ಜಿಒವೊಂದರ ಸದಸ್ಯ ಅಭಿಪ್ರಾಯ ಪಡುತ್ತಾರೆ.
ಒಂದು ವರ್ಷದ ಗುತ್ತಿಗೆ ನೀಡಲಾಗಿತ್ತು
ಅಂದಹಾಗೆ, ಆರಂಭದ ಒಂದು ವರ್ಷದ ಗುತ್ತಿಗೆ ರಿವಾರ್ಡ್ಸ್ ಮತ್ತು ಶೆಫ್ ಟಾಕ್ ಗೆ ನೀಡಲಾಗಿತ್ತು. ಅದು ಆಗಸ್ಟ್ 16ರಂದು ಗುತ್ತಿಗೆ ಕೊನೆಯಾಗಲಿದ್ದು, ಇನ್ನೊಂದು ವರ್ಷ ಮುಂದುವರಿಯಲಿದೆ. ವಿವಿಧ ತಪ್ಪುಗಳಿಗಾಗಿ ಎರಡೂ ಗುತ್ತಿಗೆ ಸಂಸ್ಥೆಗಳಿಗೆ ಹಾಗೂ ಅಲ್ಲಿನ ಸಿಬ್ಬಂದಿಗೆ ಬಿಬಿಎಂಪಿಯಿಂದ ದಂಡ ವಿಧಿಸಲಾಗಿದೆ. ಕೆಲವು ಕಡೆ ಗ್ರಾಹಕರು ಆಹಾರ ಗುಣಮಟ್ಟದ ಬಗ್ಗೆ ಆಕ್ಷೇಪ ಮಾಡಿದ್ದಾರೆ.
ಆಹಾರ ಗುಣಮಟ್ಟ ಪರಿಶೀಲನೆಗೆ ನೇಮಕ
ನಿವೃತ್ತ ಸೇನಾ ಅಧಿಕಾರಿಗಳನ್ನು ಪ್ರತಿ ಕ್ಯಾಂಟೀನ್ ನ ಆಹಾರದ ಗುಣಮಟ್ಟ ಪರಿಶೀಲನೆಗೆ ನೇಮಿಸಲಾಗಿದೆ. ಅದೇ ರೀತಿ ಆರೋಗ್ಯ ಸಹಾಯಕರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಕೂಡ ಆಗಾಗ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ನಡೆಸುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.