ಅನ್ನ, ನೀರು ಇಲ್ಲದೆ ಪರದಾಡಿದ ಅಂಗನವಾಡಿ ಕಾರ್ಯಕರ್ತೆಯರು!
ಕನಿಷ್ಠ ವೇತನ ಹೆಚ್ಚಳ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ಇರುವ ಶೇಷಾದ್ರಿ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ
ಬೆಂಗಳೂರು, ಮಾರ್ಚ್ 21: ಕನಿಷ್ಠ ವೇತನ ಹೆಚ್ಚಳ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ಇರುವ ಶೇಷಾದ್ರಿ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇಲ್ಲಿ ತನಕ ಯಾವುದೇ ಜನಪ್ರತಿನಿಧಿ ಇವರ ನೋವಿಗೆ ಸ್ಪಂದಿಸಿಲ್ಲ.
ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯುಸಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ದಿಂದ ಶೇಷಾದ್ರಿ ರಸ್ತೆಯಲ್ಲಿ ಆರಂಭವಾದ ಪ್ರತಿಭಟನೆ, ಮಂಗಳವಾರವೂ ಮುಂದುವರೆದಿದೆ. ಈ ಪ್ರತಿಭಟನೆಯಿಂದಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಕೆಜಿ ರಸ್ತೆ, ಆನಂದ್ ರಾವ್ ರಸ್ತೆ, ಹಡ್ಸನ್ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು.
ರಾತ್ರಿ ವೇಳೆಗೆ ಸಾವಿರಾರು ಪ್ರತಿಭಟನಾಕಾರರನ್ನು ಫ್ರೀಡಂ ಪಾರ್ಕ್ ಕಡೆಗೆ ಕಳಿಸಲಾಯಿತು. ರಾತ್ರಿ ಇಡಿ ರಸ್ತೆಯಲ್ಲೇ ಕಳೆದ ಮಹಿಳೆಯರು, ಮಕ್ಕಳನ್ನು ಕೇಳುವವರು ಯಾರೂ ಇರಲಿಲ್ಲ. ಅನ್ನ, ರೊಟ್ಟಿ, ಕುಡಿಯುವ ನೀರು ಇಲ್ಲದೆ ಪರದಾಡುತ್ತಿದ್ದರು.
ಬೇಡಿಕೆಗಳು:
* ಕನಿಷ್ಠ ವೇತನ 6 ಸಾವಿರ ರುಗಳಿಗೆ ಏರಿಸುವಂತೆ ಆಗ್ರಹ.
* ಸಹಾಯಕಿಯರ ವೇತನ 3 ಸಾವಿರ ರು ನಿಂದ 7,500ಕ್ಕೇರಿಸಿ
* ಮುಂಬಡ್ತಿ, ಪಿಂಚಣಿ, ಪಿಎಫ್ ಅನ್ವಯವಾಗಲಿ
* ತಕ್ಷಣಕ್ಕೆ 1.25 ಲಕ್ಷ ಅಂಗನವಾಡಿ ಸಿಬ್ಬಂದಿಗೆ ವೇತನ ಪರಿಷ್ಕರಣೆ ಆಗಬೇಕು.
ಎಚ್ ಡಿ ಕುಮಾರಸ್ವಾಮಿ ಭೇಟಿ: ಮಂಗಳವಾರ ಬೆಳಗ್ಗೆ ಫ್ರೀಡಂ ಪಾರ್ಕಿಗೆ ಭೇಟಿ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಂತ್ವನ ಹೇಳಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಇಲ್ಲಿಗೆ ಬಂದು ಕ್ಷಮೆ ಯಾಚಿಸಿ, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.