ಮಾರ್ಚ್ 7 ಮತ್ತು 8 ರಂದು ಲೇಪಾಕ್ಷಿ ವೈಭವಂ 2020
ಬೆಂಗಳೂರು, ಮಾರ್ಚ್ 4: ಬೆಂಗಳೂರಿನಿಂದ 120 ಕಿಲೋಮೀಟರ್, ಹಿಂದುಪುರ ಪಟ್ಟಣದಿಂದ 15 ಕಿಲೋಮೀಟರ್ ಅನತಿ ದೂರದಲ್ಲಿರುವ ದಕ್ಷಿಣ ಆಂಧ್ರಪ್ರದೇಶದ ಆಕರ್ಷಕ ಪುಟ್ಟ ಗ್ರಾಮ ಲೇಪಾಕ್ಷಿ. ಇದು ಸಿರಿವಂತ ಸಂಸ್ಕೃತಿ ಮತ್ತು ಪರಂಪೆರಯ ತಾಣ. ಇದು . ಈ ಸಣ್ಣ ಕುಗ್ರಾಮ ಅತಿ ಹೆಚ್ಚು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿದೆ. 16ನೇ ಶತಮಾನದ ಅದ್ಭುತ ಕಲಾ ರಚನೆಗಳನ್ನೊಳಗೊಂಡ ವೀರಭದ್ರೇಶ್ವರ ದೇವಸ್ಥಾನ ಇಲ್ಲಿನ ಮೆರಗು. ಇಲ್ಲಿನ ವಾಸ್ತುಶಿಲ್ಪ, ಶಿಲ್ಪಗಳು, ವರ್ಣಚಿತ್ರಗಳು, ಕಲೆ ಮತ್ತು ಕರಕುಶಲತೆಗಳು ಹೆಮ್ಮೆಯ ತೆಲುಗು ಸಂಸ್ಕೃತಿಯ ವೈಭವವನ್ನು ಸಾರುತ್ತವೆ.
ಇಲ್ಲಿನ ವಿಸ್ಮಯಕಾರಿ, ಶ್ರೀಮಂತ ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯನ್ನು ಸ್ಫೂರ್ತಿಯಿಂದ ಆಚರಿಸಲು ಆಂಧ್ರಪ್ರದೇಶ ಸರ್ಕಾರ ಇದೀಗ ಕಾರ್ಯೋನ್ಮುಖವಾಗಿದೆ. ಅನಂತಪುರಂ ಜಿಲ್ಲಾಡಳಿತ ಮತ್ತು ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಇದಕ್ಕಾಗಿಯೇ ಮಾರ್ಚ್ 7 ಮತ್ತು 8 ರಂದು ಲೇಪಾಕ್ಷಿಯ ಎಬಿಆರ್ ಬಿಸಿ ಬಾಯ್ಸ್ ಸ್ಕೂಲ್ ಆವರಣದಲ್ಲಿ ''ಲೇಪಾಕ್ಷಿ ವೈಭವಂ 2020'' ಆಯೋಜಿಸುತ್ತಿದೆ ಎಂದು ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಐಎಎಸ್ ಶ್ರೀ ಗಂಧಂ ಚಂದ್ರಡು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಶ್ರೀಗಂಧಂ ಚಂದ್ರುಡು
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಂಸ್ಕೃತಿಕ ಹಬ್ಬದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಸಮೃದ್ಧಿ ಕಾಣಬಹುದು. ಸ್ಥಳೀಯರಿಗಾಗಿ ಕ್ರೀಡಾ ಸ್ಪರ್ಧೆಗಳು ಜತೆಗೆ ಶೋಭಾಯಾತ್ರೆ [ಕಾರ್ನಿವಲ್ ಪೆರೇಡ್], ಯಡ್ಲಬಂಡ್ಲು ಪೋಟಿಲು [ಎತ್ತಿನ ಗಾಡಿ ಸ್ಪರ್ಧೆ], ಕತ್ತಿ-ಸಮು [ಸಾಂಪ್ರದಾಯಿಕ ಕತ್ತಿ ವರೆಸೆ], ಕೋಲಾಟಂ,ಚಿಕ್ಕಭಜನ [ಸಾಂಸ್ಕೃತಿಕ ಗಾಯನ], ಥೋಲು-ಬೊಮ್ಮಲಾಟ [ಕೈಗೊಂಬೆಯಾಟ], ಕರ್ರಸಾಮು [ದೊಣ್ಣೆ ವರಸೆ]ಯಂತಹ ವೈಭವವನ್ನು ಕಣ್ತುಂಬಿಕೊಳ್ಳಬಹುದು ಎಂದು ತಿಳಿಸಿದರು.
ಶ್ರೀಮಂತ ಮತ್ತು ವಿಶಿಷ್ಟ ಪಾಕ ಪದ್ಧತಿ
ಅಷ್ಟೇ ಅಲ್ಲದೇ ರಾಯಲಸೀಮಾ ವಲಯ ಶ್ರೀಮಂತ ಮತ್ತು ವಿಶಿಷ್ಟ ಪಾಕ ಪದ್ಧತಿಗೆ ಖ್ಯಾತಿ ಪಡೆದಿದ್ದು, ರುಚಿಕರ, ಸ್ವಾಧಿಷ್ಟಭರಿತ ತಿನಿಸುಗಳನ್ನು ಮಾರಾಟ ಮಾಡಲು ವಿವಿಧ ಆಹಾರ ಮಾರಾಟಗಾರರಿಗೆ ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಕರಕುಶಲ ವಸ್ತು ಪ್ರದರ್ಶನ ಮತ್ತೊಂದು ವಿಶೇಷವಾಗಿದ್ದು, ಲೇಪಾಕ್ಷಿಯ ಸ್ಥಳೀಯರು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಮಾರ್ಚ್ 7 ಮತ್ತು 8 ರಂದು ಇದೇ ಸ್ಥಳದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಾಸ್ತ್ರೀಯ ಸಂಗೀತ ಪ್ರದರ್ಶನ, ಸಂಧ್ಯಾ ಮೂರ್ತಿ ತಂಡದಿಂದ ಜಾನಪದ ಕಲೆಗಳ ಮಿಶ್ರಣವನ್ನೊಳಗೊಂಡ ವಿಶೇಷ ಪ್ರದರ್ಶನ, ಖ್ಯಾತ ಗಾಯಕರಾದ ಹೇಮಚಂದ್ರ ಮತ್ತು ಶ್ರವಣ, ಸಿಂಹ, ಭಾರ್ಗವಿ ಪಿಲ್ಲೈ, ಎಂ.ಸಿ. ಚೈತು, ಕಾಜಲ್ ಮತ್ತು ಶ್ಯಾಮಲ ಅವರಿಂದ ಆಕ್ರೇಷ್ಟ್ರ ಸಹ ಆಯೋಜಿಸಲಾಗಿದೆ. ಶಿವ ಪ್ರಸಾದ್ ಮತ್ತು ಸತ್ಯ ತಂಡದಿಂದ ಹಾಸ್ಯ ಕಾರ್ಯಕ್ರಮ, ಮರಳು ಕಲಾ ಪ್ರದರ್ಶನ, ಝಗಮಗಿಸುವ ವಿನ್ಯಾಸದ ಲೇಸರ್ ಶೋ ಮನರಂಜಿಸಲಿವೆ ಎಂದು ವಿವರಿಸಿದರು.
ರಾಯಲಸೀಮೆಯ ಶ್ರೀಮಂತ ಆತಿಥ್ಯ
ಇಂತಹ ಧಾರ್ಮಿಕ, ಸಾಂಸ್ಕೃತಿಕ, ಜೀವ ಪರಂಪರೆಯ ಸಮಾಗಮವಾದ ''ಲೇಪಾಕ್ಷಿ ವೈಭವಂ -2020''ಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇವೆ. ರಾಯಲಸೀಮೆಯ ಶ್ರೀಮಂತ ಆತಿಥ್ಯ ಮತ್ತು ಸಂಸ್ಕೃತಿಯನ್ನು ಕಣ್ಣಾರೆ ಕಂಡು ಸವಿಯಲು ಬನ್ನಿ ಎಂದು ನಿಮ್ಮನ್ನು ಪ್ರೀತಿಪೂರ್ವಕವಾಗಿ ಆಮಂತ್ರಣ ನೀಡಿದರು.