ಟೋಲ್ ದರ ಇಳಿಕೆ ಮಾಡಿ, ಅನಂತ್ ಕುಮಾರ್ ಪತ್ರ
ಬೆಂಗಳೂರು, ಮೇ 7 : ದೇವನಹಳ್ಳಿ ಟೋಲ್ ದರವನ್ನು ಕಡಿಮೆ ಮಾಡುಲು ತ್ವರಿತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಸದ ಅನಂತ್ ಕುಮಾರ್ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರಿಗೆ ಪತ್ರ ಬರೆದಿದ್ದಾರೆ.
ನವಯುಗ ಟೋಲ್ ಕಂಪನಿ ಏಕಾಏಕಿ ಟೋಲ್ ದರವನ್ನು ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ. ದೇವನಹಳ್ಳಿ ಟೋಲ್ ಗೇಟ್ ಸುತ್ತಮುತ್ತಲಿನ ಜನರು ಸರ್ವೀಸ್ ರಸ್ತೆಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ಅನಂತ್ ಕುಮಾರ್ ಪತ್ರದಲ್ಲಿ ವಿವರಿಸಿದ್ದಾರೆ. [ಟೋಲ್ ದರ ಕೇಂದ್ರದತ್ತ ಕೈ ತೋರಿಸಿದ ಸರ್ಕಾರ]
ಟೋಲ್ ಶುಲ್ಕ ಹೆಚ್ಚಳವಾಗಿರುವುದರಿಂದ ದೇವನಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಬೇರೆಡೆ ಪ್ರಯಾಣ ಮಾಡಬೇಕೆಂದರೆ, ಟೋಲ್ ಪಾವತಿ ಮಾಡಿ ರಾಷ್ಟ್ರೀಯ ಹೆದ್ದಾರಿ 7ರ ಮೂಲಕ ಸಂಚರಿಸಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. [ಟೋಲ್ ದರ ಎಷ್ಟು ಹೆಚ್ಚಾಗಿದೆ]
22 ಕಿ.ಮೀ ಮಾರ್ಗದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಒಂದು ಬಾರಿ ಪ್ರಯಾಣಿಸಲು ಕಾರು, ಜೀಪು, ಹಗುರ ವಾಹನಗಳು 75 ರೂ., ಲಘು ವಾಣಿಜ್ಯ ವಾಹನ ಹಾಗೂ ಮಿನಿ ಬಸ್ಸುಗಳು 120 ರೂ., ಬಸ್, ಲಾರಿ ಹಾಗೂ ಎರಡು ಆ್ಯಕ್ಸಲ್ ವಾಹನಗಳು 235, ಮೂರರಿಂದ ಆರು ಆ್ಯಕ್ಸಲ್ ವಾಹನಗಳು 380 ರೂ. ಹಾಗೂ ಜೆಸಿಬಿಯಂತಹ ಬೃಹತ್ ಗಾತ್ರದ ವಾಹನಗಳು 470 ರೂ. ಶುಲ್ಕ ಪಾವತಿ ಮಾಡಬೇಕಾಗಿದೆ.
ಏಕಾಏಕಿ ಟೋಲ್ ದರವನ್ನು ಇಷ್ಟು ಹೆಚ್ಚಳ ಮಾಡಿದರೆ ಸಾರ್ವಜನಿಕರ ಮೇಲೆ ಹೊರೆ ವಿಧಿಸಿದಂತೆ ಆಗುತ್ತದೆ. ಟೋಲ್ ದರ ಹೆಚ್ಚಳವಾಗಿರುವುದರಿಂದ ಸಾರ್ವಜನಿಕರು ಸಂಚರಿಸುವ ಬಿಎಂಟಿಸಿ ಬಸ್ಸಿನ ಪ್ರಯಾಣ ದರವೂ ಹೆಚ್ಚಳವಾಗುತ್ತದೆ ಎಂದು ಅನಂತ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನಿಸಿ ಕೂಡಲೇ ಮದ್ಯಪ್ರವೇಶಿಸಿ ಟೋಲ್ ದರವನ್ನು ಕಡಿಮೆ ಮಾಡುವುದು ಮತ್ತು ದೇವನಹಳ್ಳಿ ಸುತ್ತಮುತ್ತಲಿನ ಜನರಿಗೆ ಉಪಯೋಗವಾಗುವಂತೆ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.