ಅತೃಪ್ತರ ಬಳಗ ಸೇರಲು ಮುಂಬೈಗೆ ಪ್ರಯಾಣಿಸಿದ ಆನಂದ್ ಸಿಂಗ್?
ಬೆಂಗಳೂರು, ಜುಲೈ 12: ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಅವರು ಇಂದು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
ಇಂದು ಸಂಜೆ 5 ರ ಸುಮಾರಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ ಅವರು, ಅಲ್ಲಿಂದ ಮುಂಬೈಗೆ ಹಾರಿ ಅತೃಪ್ತರು ಇರುವ ಹೊಟೆಲ್ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಆನಂದ್ ಸಿಂಗ್ ಅವರು ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಜುಲೈ 1 ನೇ ತಾರೀಖಿನಂದು ರಾಜೀನಾಮೆ ನೀಡಿದ್ದರು. ಆದರೆ ಅವರು ಅತೃಪ್ತ ಶಾಸಕರ ಜೊತೆ ಮುಂಬೈಗೆ ತೆರಳಿರಲಿಲ್ಲ. ಆದರೆ ಇಂದು ಅವರು ಮುಂಬೈಗೆ ಪ್ರಯಾಣ ಬೆಳೆಸಿದ್ದು ಅತೃಪ್ತರನ್ನು ಭೇಟಿ ಆಗಲು ಅವರು ತೆರಳಿದ್ದಾರೆ ಎನ್ನಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆನಂದ್ ಸಿಂಗ್ ಅವರನ್ನು ವಿಚಾರಣೆಗೆ ಹಾಜರಾಗಲು ಸ್ಪೀಕರ್ ಅವರು ಇಂದು ಸಮಯ ನೀಡಿದ್ದರು. ಆದರೆ ಆನಂದ್ ಸಿಂಗ್ ಅವರು ಇಂದು ವಿಚಾರಣೆಗೆ ಹಾಜರಾಗಿಲ್ಲ.
ಸುಪ್ರಿಂ ಕೋರ್ಟ್ ಆದೇಶ ನೀಡಿ ಮಂಗಳವಾರದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿರುವ ಕಾರಣ ಆನಂದ್ ಸಿಂಗ್ ಅವರು ಇಂದು ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೆ ವಿಪ್ ಇದ್ದರೂ ಸಹ ಆನಂದ್ ಸಿಂಗ್ ಅವರು ಇಂದು ಸದನಕ್ಕೂ ಸಹಿತ ಹಾಜರಾಗಿರಲಿಲ್ಲ.