ವಿಧಾನ ಸಭೆ ಉಪಸಭಾಧ್ಯಕ್ಷರಾಗಿ ಆನಂದ್ ಮಾಮನಿ ಆಯ್ಕೆ
ಬೆಂಗಳೂರು, ಮಾರ್ಚ್ 24: ಕರ್ನಾಟಕ ವಿಧಾನ ಸಭೆಯ ಉಪಸಭಾಧ್ಯಕ್ಷರಾಗಿ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧ್ವನಿಮತದ ಮೂಲಕ ಉಪಸಭಾಧ್ಯಕ್ಷರ ಸ್ಥಾನಕ್ಕೆ ಆನಂದ್ ಮಾಮನಿ ಅವರ ಹೆಸರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚಿಸಿದರು, ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅನುಮೋದಿಸಿದರು.
ನೂತನ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಆನಂದ್ ಮಾಮನಿಯವರನ್ನು ಸಭಾನಾಯಕ, ಸಿಎಂ ಯಡಿಯೂರಪ್ಪನವರು ಉಪಸಭಾಧ್ಯಕ್ಷರ ಪೀಠಕ್ಕೆ ಕರೆತಂದರು.
ನಂತರ ಮಾತನಾಡಿದ ನೂತನ ಉಪಸಭಾಧ್ಯಕ್ಷ ಆನಂದ್ ಮಾಮನಿ, ಕರ್ನಾಟಕ ವಿಧಾನ ಸಭೆಯ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಕ್ಕೆ ಕ್ಷೇತ್ರದ ಆರಾಧ್ಯ ದೇವತೆ ರೇಣುಕಾ ಎಲ್ಲಮ್ಮ, ಮನೆ ದೇವರಾದ ಕಲ್ಲಿಕಟ್ಟಿ ಬಸವೇಶ್ವರ ಹಾಗೂ ತಮ್ಮ ತಂದೆಯವರಾದ ಚಂದ್ರಶೇಖರ ಮಾಮನಿಯವರನ್ನು ಸ್ಮರಿಸಿದರು.
ತಮಮ್ಮ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿಯ ಎಲ್ಲ ಶಾಸಕರು, ಪ್ರತಿಪಕ್ಷದ ಪ್ರಮುಖ ನಾಯಕರಿಗೆ ಆನಂದ್ ಮಾಮನಿ ಧನ್ಯವಾದ ಸಲ್ಲಿಸಿದರು.
ಈ ಹಿಂದೆ ಆನಂದ್ ಮಾನಿಯವರ ತಂದೆ ಚಂದ್ರಶೇಖರ ಮಾಮನಿ ಕೂಡ ವಿಧಾನ ಸಭೆ ಉಪಸಭಾಧ್ಯಕ್ಷರಾಗಿದ್ದರು ಎನ್ನುವುದು ವಿಶೇಷ.