ಪರಪ್ಪನ ಅಗ್ರಹಾರದಲ್ಲಿ ಮತ್ತೆ ಶುರು ವರ್ಗಾವಣೆ ಪರ್ವ!
ಬೆಂಗಳೂರು, ಜುಲೈ 20: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಪ್ಪನ ಅಗ್ರಹಾರದ ಅಧೀಕ್ಷಕಿ ಯಾಗಿದ್ದ ಡಾ.ಆರ್ ಅನಿತಾ ಅವರನ್ನು ಇಂದು(ಜುಲೈ 20) ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ.
ಅನ್ಯಾಯ ಬಗ್ಗೆ ಟ್ವೀಟ್ ಮಾಡಿದ ಡಿ ರೂಪಾಗೆ ಭಾರಿ ಬೆಂಬಲ
ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಕೃಷ್ಣ ಕುಮಾರ್ ಅವರನ್ನು ಕಲಬುರ್ಗಿಗೆ ವರ್ಗಾವಣೆ ಮಾಡಲಾಗಿದೆ.
ಕಲಬುರ್ಗಿ ಕಾರಾಗೃಹದ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರದ ಜೈಲು ಮುಖ್ಯ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ.ಪರಪ್ಪನ ಅಗ್ರಹಾರದಲ್ಲಿ ಅಕ್ರಮ ನಡೆಯುತ್ತಿದೆ, ತಮಿಳುನಾಡಿನ ಶಶಿಕಲಾ ನಟರಾಜನ್ ಗೆ ರಾಜಾತಿಥ್ಯ ನೀಡಲಾಗುತ್ತಿದೆ, ಅದಕ್ಕೆಂದು ಶಶಿಕಲಾ ಶಶಿಕಲಾ ನಟರಾಜನ್ 2 ಕೋಟಿ ರೂ.ಲಂಚ ನೀಡಿದ್ದಾರೆಂದು ವರದಿ ನೀಡಿದ್ದ ಡಿಐಜಿ(ಕಾರಾಗೃಹ) ಡಿ.ರೂಪಾ ಅವರ ವರದಿಯಿಂದಾಗಿ ಇರಿಸು ಮುರಿಸುಂಟಾಗಿ ಜುಲೈ 17 ರಂದು ರೂಪಾ ಡಿ. ಮತ್ತು ಡಿಜಿಪಿ ಸತ್ಯನಾರಾಯಣರಾವ್ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು.
ಈ ಸಂದರ್ಭದಲ್ಲೆ ಕೃಷ್ಣ ಕುಮಾರ್ ಅವರನ್ನೂ ವರ್ಗಾವಣೆ ಮಾಡಿದ್ದ ಸರ್ಕಾರ, ಅವರಿಗೆ ಯಾವುದೇ ಸ್ಥಳ ನಿಯುಕ್ತಿಗೊಳಿಸಿರಲಿಲ್ಲ. ಇದೀಗ ಅವರನ್ನು ಕಲಬುರ್ಗಿ ಕಾರಗೃಹ ಮುಖ್ಯ ಅಧೀಕ್ಷಕರಾಗಿ ವರ್ಗಾವಣೆ ಮಾಡಿದೆ.
ಹಾಗೆಯೇ, ಪರಪ್ಪನ ಅಗ್ರಹಾರದ ಅವ್ಯವಹಾರ ಆರೋಪದಲ್ಲಿ ಇಲ್ಲಿನ ಅಧೀಕ್ಷಕಿ ಡಾ.ಆರ್ ಅನಿತಾ ಅವರ ಹೆಸರೂ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಬೇಕೆಂದು ಇಲ್ಲಿನ ಖೈದಿಗಳೇ ಒತ್ತಾಯಿಸಿದ್ದರು. ಆದ್ದರಿಂದಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಧಾರವಾಡ ಜೈಲಿನ ಅಧೀಕ್ಷಕ ಪಿ.ಎಸ್. ರಮೇಶ್ ಅವರನ್ನು ಅನಿತಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಿದೆ.