ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಬಗ್ಗೆ ಬಿಜೆಪಿ ಎಂಎಲ್ಎ ಹೇಳಿದ್ದೇನು: ವಿಜಯ್ ಕುಮಾರ್ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಬಿ ಎನ್ ವಿಜಯ್ ಕುಮಾರ್ ಬಿಜೆಪಿ ಎಂಎಲ್ಎ ಸಂದರ್ಶನ : ಸಿ ಎಂ ಬಗ್ಗೆ ಹೇಳಿದ್ದೇನು?

ಬೆಂಗಳೂರು, ಜಯನಗರ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿರುವ ಬಿಜೆಪಿ ಶಾಸಕ ಬಿ ಎನ್ ವಿಜಯ್ ಕುಮಾರ್, ಪೀಪಲ್ ಫ್ರೆಂಡ್ಲಿ ಎಂಎಲ್ಎ ಎಂದೇ ಹೆಸರು ಪಡೆದವರು. ಕ್ಷೇತ್ರದ ಜನರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ವಿಜಯ್ ಕುಮಾರ್ ಹಲವಾರು ಅಭಿವೃದ್ದಿ ಕೆಲಸಗಳನ್ನು ಕೈಗೊಂಡಿದ್ದಾರೆ.

ತಮ್ಮ ಕಚೇರಿಯಲ್ಲಿ ಅಥವಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಲಭ್ಯವಿರುವ ವಿಜಯ್ ಕುಮಾರ್, ಮುಂಬರುವ ಚುನಾವಣೆಯಲ್ಲೂ ಜಯನಗರದ ಮತದಾರ ಆಶೀರ್ವದಿಸಲಿದ್ದಾನೆ ಎನ್ನುವ ಖಚಿತ ಭರವಸೆಯಲ್ಲಿದ್ದಾರೆ. ಬಿ ಎನ್ ವಿಜಯ್ ಕುಮಾರ್ ಅವರ ಜೊತೆಗಿನ ಸಂದರ್ಶನದ ಆಯ್ದಭಾಗ.

ಪ್ರ: ಸತತ ಎರಡು ಬಾರಿ ಚುನಾವಣೆ ಗೆದ್ದಿದ್ದೀರಾ, ಮತ್ತೆ ಚುನಾವಣೆ ಹತ್ತಿರ ಬರ್ತಾ ಇದೆ, ಈ ಬಾರಿ ಹೇಗಿದೆ ಸರ್ ರಾಜಕೀಯ ವಾತಾವರಣ?
ವಿಜಯ್ ಕುಮಾರ್: ನಾನು ಎರಡು ಬಾರಿ ಆಯ್ಕೆಯಾಗಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಆದರೆ ಚುನಾವಣೆಗೆ ಆರು ತಿಂಗಳ ಮೊದಲೇ ಚುನಾವಣೆಯ ಪ್ರಚಾರ ಆರಂಭವಾಗಿರುವುದು ಇದೇ ಮೊದಲು. ಈ ಹಿಂದೆ ಆರೇಳು ವಾರುಗಳ ಹಿಂದೆ ಪ್ರಚಾರ ಆರಂಭವಾಗುತ್ತಿತ್ತು. ಈ ಬಾರಿ ತುರುಸಿನ ಸ್ಪರ್ಧೆಯಿರುವುದು ಖಚಿತ.

ಪ್ರ: ಗುಜರಾತ್ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ಯಾವ ರೀತಿ ಎಫೆಕ್ಟ್ ಬೀರಬಹುದು ಎನ್ನುವುದು ನಿಮ್ಮ ಅನಿಸಿಕೆ?
ವಿಜಯ್ ಕುಮಾರ್: ಗುಜರಾತ್ ಚುನಾವಣೆಯ ಫಲಿತಾಂಶ ಖಂಡಿತ ಕರ್ನಾಟಕದಲ್ಲಿ ಪರಿಣಾಮ ಬೀರುತ್ತದೆ. ಅಲ್ಲಿನ ಜಯ ಇಲ್ಲಿನ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಇನ್ನೂ ಹೆಚ್ಚಿನ ಉತ್ಸಾಹ ಮತ್ತು ಶಕ್ತಿಯನ್ನು ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಂದೆ ಓದಿ..

 ಮುಖ್ಯಮಂತ್ರಿಗಳಿಗೆ ನಾನು ಈ ಪದವನ್ನು ಬಳಸಬಾರದು

ಮುಖ್ಯಮಂತ್ರಿಗಳಿಗೆ ನಾನು ಈ ಪದವನ್ನು ಬಳಸಬಾರದು

ಪ್ರ: ನಮ್ಮದು ಭ್ರಷ್ಟಾಚಾರ ಮುಕ್ತ ಸರಕಾರ, ಹೇಳಿದ್ದನ್ನು ಮಾಡಿದ್ದೇವೆ. ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಸಿದ್ದರಾಮಯ್ಯನವರು ಸಮಾವೇಶಗಳಲ್ಲಿ ಹೇಳುತ್ತಿದ್ದಾರೆ, ಈ ಬಗ್ಗೆ?

ವಿಜಯ್ ಕುಮಾರ್: ಸ್ವಾಭಾವಿಕವಾಗಿ ಮುಖ್ಯಮಂತ್ರಿಗಳು ಇದನ್ನು ಹೇಳುವುದು ಸಹಜ. ಮುಖ್ಯಮಂತ್ರಿಗಳಿಗೆ ನಾನು ಈ ಪದವನ್ನು ಬಳಸಬಾರದು, ಆದರೂ, he is a most adamant ಮುಖ್ಯಮಂತ್ರಿ. ರಾಜ್ಯದಲ್ಲಿ ಕಾನೂನು ಹದೆಗೆಟ್ಟಿದೆ. ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎನ್ನುವ ಭಾವನೆ ಜನರಲ್ಲಿ ಕಾಡುತ್ತಿದೆ. ಜನರ, ಅಧಿಕಾರಿಗಳ ಜೊತೆ, ಅದೂ ಯಾಕೆ ಶಾಸಕರು ಮತ್ತು ಸಚಿವರ ಜೊತೆ ಮುಖ್ಯಮಂತ್ರಿಗಳು ಮಾತನಾಡುವ ರೀತಿ ಸರಿಯಲ್ಲ. ತಾನು ಮಾಡಿದ್ದೇ ಸರಿ ಎನ್ನುವ ದಾರಿಯಲ್ಲಿ ಅವರು ಸಾಗುತ್ತಿದ್ದಾರೆ. ಪ್ರಧಾನಮಂತ್ರಿಗಳನ್ನು ಅವರು ಕೆಣಕುವ ರೀತಿ ಎಲ್ಲವನ್ನೂ ಜನ ನೋಡುತ್ತಿದ್ದಾರೆ. ಸರಕಾರ ಎಲ್ಲಾ ವಿಭಾಗಗಳಲ್ಲಿ ವೈಫಲ್ಯವನ್ನು ಕಂಡಿದೆ.

 ರಾಮಲಿಂಗ ರೆಡ್ಡಿಯವರ ಮಗಳು ಸೌಮ್ಯಾ ರೆಡ್ಡಿ

ರಾಮಲಿಂಗ ರೆಡ್ಡಿಯವರ ಮಗಳು ಸೌಮ್ಯಾ ರೆಡ್ಡಿ

ಪ್ರ: ರಾಜ್ಯ ಗೃಹ ಸಚಿವ ರಾಮಲಿಂಗ ರೆಡ್ಡಿಯವರ ಮಗಳು ಸೌಮ್ಯಾ ರೆಡ್ಡಿ ಈ ಬಾರಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಅಂತ ಹೇಳಲಾಗುತ್ತಿದೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೀವೆಷ್ಟು ಕಾನ್ಫಿಡೆಂಟ್ ಆಗಿದ್ದೀರಾ?


ವಿಜಯ್ ಕುಮಾರ್: ಪ್ರತೀ ಚುನಾವಣೆ ಒಂದು ಸವಾಲೇ. ನಾನು ಈ ಮೇಲೆ ಹೇಳಿದಂತೆ, ಚುನಾವಣಾ ಪ್ರಚಾರ ಅನಧಿಕೃತವಾಗಿ ಈಗಾಗಲೇ ಆರಂಭವಾಗಿದೆ. ನಾನು, ಯಾವುದೇ ಜಾತಿ, ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡಿದವನಲ್ಲ. ಶಾಸಕರ ನಿಧಿಯನ್ನು ಕ್ಷೇತ್ರದ ಅಭಿವೃದ್ದಿಗೆ ಸಮರ್ಥವಾಗಿ ಬಳಸಿಕೊಂಡಿದ್ದೇನೆ. ರಾಜ್ಯ ಸರಕಾರದ ವಿರುದ್ದ ಜನಾಕ್ರೋಶ ಇರುವುದರಿಂದ ನಮಗೆ ಪೂರಕ ವಾತಾವರಣವಿದೆ.

 ಜಯನಗರ ಶಾಪ್ಪಿಂಗ್ ಕಾಂಪ್ಲೆಕ್ಸ್ ನ ಮೊದಲ ಭಾಗ

ಜಯನಗರ ಶಾಪ್ಪಿಂಗ್ ಕಾಂಪ್ಲೆಕ್ಸ್ ನ ಮೊದಲ ಭಾಗ

ಪ್ರ: ಜಯನಗರ ಶಾಪ್ಪಿಂಗ್ ಕಾಂಪ್ಲೆಕ್ಸ್ ನ ಮೊದಲ ಭಾಗ ರೆಡಿಯಾಗಿ ಎರಡು ವರ್ಷದ ಮೇಲಾಯಿತು, ಪ್ರಮುಖವಾಗಿ ವ್ಯಾಪಾರಸ್ಥರು ಶಿಫ್ಟ್ ಆಗಲು ಒಪ್ತಾ ಇಲ್ಲ, ಅವರನ್ನು ಮನವೊಲಿಸುವ ಕೆಲಸ ಆಗ್ತಾ ಇದೆಯಾ, ಕೋಟ್ಯಾಂತರ ರೂಪಾಯಿ ಪ್ರಾಜೆಕ್ಟ್ ನೆನೆಗುದಿಗೆ ಬಿದ್ದಿದೆಯಲ್ವಾ?

ವಿಜಯ್ ಕುಮಾರ್: ಇದೊಂದು ಕಂಪ್ಲೀಟ್ ಆಗಿ ಬಿಬಿಎಂಪಿ, ಬಿಡಿಎ ಮತ್ತು ಸರಕಾರದ ವೈಫಲ್ಯ. ನಾನು ಸುಮಾರು ಇಲ್ಲಾಂದ್ರುನೂ ಹತ್ತು ಬಾರಿ ವ್ಯಾಪಾರಸ್ಥರ ಜೊತೆ ಮಾತನಾಡಿದ್ದೇನೆ. ಕಾಮಗಾರಿ ಹಂತದಲ್ಲಿ ಇರುವಾಗಲೇ, ವ್ಯಾಪಾರಸ್ಥರು ನಿಮಗೆ ಹೇಗೆ ಬೇಕೋ ಹಾಗೇ ಸಣ್ಣಸಣ್ಣ ಬದಲಾವಣೆ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದೆ. ಪುಟ್ಟಣ್ಣ ಚಿತ್ರಮಂದಿರ ಎರಡನೇ ಹಂತದಲ್ಲಿ ಶುರುವಾಗುತ್ತದೆ. ರವೀಂದ್ರ ಕಲಾಕ್ಷೇತ್ರದ ರೀತಿಯಲ್ಲಿ ಸಭಾಂಗಣವಿರಲಿದೆ. ಸಾವಿರಕ್ಕೂ ಹೆಚ್ಚು ಆಸನದ ಚಿತ್ರಮಂದಿರ ಅಲ್ಲಿ ಬರಲಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದೆ. ಸ್ವಾತಂತ್ರ್ಯ ಹೋರಾಟಗಾರ ದೊರೈಸ್ವಾಮಿಯವರಿಗೆ ಕೆಲವರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ನಾನು ಅವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ವಿವರಿಸಿದ್ದೇನೆ. ನನ್ನ ಯಾವ ಪ್ರಯತ್ನಗಳೂ ಪ್ರಯೋಜನಕ್ಕೆ ಬಂದಿಲ್ಲ.

 ನಿಮಗೆ ತೃಪ್ತಿ ನೀಡಿದ ಕೆಲಸ ಯಾವುದು?

ನಿಮಗೆ ತೃಪ್ತಿ ನೀಡಿದ ಕೆಲಸ ಯಾವುದು?

ಪ್ರ: ಜಯನಗರದ ಶಾಸಕರಾಗಿ ಬಹಳಷ್ಟು ಕೆಲಸವನ್ನು ನೀವು ಮಾಡಿದ್ದೀರಾ, ಇದರಲ್ಲಿ ನಿಮಗೆ ತೃಪ್ತಿ ನೀಡಿದ ಕೆಲಸ ಯಾವುದು, ಅಂದರೆ ಸಾರ್ವಜನಿಕರು ತುಂಬಾ ಮೆಚ್ಚಿದಂತಹ ಕೆಲಸ?

ವಿಜಯ್ ಕುಮಾರ್: ಮಳೆನೀರು ಕೊಯ್ಲು ಅನ್ನು ಜಾರಿಗೆ ತಂದಿದ್ದೇನೆ. ಕ್ಷೇತ್ರದ ವ್ಯಾಪ್ತಿಯ ಸುಮಾರು 280ಕ್ಕೂ ಹೆಚ್ಚು ಟ್ರಾನ್ಸ್ ಫಾರಂಗಳು ಫುಟ್ ಪಾತ್ ನಲ್ಲಿದ್ದವು. ಅದನ್ನೆಲ್ಲಾ ಸ್ಥಳಾಂತರಿಸಿದ್ದೇನೆ. ಪಾರ್ಕುಗಳು ನಿರ್ಮಾಣಗೊಂಡಿದೆ. ಪ್ರಮುಖವಾಗಿ ರಾಗೀಗುಡ್ಡ ಸ್ಲಮ್ ಚಿತ್ರಣವನ್ನು ಬದಲಾಯಿಸಲು ಆತ್ಮಸಾಕ್ಷಿಯಾಗಿ ಪ್ರಯತ್ನಿಸಿದ್ದೇನೆ. ಬಹಳಷ್ಟು ಕೆಲಸಗಳು ಅಲ್ಲಿ ಮುಗಿದಿದೆ. ರಾಗೀಗುಡ್ಡ ಸ್ಲಮ್ ಅನ್ನುವುದನ್ನು 'ವಿವೇಕಾನಂದ ವಸತಿ ಸಂಕೀರ್ಣ' ಎಂದು ಹೆಸರು ಬದಲಾಯಿಸಲಾಗಿದೆ. ಸುಮಾರು 800ಕ್ಕೂ ಹೆಚ್ಚು ಕುಟುಂಬಗಳಿಗೆ ಇದರ ಲಾಭವಾಗಲಿದೆ. ಜೀವನ ಪರ್ಯಂತ ಯಾರಿಗೆ ಮನೆ ಕಟ್ಟಲು ಸಾಧ್ಯವಿಲ್ಲವೋ, ಅಂತವರಿಗೆ ಮನೆ ಮೊದಲು ಮಂಜೂರು ಮಾಡಿಸಿದ್ದೇನೆ. ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ನನಗೆ ಖುಷಿ ಮತ್ತು ತೃಪ್ತಿ ತಂದುಕೊಟ್ಟ ಕೆಲಸ ಇದಾಗಿದೆ.

 ಬಿಜೆಪಿ ಅಧಿಕಾರಕ್ಕೆ ಬಂದರೆ, ಸಚಿವ ಸ್ಥಾನ ಬೇಕಾ?

ಬಿಜೆಪಿ ಅಧಿಕಾರಕ್ಕೆ ಬಂದರೆ, ಸಚಿವ ಸ್ಥಾನ ಬೇಕಾ?

ಪ್ರ: ಬಿಜೆಪಿ ಅಧಿಕಾರಕ್ಕೆ ಬಂದರೆ, ಸಚಿವ ಸ್ಥಾನ expect ಮಾಡ್ತಾ ಇದ್ದೀರಾ?

ವಿಜಯ್ ಕುಮಾರ್: ಖಂಡಿತವಾಗಿಯೂ ಯಾವ ಸಚಿವ ಸ್ಥಾನದ ಆಕಾಂಕ್ಷಿಯೂ ನಾನಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಂದೆ, ಯಾವುದೇ ಆಪೇಕ್ಷೆಯನ್ನು ಇಟ್ಟುಕೊಂಡಿಲ್ಲ.

English summary
An exclusive interview of Jayanagar constituency (in Bengaluru, Karnataka) MLA BN Vijayakumar - Part 1. Vijayakumar explained issues in Jayanagar constituency, preparation for upcoming election and his view on present Siddaramaiah government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X