ಅಮ್ನೆಸ್ಟಿ ಇಂಟರ್ ನ್ಯಾಷನಲ್ ಬೆಂಗಳೂರು ಕಚೇರಿ ಮೇಲೆ ಇಡಿ ದಾಳಿ
ಬೆಂಗಳೂರು, ಅಕ್ಟೋಬರ್ 25: ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ವಿರುದ್ಧ ಇರುವ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪದ ವಿಚಾರವಾಗಿ ಜಾರಿ ನಿರ್ದೇಶನಾಲಯವು (ಇಡಿ) ಗುರುವಾರದಂದು ಬೆಂಗಳೂರು ಸೇರಿದಂತೆ ಎರಡು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಫೆಮಾ ಅಡಿಯಲ್ಲಿ ಶೋಧ ನಡೆಸಲಾಗಿದೆ. ದಾಖಲೆಗಳಿಗಾಗಿ ಈ ಕಾರ್ಯಾಚರಣೆ ನಡೆದಿದೆ. ಅಮ್ನೆಸ್ಟಿ ಇಂಟರ್ ನ್ಯಾಷನಲ್ ಗೆ ಬಂದಿರುವ ಎಫ್ ಸಿಆರ್ ಎ ಅನುದಾನಗಳಿಗೆ ಸಂಬಂಧಿಸಿದಂತೆ ಫೆಮಾ ಉಲ್ಲಂಘನೆಯಾಗಿದೆ ಎಂಬ ಆರೋಪ ಇದೆ ಎಂದು ಜಾರಿ ನಿರ್ದೇಶನಾಲಯದಿಂದ ತಿಳಿಸಲಾಗಿದೆ.
ಪರಿಸರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಸರಕಾರೇತರ ಸಂಸ್ಥೆ ಗ್ರೀನ್ ಪೀಸ್ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸಂಸ್ಥೆಗಳ ಹನ್ನೆರಡಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯವು ಕೆಲ ಸಮಯದ ಹಿಂದೆ ಸ್ಥಗಿತಗೊಳಿಸಿತ್ತು. ಬೆಂಗಳೂರಿನಲ್ಲಿನ ಸಂಸ್ಥೆಯ ಆವರಣದಲ್ಲಿ ಈ ಆರೋಪಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
36 ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಇದರಲ್ಲಿ ಒಳಗೊಂಡಿದ್ದು, ಮೇ 2014 ಮತ್ತು ಆಗಸ್ಟ್ 2016ರ ಮಧ್ಯೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಹಣವನ್ನು ಸ್ವೀಕರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.