ಅಮಿತ್ ಶೂಟೌಟ್ ಕೇಸ್: ಆರೋಪಿ ರಾಜೇಶ್ ನ್ಯಾಯಾಂಗ ಬಂಧನ
ಬೆಂಗಳೂರು, ಜನವರಿ 18: ವಕೀಲ ಶೂಟೌಟ್ ಪ್ರಕರಣ ಕುರಿತು ಪ್ರಮುಖ ಆರೋಪಿ ರಾಜೇಶ್ ಅವರನ್ನು 2 ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಶೂಟೌಟ್ ಪ್ರಕರಣ ಕುರಿತು ಸೋಲದೇವನಹಳ್ಳಿ ಪೊಲೀಸರು ರಾಜೇಶ್ ಅನ್ನು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಎರಡನೇ ಆರೋಪಿ ರಾಜೇಶ್ ತಂದೆ ಗೋಪಾಲಕೃಷ್ಣ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ರಾಜೇಶ್ ಸಹ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.[ಪೀಣ್ಯ: ಅನೈತಿಕ ಸಂಬಂಧದ ಶಂಕೆ, ವಕೀಲನಿಗೆ ಗುಂಡಿಕ್ಕಿ ಹತ್ಯೆ]
ನೆಲಮಂಗಲದ ಹೆಸರಘಟ್ಟ ಮುಖ್ಯರಸ್ತೆಯಲ್ಲಿನ ಆಚಾರ್ಯ ಕಾಲೇಜು ಸಮೀಪ ಶುಕ್ರವಾರ ಮಧ್ಯಾಹ್ನ ರಾಜೇಶ್ ಪತ್ನಿಯ ಪರಿಚಯಸ್ಥ ವಕೀಲ ಅಮಿತ್ ಮೇಲೆ ಗುಂಡಿನ ದಾಳಿ ನಡೆದಿತ್ತು. ನಂತರ ಪಿಡಿಒ ಆಗಿದ್ದ ರಾಜೇಶ್ ಪತ್ನಿ ಶೃತಿಗೌಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಗುಂಡಿನ ದಾಳಿ ನಾವೇ ಮಾಡಿರುವುದಾಗಿ ರಾಜೇಶ್ ಮತ್ತು ಮಾವ ಗೋಪಾಲಕೃಷ್ಣ ಪೊಲೀಸರಿಗೆ ಶರಣಾಗಿದ್ದರು. ಅಲ್ಲದೆ ಅಮಿತ್ ಮತ್ತು ಶೃತಿಗೌಡ ನಡುವೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿತ್ತು.
ಆದರೆ ಠಾಣೆಯಲ್ಲಿ ರಾಜೇಶ್ ಮತ್ತು ಮಾವ ಗೋಪಾಲಕೃಷ್ಣ ವಿಚಾರಣೆ ವೇಳೆ ಇಬ್ಬರು ನಾನೇ ಗುಂಡು ಹಾರಿಸಿರುವುದಾಗಿ ತಿಳಿಸಿದ್ದರು. ಮೊದಲು ಮಾವ ಗೋಪಾಲಕೃಷ್ಣನನ್ನು ವಿಚಾರಣೆಗೊಳಪಡಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ನಂತರ ರಾಜೇಶ್ ನನ್ನು ವಿಚಾರಣೆ ಮಾಡಿದ ಪೊಲೀಸರು ಬುಧವಾರ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದ್ದು, ನ್ಯಾಯಂಗ ಬಂಧನಕ್ಕೊಳಪಡಿಸಿದ್ದಾರೆ.