ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿ ಆರಂಭಿಸಿ: ಸಿಎಂ ಮನವಿ
Recommended Video
ಬೆಂಗಳೂರು, ಮೇ 31: ಭಾರತದಲ್ಲಿನ ಅಮೇರಿಕಾ ರಾಯಭಾರಿ ಕೆನ್ನೆತ್ ಜಸ್ಟರ್, ಚೆನ್ನೈ ಅಮೇರಿಕಾ ಕಾನ್ಸುಲ್ ಜನರಲ್ ರಾಬರ್ಟ್ ಜಿ ಬರ್ಗೆಸ್, ರಾಜಕೀಯ ಹಾಗೂ ಆರ್ಥಿಕ ಅಧಿಕಾರಿ ಜೋಸೆಫ್ ಬರ್ನಥ್ ಹಾಗೂ ಸಾರ್ವಜನಿಕ ವ್ಯವಹಾರ ಅಧಿಕಾರಿ ಲಾರೆನ್ ಲವಲೇಸ್ ಅವರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.
ಬೆಂಗಳೂರಿನಲ್ಲಿ ಅಮೆರಿಕಾದ ರಾಯಭಾರ ಕಚೇರಿಯನ್ನು ಆರಂಭಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ತಮ್ಮನ್ನು ಭೇಟಿ ಮಾಡಿದ ಅಮೆರಿಕಾದ ನಿಯೋಗಕ್ಕೆ ತಿಳಿಸಿದ್ದಾರೆ.
ಮೈತ್ರಿ ಸರಕಾರವೇನೂ ನಿದ್ದೆ ಮಾಡ್ತಿಲ್ಲ ಎಂದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರಿನಿಂದ ಅಮೆರಿಕಾಗೆ ತೆರಳುವವರಿಗೆ ವೀಸಾ ನೀಡುವ ನಿಟ್ಟಿನಲ್ಲಿ ಈ ಕಚೇರಿಯನ್ನು ತಕ್ಷಣದಲ್ಲಿ ಆರಂಭಿಸುವುದು ಅಗತ್ಯವಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ತಿಳಿಸಿದರು.
ಅಮೆರಿಕಾ ರಾಯಭಾರ ಕಚೇರಿ ಆರಂಭಿಸುವ ಸಂಬಂಧ ಅಗತ್ಯವಿರುವ ಜಾಗ ಹಾಗೂ ಇತರ ಎಲ್ಲಾ ಮೂಲ ಸೌಕರ್ಯವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ ಎಂದು ಮುಖ್ಯಮಂತ್ರಿಗಳು ನಿಯೋಗಕ್ಕೆ ಭರವಸೆ ನೀಡಿದರು.
ಅಮೆರಿಕಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ 'ಪ್ರವಾಸಿ ವೀಸಾ'ದ ಅಡಿ ಅಮೆರಿಕಾಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ವಿವಿಧ ರೀತಿಯ ವೀಸಾ ಅಡಿ ಅಮೆರಿಕಾಗೆ ಭೇಟಿ ನೀಡುತ್ತಿರುವವರಿಗೆ ಇಲ್ಲಿಯೇ ಕಚೇರಿಯನ್ನು ಆರಂಭಿಸುವುದರಿಂದ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಮುನಿರತ್ನ ಮುನ್ನಡೆಗೆ HDK ಖುಷಿ: JDS ಕಾರ್ಯಕರ್ತರಲ್ಲಿ ಕಸಿವಿಸಿ?!
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಮೆರಿಕದ ಭಾರತ ರಾಯಭಾರಿ ಜಸ್ಟರ್ ಅವರು ಈ ಬಗ್ಗೆ ಉನ್ನತ ಹಂತದಲ್ಲಿ ಪ್ರಸ್ತಾಪಿಸುವುದಾಗಿ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.
ಇದಲ್ಲದೆ ಬೆಂಗಳೂರಿನಲ್ಲಿ ಸುಮಾರು 370 ಅಮೆರಿಕದ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆಯನ್ನು ನೀಡಿದೆ. ಈ ಕಂಪನಿಗಳು ಎದುರಿಸುತ್ತಿರುವ ಮೂಲಭೂತ ವ್ಯವಸ್ಥೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮನವಿಗೆ ಸ್ಪಂದಿಸಿ ಈ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಒದಗಿಸುವಂತೆ ಅಲ್ಲಿಯೇ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಂಪುಟ ರಚನೆ ಒಪ್ಪಂದ ಅಂತಿಮ: ಜೆಡಿಎಸ್ ಬಿಗಿಪಟ್ಟಿಗೆ ಮಣಿದ ಕಾಂಗ್ರೆಸ್
ಮುಖ್ಯ ಕಾರ್ಯದರ್ಶಿ ಎನ್ ರತ್ನಪ್ರಭಾ ಅವರು ಮಾತನಾಡಿ ಬೆಂಗಳೂರಿನಲ್ಲಿ ಕೈಗೊಂಡಿರುವ ವಿವಿಧ ರೀತಿಯ ಅಭಿವೃದ್ಧಿ ಕ್ರಮಗಳನ್ನು ವಿವರಿಸಿದರು. ಮೆಟ್ರೋ ರೈಲು ವ್ಯವಸ್ಥೆ, ಎಕ್ಸ್ಪ್ರೆಸ್ ಹೆದ್ದಾರಿ, ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ನಿಯೋಗಕ್ಕೆ ಮನವರಿಕೆ ಮಾಡಿದರು.
ಪ್ರವಾಸೋದ್ಯಮ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಮೆರಿಕಾ ಹಾಗೂ ಕರ್ನಾಟಕದ ನಡುವಣ ಬಾಂಧವ್ಯವನ್ನು ಸಭೆ ಸ್ಮರಿಸಿತು. ಪ್ರವಾಸೋದ್ಯಮ ಹಾಗೂ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವುದನ್ನು ಅಮೆರಿಕಾದ ನಿಯೋಗ ಶ್ಲಾಘಿಸಿತು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಿಜಯ ಭಾಸ್ಕರ್, ಡಿ ವಿ ಪ್ರಸಾದ್, ಲಕ್ಷ್ಮಿ ನಾರಾಯಣ್, ಗೌರವ್ ಗುಪ್ತ ಅವರು ಉಪಸ್ಥಿತರಿದ್ದರು.