ಕೇಳಿದಷ್ಟು ಹಣ ನೀಡಿಲ್ಲವೆಂದು ಶವವನ್ನು ಮಾರ್ಗದಲ್ಲಿ ಇರಿಸಿ ಹೋಗಿದ್ದ ಆಂಬುಲೆನ್ಸ್ ಚಾಲಕನ ಬಂಧನ
ಬೆಂಗಳೂರು, ಮೇ, 29: ಕೇಳಿದಷ್ಟು ಹಣ ನೀಡಿಲ್ಲವೆಂಬ ಕಾರಣಕ್ಕೆ ಕೋವಿಡ್ ರೋಗಿಯ ಮೃತದೇಹವನ್ನು ಮಾರ್ಗದಲ್ಲೇ ಇರಿಸಿಹೋಗಿದ್ದ ಆರೋಪದಡಿ ಆಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಜಯನಗರ 9 ನೇ ಬ್ಲಾಕ್ನಲ್ಲಿರುವ ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ನಿಂದ ಹೆಬ್ಬಾಳಿನ ಚಿರಶಾಂತಿಧಾಮ ಎಲೆಕ್ಟ್ರಿಕ್ ಕ್ರೆಮಟೋರಿಯಂಗೆ ಶವವನ್ನು ಸಾಗಿಸಲು ಈ ಆರೋಪಿ ಆಂಬುಲೆನ್ಸ್ ಚಾಲಕ ಶರತ್ ಗೌಡ 18,000 ರೂ. ಕೇಳಿದ್ದು, ಹಣ ನೀಡಿಲ್ಲವೆಂದು ಶವವನ್ನು ದಾರಿಯಲ್ಲೇ ಬಿಟ್ಟು ಹೋಗಿದ್ದ. ಈ ಆರೋಪದಲ್ಲಿ ಶರತ್ ಗೌಡನನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ತಾಯಿಯ ಸಾವಿನ ಸುದ್ದಿ ನಡುವೆಯೇ 15 ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಆಂಬ್ಯುಲೆನ್ಸ್ ಚಾಲಕ
ಅನುಜ್ ಸಿಂಗ್ ಎಂಬವರು ಕೊರೊನಾ ಸೋಂಕಿನಿಂದಾಗಿ ಜಯದೇವ ಆಸ್ಪತ್ರೆಯಲ್ಲಿ ಮೇ 24ರಂದು ಮೃತಪಟ್ಟಿದ್ದು ಮೃತದೇಹವನ್ನು ಹೆಬ್ಬಾಳದ ಚಿತಾಗಾರಕ್ಕೆ ಸಾಗಿಸಲು ಕುಟುಂಬಸ್ಥರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕ ಶರತ್ ಗೌಡ 18 ಸಾವಿರ ಕೊಟ್ಟರೆ ಮೃತದೇಹವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದು ಮೃತನ ಪತ್ನಿ, 3 ಸಾವಿರ ಹೊಂದಿಸಿ ಚಾಲಕನಿಗೆ ನೀಡಿದ್ದರು. ಮೃತದೇಹವನ್ನು ಹೆಬ್ಬಾಳ ಚಿತಾಗಾರ ಬಳಿ ತಂದಿದ್ದ ಆರೋಪಿಯು ಮೃತರ ಪತ್ನಿಯ ಬಳಿ ಉಳಿದ ಹಣವನ್ನು ಕೇಳಿದ್ದು ಈ ಸಂದರ್ಭ ಪತ್ನಿ ಹಣವಿಲ್ಲ ಎಂದು ಹೇಳಿದಾಗ ಆರೋಪಿಯು ಪಾದಚಾರಿ ದಾರಿಯಲ್ಲಿ ಮೃತದೇಹವನ್ನು ಇಳಿಸಿ ಹೋಗಿದ್ದ. ಇನ್ನು ಆಂಬುಲೆನ್ಸ್ನಲ್ಲಿದ್ದ ಇನ್ನೊಬ್ಬ ಆರೋಪಿ ನಾಗೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಸಿ ಕೆ ಬಾಬಾ, ಇಂತಹ ಅಮಾನವೀಯ ಕೃತ್ಯ ಸ್ವೀಕರಾರ್ಹವಲ್ಲ. ಆಂಬುಲೆನ್ಸ್ ಚಾಲಕ ಮಾಡಿದ ಕೃತ್ಯ ಆತನ ಕಠೋರ ಮನೋಭಾವವನ್ನು ತೋರಿಸುತ್ತದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಯನಗರ 9 ನೇ ಬ್ಲಾಕ್ನಿಂದ ಹೆಬ್ಬಾಳಿನ ಚಿರಶಾಂತಿಧಾಮಕ್ಕೆ 30 ಕಿಲೋಮೀಟರ್ ದಾರಿಯಿದ್ದು, ಇದರ ವೆಚ್ಚ 2,000 ರೂ.ಗಳನ್ನು ಮೀರಲ್ಲ ಎಂದು ಕೂಡಾ ಡಿಸಿಪಿ ತಿಳಿಸಿದ್ದಾರೆ.
ವೈದ್ಯರ ಜತೆ ಕೊರೊನಾದಿಂದ ಗುಣಮುಖನಾದ ಆಂಬ್ಯುಲೆನ್ಸ್ ಚಾಲಕನ ನೃತ್ಯ
ಈ ತಿಂಗಳ ಆರಂಭದಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಆಂಬ್ಯುಲೆನ್ಸ್ ಸೇವೆಗಳಿಗೆ ಶುಲ್ಕ ವಿಧಿಸಲು ದರವನ್ನು ಅಧಿಕೃತವಾಗಿ ತಿಳಿಸಿತ್ತು. ಸಾರಿಗೆ ಇಲಾಖೆ ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್ಗಳು 10 ಕಿಲೋಮೀಟರ್ವರೆಗೆ 1,500 ರೂ. ಹಾಗೂ ಆ ಬಳಿಕ ಪ್ರತಿ ಕಿಲೋ ಮೀಟರ್ಗೆ 12 ರೂ., ಪ್ರತಿ ಗಂಟೆಗೆ 200 ರೂ. ಯಂತೆ ಪಡೆಯಬಹುದಾಗಿದೆ.
ಆಂಬ್ಯುಲೆನ್ಸ್ಗಳಿಗೆ ಗರಿಷ್ಠ ಶುಲ್ಕವನ್ನು 10 ಕಿಲೋಮೀಟರ್ವರೆಗೆ 2,000 ರೂ ಎಂದು ನಿಗದಿಪಡಿಸಲಾಗಿದೆ. ಆ ಬಳಿಕ ಪ್ರತಿ ಕಿಲೋಮೀಟರ್ಗೆ 12 ರೂ. ವೇಟಿಂಗ್ ಚಾರ್ಜ್ ಗಂಟೆಗೆ 250 ರೂ. ಎಂದು ನಿಗದಿಪಡಿಸಲಾಗಿದೆ. ಹಾಗೆಯೇ ಇವೆಲ್ಲವೂ ಆಮ್ಲಜನಕ, ಆಂಬ್ಯುಲೆನ್ಸ್ ಉಪಕರಣಗಳು, ಪಿಪಿಇ ಕಿಟ್, ಕೈಗವಸುಗಳು, ಮುಖವಾಡ, ಶೀಲ್ಡ್, ಸ್ಯಾನಿಟೈಸೇಶನ್, ಚಾಲಕ ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರು ಸೇರಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Recommended Video