ಆಂಬಿಡೆಂಟ್ ಪ್ರಕರಣ ಮುಚ್ಚಿಹಾಕಲು ಪೊಲೀಸರಿಗೆ ಲಂಚ: ರವಿಕೃಷ್ಣಾ ರೆಡ್ಡಿ ಆರೋಪ
ಬೆಂಗಳೂರು, ಡಿಸೆಂಬರ್ 17: ಆಂಬಿಡೆಂಟ್ ಪ್ರಕರಣ ಮುಚ್ಚಿಹಾಕಲು ಪೊಲೀಸ್ ಅಧಿಕಾರಿಗಳಿಗೆ ಆಂಬಿಡೆಂಟ್ ಪ್ರಕರಣದ ಆರೋಪಿ ಸೈಯದ್ ಫರೀದ್ ಲಂಚ ನೀಡಿದ್ದಾನೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಯದ್ ಫರೀದ್ ಲಂಚ ನೀಡಿದ ಹಣವನ್ನೂ ಒಟ್ಟು ಸೇರಿಸಿ ಎಲ್ಲ ಹಣ ವಾಪಸ್ ಬಂದು ಹೂಡಿಕೆ ಮಾಡಿರುವ ತಲುಪಿದರಷ್ಟೆ ಪೂರ್ಣ ಪ್ರಮಾಣದ ನ್ಯಾಯ ದೊರಕಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆಂಬಿಡೆಂಟ್ ಮೇಲೆ ಪ್ರಕರಣ ದಾಖಲಾಗಿದ್ದಾಗಿನಿಂದ ಆಂಬಿಡೆಂಟ್ ಕಂಪನಿಯ ಸಯ್ಯದ್ ಫರೀದ್ ಈ ವರೆಗೆ ರಾಜಕಾರಣಿಗಳಿಗೆ ಕೊಟ್ಟಿರುವ ಹಣವೇ ಸುಮಾರು 60 ಕೋಟಿ ಎನ್ನುವ ಅಂದಾಜು ಇದೆ ಎಂದು ಅವರು ಹೇಳಿದರು.
ದೊಡ್ಡ-ದೊಡ್ಡ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿದ ರವಿಕೃಷ್ಣಾ ರೆಡ್ಡಿ ಎಲ್ಲರೂ ಸೈಯದ್ ಫರೀದ್ ಬಳಿ ಲಂಚ ಪಡೆದಿದ್ದಾರೆ, ಈ ಸಮಯದಲ್ಲಿ ನಮ್ಮಲ್ಲಿ ಸೂಕ್ತ ಸಾಕ್ಷ್ಯಗಳಿಲ್ಲದಿದ್ದರೂ ಸಹ ನಂಬಲರ್ಹ ಮೂಲಗಳಿಂದ ನಮಗೆ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು.
ವಿಜಯ್ ಟಾಟಾ ಬಗ್ಗೆ ಪ್ರಶ್ನೆ
ಆಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿ ದಾಳಿಗೆ ಒಳಗಾಗಿರುವ ವಿಜಯ್ ಟಾಟಾ ಬಗ್ಗೆ ಮಾತನಾಡಿದ ಅವರು, ವಿಜಯ್ ಟಾಟಾ ಒಬ್ಬ ಅಂತರರಾಜ್ಯ ವಂಚಕ ಆತನನ್ನು ರಕ್ಷಿಸುತ್ತಿರುವುದು ಯಾರು ಮತ್ತು ಏಕೆ? ಎಂದು ಪ್ರಶ್ನೆ ಮಾಡಿದರು.
ರೇರಾನಲ್ಲಿ ಸಾಕಷ್ಟು ಪ್ರಕರಣಗಳು
ಆತನ ವಿರುದ್ಧ ಈಗಾಗಲೇ ಸಾಕಷ್ಟು ಸಿವಿಲ್ ಪ್ರಕರಣಗಳು ರೇರಾನಲ್ಲಿ ದಾಖಲಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳಿವೆ, ಆಂಬಿಡೆಂಟ್ ಪ್ರಕರಣದಲ್ಲಿ ವಿಜಯ್ ಟಾಟಾ ಅವರದ್ದೂ ದೊಡ್ಡ ಕೈವಾಡ ಇದೆ ಆದರೆ ಪೊಲೀಸರೇ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಇಡಿ ಅಧಿಕಾರಿಗಳಿಗೆ ಲಂಚ
ಪೊಲೀಸ್ ಅಧಿಕಾರಿಗಳು ಮಾತ್ರವೇ ಅಲ್ಲ ಒಬ್ಬ ನಿವೃತ್ತ ಐಎಎಸ್ ಅಧಿಕಾರಿಯ ಸಹಾಯದೊಂದಿಗೆ ಇಡಿ ಅಧಿಕಾರಿಯೊಬ್ಬರಿಗೆ ಸಹ ಕೋಟ್ಯಂತರ ಹಣ ಲಂಚ ನೀಡಿದ್ದಾನೆ ಸೈಯದ್ ಫರೀದ್. ಆಂಬಿಡೆಂಟ್ ಪ್ರಕರಣವನ್ನು ಮುಚ್ಚಿ ಹಾಕಲು ಕೋಟ್ಯಂತರ ಹಣವನ್ನು ಅಧಿಕಾರಿಗಳಿಗೆ ಸೈಯದ್ ನೀಡಿದ್ದಾನೆ ಎಂದು ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ
ಈ ಹಿನ್ನೆಲೆಯಲ್ಲಿ, ಆಂಬಿಡೆಂಟ್ ಕಂಪನಿಯಿಂದ ಮತ್ತು ವಿಜಯ್ ಟಾಟಾನಿಂದ ವಂಚನೆಗೆ ಒಳಗಾಗಿರುವ ಅಥವಾ ಈ ಪ್ರಕರಣದ ಬಗ್ಗೆ ಮಾಹಿತಿ ಇರುವ ಯಾರಾದರೂ ಸರಿ ನಮ್ಮ ಸಹಾಯವಾಣಿ ಸಂಖ್ಯೆಯಾದ 8884277730 ಗೆ ಕರೆ ಮಾಡಿ ಅಥವಾ ಸಾಧ್ಯವಾದಲ್ಲಿ ನಮ್ಮ ವೇದಿಕೆಯ ಕಚೇರಿಗೆ ಖುದ್ದಾಗಿ ಬಂದು ಮಾಹಿತಿ ಕೊಡಬೇಕಾಗಿ ವಿನಂತಿಸುತ್ತೇವೆ ಎಂದು ಅವರು ಹೇಳಿದರು.