ತಿಮಿಂಗಲ ವಾಂತಿ ಮಾಡುವ ಅಂಬರ್ ಗ್ರಿಸ್ ಒಂದು ಕೆ.ಜಿ ಸಿಕ್ಕರೆ ಲೈಫ್ ಸೆಟ್ಲ್ !
ಬೆಂಗಳೂರು, ಜೂ. 09: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ಬೆಲೆ ಬಾಳುವ ವಿನಾಶದ ಅಂಚಿನಲ್ಲಿರುವ ತಿಮಿಂಗಲದ ಅಂಬರ್ ಗ್ರೀಸ್ನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುಗಂಧ ದ್ರವ್ಯ ಹಾಗೂ ವೈಜ್ಞಾನಿಕ ಸಂಶೋಧನೆಗೆ ಬಳಸುವ, ಸುಮಾರು ಎಂಟು ಕೋಟಿ ಮೌಲ್ಯದ ಅಂಬರ್ ಗ್ರೀಸ್ನ್ನು ಕಾಡುಗೊಂಡನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಇಂಥ ಅಪರೂಪದ ಪ್ರಕರಣವನ್ನು ಇದೇ ಮೊದಲ ಬಾರಿಗೆ ದಾಖಲಿಸಲಾಗಿದೆ.
ಬಂಧಿತರ ವಿವರ:
ಮಾಗಡಿ ಮುಖ್ಯ ರಸ್ತೆಯ ಸಯ್ಯದ್ ತಜ್ಮುಲ್ ಪಾಷಾ, ಪ್ಯಾಲೇಸ್ ಗುಟ್ಟಹಳ್ಳಿ ನಿವಾಸಿ ಸಲೀಂಪಾಷಾ, ಜೆ.ಪಿ.ನಗರ ನಿವಾಸಿ ರಫೀ ಉಲ್ಲಾ, ಹಾಗೂ ನಾಸೀರ್ ಪಾಷಾ ಬಂಧಿತ ಆರೋಪಿಗಳು. ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಆರ್.ಕೆ. ಟೆಂಟ್ ಹೌಸ್ ಹಿಂಭಾಗದ ತೆಂಗಿನ ತೋಟದಲ್ಲಿ ಅಂಬರ್ ಗ್ರಿಸ್ ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾಹಿತಿ ಆಧರಿಸಿ ಕಾಡುಗೊಂಡನಹಳ್ಳಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಅಂಬರ್ ಗ್ರಿಸ್ ತಿಮಿಂಗಲದ ದೇಹದಿಂದ ಹೊರ ಬರುವ ದ್ರವ.
ಕಲ್ಲಿನಂತೆ ಪರಿವರ್ತನೆಯಾಗುತ್ತದೆ. ಇದನ್ನು ಸುಗಂಧ ದ್ರವ್ಯಕ್ಕೆ ಬಳಸುತ್ತಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಅಂಬರ್ ಗ್ರಿಸ್ ಬೆಲೆ 1.7 ಕೋಟಿ ರೂ. ಇದನ್ನು ಮಾರಾಟ ಮಾಡುವುದು ಕೊಳ್ಳುವುದು ಕಾನೂನು ಅಡಿಯಲ್ಲಿ ಅಪರಾಧ. ಹೀಗಾಗಿ ನಾಲ್ವರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ ಎಂದು ತಿಳಿಸಿದರು. ಕಾಡುಗೊಂಡನಹಳ್ಳಿ ಪೊಲೀಸರ ಕಾರ್ಯವನ್ನು ಇದೇ ವೇಳೆ ಶ್ಲಾಘಿಸಿದರು.
ಏನಿದು ಅಂಬರ್ ಗ್ರಿಸ್: ಅಂಬರ್ ಗ್ರಿಸ್ ಎಂಬುದು ತಿಮಿಂಗಲದ ವೀರ್ಯ. ಇದು ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಜಗತ್ತಿನಲ್ಲಿಯೇ ಅತಿ ದುಬಾರಿ ಬೆಲೆ ಬಾಳುವ ಸುಗಂಧ ದ್ರವ್ಯಕ್ಕೆ ಇದನ್ನು ಬಳಸುತ್ತಾರೆ. ಇದನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಅರಬ್ ಹಾಗೂ ಚೀನಾ ದೇಶಗಳಲ್ಲಿ ಈ ಅಂಬರ್ಗ್ರಿಸ್ ಗೆ ತುಂಬಾ ಬೇಡಿಕೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಅಂಬರ್ ಗ್ರಿಸ್ ಬೆಲೆ ಒಂದು ಕೋಟಿ ರೂ.ಗೂ ಅಧಿಕ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮೊದಲ ಪ್ರಕರಣ: ಕೋಲಾರ ಮೂಲದ ವ್ಯಕ್ತಿಯಿಂದ ವ್ಯವಹಾರ ಕುದುರಿಸಿ ತಂದಿದ್ದ ಸುಮಾರು ಎಂಟು ಕೋಟಿ ಮೌಲ್ಯದ 6.7 ಕೆ.ಜಿ. ತೂಕದ ಅಂಬರ್ ಗ್ರಿಸ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಪ್ರಕರಣ ದಾಖಲಿಸಿರುವುದು ಇದೇ ಮೊದಲು. ಅಂಬರ್ ಗ್ರಿಸ್ ಮಾರಾಟ ನಿಷೇಧವಾಗಿರುವ ಹಿನ್ನೆಲೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಬಂಧಿತರು ಈ ಹಿಂದೆ ಮಾಡಿರಬಹುದಾದ ಅಂಬರ್ ಗ್ರಿಸ್ ವಹಿವಾಟಿನ ಜಾಲ ಪತ್ತೆ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.
Recommended Video
ಯಾಕಿಷ್ಟು ಅಂಬರ್ ಗ್ರೀಸ್ಗೆ ಬೆಲೆ: ತಿಮಿಂಗಳು ಸಾಮಾನ್ಯವಾಗಿ ಮೀನುಗಳನ್ನು ತಿನ್ನುತ್ತದೆ. ಸ್ಪೆರ್ಮ್ ವೇಲ್ ಪ್ರಬೇಧದ ತಿಮಿಂಗಲ ಅಂಬರ್ ಗ್ರಿಸ್ ದ್ರವ್ಯವನ್ನು ಹೊರ ಹಾಕುತ್ತವೆ. ಕ್ರಮೇಣ ಅದ ಕಲ್ಲಿನಂತಾಗುತ್ತದೆ. ಈ ತಿಮಿಂಗಲ ತಿನ್ನುವ ಮೀನುಗಳು ಕೆಲವು ತಿಂಗಳು ಹೊಟ್ಟೆಯಲ್ಲಿ ಇರುವುದರಿಂದ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಿ ಅದು ಮೇಣದಂತಾಗುತ್ತದೆ. ಸುಗಂಧಿತವಾಗಿ ಪರಿವರ್ತನೆಯಗುವ ವೇಳೆಗೆ ಅದನ್ನು ವಾಂತಿ ಮಾಡುವ ಮೂಲಕ ಹೊರ ಹಾಕುತ್ತವೆ. ಇದು ಹಗುರವಾಗಿರುವ ಕಾರಣ ಸಮುದ್ರದಲ್ಲಿ ತೇಲಾಡುತ್ತದೆ. ಇದನ್ನೇ ಅಂಬರ್ ಗ್ರಿಸ್ ಎಂದು ಕರೆಯುತ್ತಾರೆ. ಸಮುದ್ರ ತೀರದಲ್ಲಿ ಈ ಅಪರೂಪದ ಅಂಬರ್ ಗ್ರಿಸ್ ಸಿಗುತ್ತದೆ. ಇದನ್ನು ಕಾನೂನು ಪ್ರಕಾರ ಕೊಳ್ಳುವುದು, ಮಾರುವುದು ಅಪರಾಧ. ಆದರೆ ವೈದ್ಯಕೀಯ ಸಂಶೋಧನೆಗೆ ಬಳಸಲಾಗುತ್ತದೆ. ಇಂತಹ ಅಪರೂಪದ ಅಂಬರ್ ಗ್ರಿಸ್ ಮಾರಾಟ ಮಾಡುವ ಜಾಲ ಪತ್ತೆ ಮಾಡುವ ಮೂಲಕ ಕೆ.ಜಿ. ಹಳ್ಳಿ ಪೊಲೀಸರು ಚರ್ಚೆಗೆ ಕಾರಣರಾಗಿದ್ದಾರೆ.