ಪಕ್ಷ ಬದಲಾದರೂ ಸಿದ್ದರಾಮಯ್ಯ ಈಗಲೂ ನಮ್ಮ ಗುರುಗಳು: ರಮೇಶ್
ಬೆಂಗಳೂರು, ಡಿಸೆಂಬರ್ 13: ಪಕ್ಷ ಬದಲಾಗಿದ್ದರೂ ಕೂಡ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಶುಕ್ರವಾರ ಆಸ್ಪತ್ರೆಯಲ್ಲಿ ಭೇಟಿ ಆರೋಗ್ಯ ವಿಚಾರಿಸಿರುವ ಅವರು ಸಿದ್ದರಾಮಯ್ಯ ಎಂದಿಗೂ ನಮ್ಮ ಗುರುಗಳು ಎಂದು ಹೇಳಿದರು.
ಅರೆ, ರಾಜಕಾರಣ ಅಲ್ಲ ಸ್ವಾಮಿ, ಇದು 'ಹೃದಯ'ಗಳ ವಿಷಯ!
ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ನಾಳೆ ಡಿಸ್ಚಾರ್ಜ್ ಮಾಡಲಾಗುತ್ತದೆ. ನಾನು ಗೆದ್ದಾಗಲೂ ಅವರು ನಮ್ಮ ನಾಯಕರು ಎಂದೇ ಹೇಳಿದ್ದೆ. ಪಕ್ಷ ಬದಲಾವಣೆ ಮಾಡಿದರೂ ಅವರು ನಮ್ಮ ಗುರುಗಳು, ನಾವು ಏನೇನು ಮಾತಾಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲವೆಂದರು.
ನೂತನ ಶಾಸಕ ಬಿ.ಸಿ. ಪಾಟೀಲ್ , ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ , ವಿಯ್ ಕುಮಾರ್ ಸೊರಕೆ, ಕೆಸಿ ಕೊಂಡಯ್ಯ, ಆರ್ಬಿ ತಿಮ್ಮಾಪುರ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಗುರುವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.
ಸಿದ್ದರಾಮಯ್ಯ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದ ಪರಿಣಾಮ ಕಳೆದ ಮೂರು ದಿನಗಳಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಇದೀಗ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.