ಅಲ್ಲೋಲಕಲ್ಲೋಲ ಎಬ್ಬಿಸಿರುವ ಅಲೋಕ್ ವಾಟ್ಸಾಪ್ ಸಂದೇಶ
ಬೆಂಗಳೂರು, ಜೂ. 09 : ಲಾಟರಿ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಅಮಾನತಾಗಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು, ತಾನು ಅಮಾಯಕನಾಗಿದ್ದು, ಯಶಸ್ಸು ಸಹಿಸದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ವಿರುದ್ಧ ಸಂಚು ಹೂಡಿ ಈ ಕೂಪದಲ್ಲಿ ಸಿಲುಕಿಸಿದ್ದಾರೆ ಎಂದು ವಾಟ್ಸಾಪ್ ಸಂದೇಶವನ್ನು ಕಳಿಸಿ ಪೊಲೀಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಈ ಸಂದೇಶ ಒಬ್ಬರಿಂದೊಬ್ಬರಿಗೆ ಹರಿದಾಡುತ್ತ ಪೊಲೀಸ್ ಇಲಾಖೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದ್ದು, ಸಂಚಿನಲ್ಲಿ ಭಾಗಿಯಾದ ಆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಯಾರು ಎಂಬ ಬಗ್ಗೆ ಚರ್ಚೆಗಳಿಗೆ ನಾಂದಿ ಹಾಡಿದೆ. ಈ ಹಗರಣದಲ್ಲಿ ತನ್ನನ್ನು ಸಿಲುಕಿಸಿ ಬಲಿಪಶು ಮಾಡಲಾಗಿದೆ ಎಂದು 1994 ಬ್ಯಾಚ್ನ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿದ ವಾಟ್ಸಾಪ್ ಸಂದೇಶದಲ್ಲಿ ಅಲೋಕ್ ಕುಮಾರ್ ದೂರಿದ್ದಾರೆ.
ಆ ಸಂದೇಶ ಹೀಗಿದೆ : "ರಾಜ್ಯ ಸರಕಾರದಿಂದ ನಾನು ಅಮಾನತಾಗಿರುವುದು ನಿಮಗೆಲ್ಲ ಗೊತ್ತಿದೆ. ನನ್ನಲ್ಲಿ ನಂಬಿಕೆ ಇಡಿರೆಂದು ಕೇಳಿಕೊಳ್ಳುತ್ತೇನೆ. ನನ್ನ ಬ್ಯಾಚ್ ಮೇಟ್ ಸೇರಿದಂತೆ ಇಬ್ಬರು ಹಿರಿಯ ಅಧಿಕಾರಿಗಳು ಎರಡು ವರ್ಷಗಳಿಂದ ನನ್ನ ಏಳಿಗೆ, ಜನಪ್ರಿಯತೆ ಸಹಿಸಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಮೂರು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ಕರ್ನಾಟಕದಲ್ಲಿ ಸಾಕಷ್ಟು ಹೆಸರು ಗಳಿಸಿದ್ದೇನೆ."
"ಎರಡು ವರ್ಷಗಳ ಹಿಂದೆ ಹೆಚ್ಚುವರಿ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಅಧಿಕಾರ ವಹಿಸಿಕೊಂಡಾಗಲೂ ಒಂದೇ ತಿಂಗಳಲ್ಲಿ ನನ್ನನ್ನು ಹೊರದಬ್ಬಲು ಸಂಚು ಹೂಡಿದ್ದರು. ಟಿವಿ ಚಾನಲ್ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ನನ್ನ ಹೆಸರು ಕೇಳಿಬಂದಿದ್ದರ ದುರ್ಲಾಭ ಪಡೆದು ಮುಖ್ಯಮಂತ್ರಿಗೆ ಕಿವಿಯೂದಿದ್ದಾರೆ. ಪಾರಿ ರಾಜನ್ ಜೊತೆ ನನಗೆ ಸಂಪರ್ಕವಿತ್ತು. ಆದರೆ, ಅಕ್ರಮ ಲಾಟರಿ ದಂಧೆ ಜೊತೆ ಆತನ ಸಂಪರ್ಕವಿದೆಯೆಂದು ನನಗೆ ತಿಳಿದಿರಲಿಲ್ಲ" ಎಂದು ವಾಟ್ಸಾಪ್ ಸಂದೇಶದಲ್ಲಿ ಹೇಳಿದ್ದಾರೆ.
ರಾಜ್ಯ ಸರಕಾರ ಆದೇಶಿಸಿರುವ ಸಿಐಡಿ ತನಿಖೆ ಕೇವಲ ಕಣ್ಣು ಒರೆಸುವ ತಂತ್ರವಾಗಿದ್ದು, ಪಾರಿ ರಾಜನ್ ಹೇಳಿಕೆ ಮತ್ತು ಮೊಬೈಲ್ ಕರೆಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ತಮ್ಮ ಕಥೆಯನ್ನು ಸಂಪೂರ್ಣವಾಗಿ ಅರುಹಿಕೊಳ್ಳಲು ಸರಿಯಾದ ಅವಕಾಶ ನೀಡಲಾಗಿಲ್ಲ ಎಂದು ಅವರು ದೂರಿದ್ದಾರೆ.