ಐಶ್ವರ್ಯಾ ರೈ ಎಲ್ಲರಿಗೂ ಬೇಕು. ಆದ್ರೆ ಐಶ್ವರ್ಯಾ ಇರೋದು ಒಬ್ಳೆ ಅಲ್ವಾ?: ಈಶ್ವರಪ್ಪ
ಬೆಂಗಳೂರು, ಡಿಸೆಂಬರ್ 06: 'ಐಶ್ವರ್ಯಾ ರೈ ಎಲ್ಲರಿಗೂ ಬೇಕು, ಆದರೆ ಐರ್ಶರ್ಯಾ ಇರುವುದು ಒಬ್ಬಳೇ ಅಲ್ವಾ?' ಹೀಗೆಂದು ಪ್ರಶ್ನೆ ಮಾಡಿದ್ದು ಗ್ರಾಮಾಣಿಭಿವೃದ್ಧಿ ಸಚಿವ ಈಶ್ವರಪ್ಪ.
ಉಪ ಚುನಾವಣೆ ರಿಸಲ್ಟ್ ಬಳಿಕ ಮತ್ತಷ್ಟು ಡಿಸಿಎಂ ಹುದ್ದೆಗಳ ಸೃಷ್ಟಿ ಆಗುತ್ತಾವೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಈಶ್ವರಪ್ಪ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
'ಅನರ್ಹ ಶಾಸಕರಿಂದಲೇ ನಮ್ಮ ಸರ್ಕಾರ ಬಂದಿದೆ. ಅವರಿಗೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ, ಗೆದ್ದ ಎಲ್ಲರನ್ನೂ ಮಂತ್ರಿ ಮಾಡುತ್ತೇವೆ, ಉಪಚುನಾವಣೆಯಲ್ಲಿ ಸೋತವರಿಗೆ ಏನೂ ಕೊಡುವುದಿಲ್ಲ, ಅವರಿಗೆ ಯಾವ ಸ್ಥಾನವೂ ಇಲ್ಲ' ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
'ಎಂಎಲ್ಸಿ ಮಾಡ್ತೀವಿ ಎಂದು ನಾವು ಮೊದಲೇ ಅವರಿಗೆ ಹೇಳಿದ್ದೆವು ಆದರೆ ಚುನಾವಣೆ ಗೆದ್ದು ಮಂತ್ರಿ ಆಗ್ತೀವಿ ಎಂದು ಅವರೇ ಚುನಾವಣೆಗೆ ಹೋಗಿದ್ದಾರೆ, ಹಾಗಾಗಿ ಯಾರು ಗೆಲ್ತಾರೋ ಅವರಿಗಷ್ಟೆ ಮಂತ್ರಿ ಸ್ಥಾನ' ಎಂದು ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯ ಎಲ್ಲ ಅನರ್ಹರನ್ನೂ ಮಂತ್ರಿ ಮಾಡ್ತೀವಿ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರನ್ನು ಮಂತ್ರಿ ಮಾಡುವುದು ಪಕ್ಕಾ, ಲಕ್ಷ್ಮಣ ಸವದಿ ಡಿಸಿಎಂ ಆಗಿಯೇ ಮುಂದುವರೆಯುತ್ತಾರೆ ಎಂದು ಈಶ್ವರಪ್ಪ ಹೇಳಿದರು.