ಹೊಸಕೋಟೆ ಉಪ ಚುನಾವಣೆ; ಮತ ಎಣಿಕೆಗೆ ಸಕಲ ಸಿದ್ಧತೆ
ಬೆಂಗಳೂರು, ಡಿಸೆಂಬರ್ 8 : ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ನಡೆದಿದೆ. ಡಿಸೆಂಬರ್ 5ರಂದು 90.90ರಷ್ಟು ಮತದಾನವಾಗಿದ್ದು, ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಡಿಸೆಂಬರ್ 9ರ ಸೋಮವಾರ ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. "ಮತ ಎಣಿಕೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ" ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪ ಚುನಾವಣಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಹೇಳಿದ್ದಾರೆ.
ಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಪ್ರಣಾಳಿಕೆ
ಮತ ಎಣಿಕಾ ಕೇಂದ್ರದ ಬಳಿ ಸೋಮವಾರ ಬೆಳಗ್ಗೆ 6.30ಕ್ಕೆ ಮತ ಎಣಿಕೆ ಸಿಬ್ಬಂದಿಗಳು ಆಗಮಿಸಲಿದ್ದಾರೆ. ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ಕೊಠಡಿ ತೆರೆಯಲಾಗುತ್ತದೆ. 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಬಳಿಕ ಇವಿಎಂನಲ್ಲಿನ ಮತವನ್ನು ಎಣಿಕೆ ಮಾಡಲಾಗುತ್ತದೆ.
ಎಂಟಿಬಿ ನಾಗರಾಜು-ಯಡಿಯೂರಪ್ಪ ಭೇಟಿ: ಸೋಲಿನ ಭೀತಿ?
ಹೊಸಕೋಟೆ ಕ್ಷೇತ್ರದಲ್ಲಿ ಶೇ 90.90ಯಷ್ಟು ಮತದಾನವಾಗಿದ್ದು, ಮಧ್ಯಾಹ್ನ 1.00 ಗಂಟೆಯ ವೇಳೆಗೆ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಉಪ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ಎಂಟಿಬಿ ನಾಗರಾಜು ಬೆಂಬಲಿಗರ ಮೇಲೆ ಶರತ್ ಬಚ್ಚೇಗೌಡ ಬೆಂಬಲಿಗರ ಹಲ್ಲೆ
21 ಸುತ್ತಿನಲ್ಲಿ ಮತ ಎಣಿಕೆ
ಮತ ಎಣಿಕೆಗೆ ನಿಗದಿಪಡಿಸಲಾದ ಕೊಠಡಿಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಸಾಮಾನ್ಯ ವೀಕ್ಷಕರಿಗೆ ಒಂದು ಟೇಬಲ್ ವ್ಯವಸ್ಥೆ, ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪ ಚುನಾವಣಾಧಿಕಾರಿಗೆ ಒಂದು ಟೇಬಲ್ ವ್ಯವಸ್ಥೆ ಹಾಗೂ ಮತ ಎಣಿಕೆ ಕಾರ್ಯಕ್ಕಾಗಿ 14 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 21 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಸಿಬ್ಬಂದಿಗಳ ನಿಯೋಜನೆ
ಇವಿಎಂ ವಿವಿ-ಪ್ಯಾಟ್ ಗಳಿರುವ ಸ್ಟ್ರಾಂಗ್ ರೂಂ ಕೊಠಡಿಯಿಂದ ಮತ ಎಣಿಕಾ ಕೊಠಡಿಗೆ ಇವಿಎಂ ವಿವಿಪ್ಯಾಟ್ಗಳನ್ನು ಸಾಗಿಸಲು ಒಂದೇ ರೀತಿಯ ಟಿ-ಶರ್ಟ್ ಧರಿಸಿರುವ ಕಂದಾಯ ಇಲಾಖೆಯ 14 ಪುರುಷ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
150 ಸಿಬ್ಬಂದಿಗಳು
ಮತ ಎಣಿಕೆ ಕಾರ್ಯಕ್ಕೆ 20 ವಿವಿಧ ತಂಡಗಳು, 20 ಮೈಕ್ರೊ ಅಬ್ಸರ್ವರ್ ಗಳು, ಸ್ಷೆಷಲ್ ಮೈಕ್ರೊ ಅಬ್ಸರ್ವರ್ ಗಳು ಸೇರಿದಂತೆ ಒಟ್ಟಾರೆ 150 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಉಪ ಚುನಾವಣಾ ಅಭ್ಯರ್ಥಿಗಳು ಹಾಗೂ ಏಜೆಂಟ್ಗಳಿಗೆ ಒಂದು ಕೊಠಡಿ, ವೈದ್ಯಕೀಯ ಸೌಲಭ್ಯಕ್ಕಾಗಿ ಒಂದು ಕೊಠಡಿ ಮತ್ತು ಮತ ಎಣಿಕೆ ವರದಿಗಾಗಿ, ಅಧಿಕೃತ ಪಾಸುಗಳನ್ನು ಹೊಂದಿರುವ ಮಾಧ್ಯಮ ಪ್ರತಿನಿಧಿಗಳಿಗೆ ಒಂದು ಕೊಠಡಿ ಮೀಸಲಿಡಲಾಗಿದೆ.
ಕುತೂಹಲ ಮೂಡಿಸಿದ ಫಲಿತಾಂಶ
ಬಿಜೆಪಿಯಿಂದ ಎಂಟಿಬಿ ನಾಗರಾಜ್, ಕಾಂಗ್ರೆಸ್ನಿಂದ ಪದ್ಮಾವತಿ ಸುರೇಶ್ ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಶರತ್ ಬಚ್ಚೇಗೌಡಗೆ ಬೆಂಬಲ ನೀಡಿತ್ತು. ಆದ್ದರಿಂದ, ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.