ಬಿಬಿಎಂಪಿ ಕಾಯ್ದೆಗೆ ಸರ್ವಪಕ್ಷದವರಿಂದ ವಿರೋಧ
ಬೆಂಗಳೂರು, ಮಾರ್ಚ್ 24: ಪ್ರತಿಪಕ್ಷ ಶಾಸಕರಿಲ್ಲದೇ ಬಿಬಿಎಂಪಿ ಕಾಯ್ದೆ ಅಂಗೀಕಾರ ಮಾಡುವುದು ಸೂಕ್ತವಲ್ಲ, ಇದನ್ನು ಮುಂದೂಡಿ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದರು.
ಇದುವರೆಗೂ ಬಿಬಿಎಂಪಿ ಕಾಯ್ದೆ ಪ್ರತಿ ನಮ್ಮ ಕೈಗೆ ಸಿಕ್ಕಿಲ್ಲ, ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳದೇ ಕಾಯ್ದೆ ಪಾಸ್ ಮಾಡುವುದು ಬೇಡ ಎಂದು ಇನ್ನೊಬ್ಬ ಬಿಜೆಪಿ ಶಾಸಕ ರವಿ ಸುಬ್ರಮಣ್ಯ ತಿಳಿಸಿದರು.
ಇನ್ನು ಜೆಡಿಎಸ್ ಶಾಸಕ ದಾಸರಹಳ್ಳಿ ಮಂಜುನಾಥ್ ಮಾತನಾಡಿ, ಈ ಬಿಬಿಎಂಪಿ ವಿಧೇಯಕಕ್ಕೆ ನಮ್ಮ ವಿರೋಧವಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ನ್ಯಾ.ನಾಗಮೋಹನದಾಸ್ ವರದಿ ಏನಾಯ್ತು ಅಂತಾ ಗೊತ್ತಿದೆ. ಹಾಗಾಗಿ ಇದನ್ನು ಜಾಯಿಂಟ್ ಸೆಲೆಕ್ಟ್ ಕಮಿಟಿಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಬಿಬಿಎಂಪಿ ಮಸೂದೆಯನ್ನು ಜಂಟಿ ಸೆಲೆಕ್ಟ್ ಕಮಿಟಿಗೆ ಒಪ್ಪೊಸಬಹುದು. ಬಿಬಿಎಂಪಿ ಅಭಿವೃದ್ಧಿಯಷ್ಟೇ ನಮಗೆ ಮುಖ್ಯ ಎಂದು ಒಪ್ಪಿಕೊಂಡರು.
ಮೇಯರ್ ಕೇವಲ ಉತ್ಸವ ಮೂರ್ತಿಯಂತೆ ಮಾತ್ರ ಇದ್ದಾರೆ. ಸ್ಥಾಯಿ ಸಮಿತಿಗಳ ಬಗ್ಗೆ ಇಲ್ಲಿ ಸ್ಪಷ್ಟತೆ ಇಲ್ಲ. ಎಲೆಕ್ಟ್ರಾನಿಕ್ ಸಿಟಿ ಈಗಲೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಬಿಬಿಎಂಪಿ ಕಾಯ್ದೆಯನ್ನು ಜಂಟಿ ಸೆಲೆಕ್ಟ್ ಕಮಿಟಿಗೆ ಕಳುಹಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸಲಹೆ ನೀಡಿದಾಗ, ಸ್ಪೀಕರ್ ಕಾಗೇರಿ ಅವರು ಜಂಟಿ ಸೆಲೆಕ್ಟ್ ಕಮಿಟಿ ಪರಾಮರ್ಶೆಗೆ ಒಪ್ಪಿಸುವುದಾಗಿ ಘೋಷಣೆ ಮಾಡಿದರು.