ಕರ್ನಾಟಕ ರಾಜ್ಯದ ಗಡಿ ಬಂದ್, ಎಲ್ಲ ಚುನಾವಣೆ ಮುಂದಕ್ಕೆ
ಬೆಂಗಳೂರು, ಮಾರ್ಚ್ 22: ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವಂತೆ ಇಂದು ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ದೇಶವ್ಯಾಪಿ ಈ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲೂ ಉತ್ತಮ ಬೆಂಬಲ ಸಿಕ್ಕಿದ್ದು, ಸಿಲಿಕಾನ್ ಸಿಟಿ ಸೇರಿದಂತೆ ಇಡೀ ರಾಜ್ಯ ಸ್ವಯಂ ಪ್ರೇರಿತವಾಗಿ ಸ್ತಬ್ದವಾಗಿದೆ.
ಮತ್ತೊಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದ್ದು, ರಾಜ್ಯದಲ್ಲಿ ಆತಂಕ ಹೆಚ್ಚಾಗುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಹೆಚ್ಚಿನ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುತ್ತಿದ್ದು, ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತಷ್ಟು ಮಾಹಿತಿ ನೀಡಿದ್ದಾರೆ.
ಕೊರೊನಾಭೀತಿ: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿಕೆ
ರಾಜ್ಯ ಗಡಿ ಬಂದ್
ಮಹಾರಾಷ್ಟ್ರ, ಕೇರಳ ಸೇರಿದಂತೆ ಗಡಿರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊರರಾಜ್ಯಗಳಿಂದ ಬರುವವರಿಗೆ ಕಡಿವಾಣ ಹಾಕಲು ಸರ್ಕಾರ ತೀರ್ಮಾನಿಸಿದೆ.
* ಕರ್ನಾಟಕ ರಾಜ್ಯದ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಸಿಎಂ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆ ಮತ್ತು ಚುನಾವಣೆ ಮುಂದಕ್ಕೆ
*ಮಾರ್ಚ್ 27ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಬೇಕಿತ್ತು. ಇದೀಗ, SSLC ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮುಂದಿನ ತೀರ್ಮಾನದವರೆಗೆ ಮುಂದೂಡಲಾಗುವುದು ಎಂದು ಸಿಎಂ ಆದೇಶ ನೀಡಿದ್ದಾರೆ.
*ಇನ್ನು ಮುಂದಿನ ಆದೇಶದವರೆಗೂ ಎಲ್ಲ ಚುನಾವಣೆಗಳನ್ನು ಕೂಡ ಮುಂದೂಡಲಾಗಿದೆ.
ಕೊರೊನಾ ಸೇವೆಗಾಗಿ ಬದಲಾದ ಬಾಲಬ್ರೂಯಿ, ವಿಕ್ಟೋರಿಯಾ ಆಸ್ಪತ್ರೆ
ಟಾಸ್ಕ್ ಫೋರ್ಸ್ ಕಾರ್ಯಾರಂಭ
*ಹಿರಿಯ ಸಚಿವರನ್ನೊಳಗೊಂಡ ಕೊವಿಡ್ ಟಾಸ್ಕ್ ಫೋರ್ಸ್ ಕಾರ್ಯ ನಿರ್ವಹಣೆಗೆ ಸಹಾಯವಾಗುವಂತೆ ಹಿರಿಯ ಐಎಎಸ್ ಅಧಿಕಾರಿಗಳನ್ನೊಳಗೊಂಡ ಒಂದು ತೀವ್ರ ನಿಗ್ರಹ ದಳವನ್ನು ಮಾಡಲಾಗಿದ್ದು ಅದರಂತೆ ಕಾರ್ಯೋನ್ಮುಖರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.
*ಐಸಿಎಂಆರ್ ಹಾಗೂಎನ್ಐವಿ ಇವರ ಸಹಕಾರದೊಂದಿಗೆ ಆದಷ್ಟು ಸರ್ಕಾರಿ ಹಾಗೂ ಸರ್ಕಾರೇತರ ಲ್ಯಾಬ್ಗಳಿಗೆ ಕೊವಿಡ್ ತಪಾಸಣಾ ಪರವಾನಗಿ ನೀಡಲಾಗುತ್ತದೆ.
ಸ್ಥಳೀಯ ವಿಮಾನಗಳನ್ನು ತಪಾಸಣೆ
*ಈಗಾಗಲೇ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದ್ದು, ಇನ್ನುಮುಂದೆ ಸ್ಥಳೀಯ ವಿಮಾನ ಪ್ರಯಾಣಿಕರನ್ನೂ ಕೂಡ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
* ಕೊವಿಡ್ ವೈರಾಣುವನ್ನು ಪತ್ತೆ ಮಾಡುವ ಲ್ಯಾಬ್ಟೆಸ್ಟ್ಗಳ ಪ್ರಮಾಣವನ್ನು ಈ ಕೂಡಲೇ ಹೆಚ್ಚಿಸುವುದು. ವೈರಾಣು ದೃಢಪಟ್ಟಿರುವ ರೋಗಿಗಳ ಸಂಪರ್ಕಕ್ಕೆ ಬಂದಿರುವ ಎಲ್ಲಾ ರೋಗ ಲಕ್ಷಣಗಳನ್ನು ತೋರುವ/ತೋರದಿರುವ ಎಲ್ಲರನ್ನೂ ತಪಾಸಣೆಗೊಳಪಡಿಸುವುದು. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ 200 ಜನರಿಗೆ ಪರೀಕ್ಷೆ ಮಾಡುವಂತಹ ಸೌಕರ್ಯಗಳನ್ನು ಈ ಕೂಡಲೇ ಸಜ್ಜುಗೊಳಿಸಲಾಗುವುದು.
1700 ಹಾಸಿಗೆಗಳ ಸಿದ್ಧತೆ
* ಜಿಲ್ಲಾ ಮಟ್ಟದಲ್ಲಿ ಎಲ್ಲಾ ನುರಿತ ತಜ್ಞ ವೈದ್ಯರುಗಳ ಸಲಹೆ ಸೂಚನೆಗಳನ್ನು ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ಗಳು ಪರಿಗಣಿಸುವುದು.
* 1700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ ಸಮುಚ್ಚಯದಲ್ಲಿರುವ ಎಲ್ಲಾ ಆಸ್ಪತ್ರೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಕೋವಿಡ್19ಗೆ ಸಂಬಂಧಿಸಿದಂತೆ ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು. ಈಗಾಗಲೇ ದಾಖಲಾಗಿರುವ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದು.
ವಾರ್ ರೂಂ ಪರಿವರ್ತನೆ
* ಬಾಲಬೃಹಿ ಅತಿಥಿ ಗೃಹವನ್ನು ಕೊರೊನಾ (ಕೋವಿಡ್ 19) ರೂಂ ಆಗಿ ಪರಿವರ್ತಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಕೊರೊನಾ ಕುರಿತು ಸಂಪೂರ್ಣ ಕ್ರಮಗಳ ಉಸ್ತುವಾರಿಯನ್ನು ಈ ಕೇಂದ್ರ ಸಾಧಿಸಲಾಗುವುದು. ಮಾನ್ಯ ಮುಖ್ಯಮಂತ್ರಿ ಇದರ ನೇತೃತ್ವ ವಹಿಸುವರು. ಇದಕ್ಕೆ ಸಂಬಂಧಿಸಿದ ಎಲ್ಲಾ ಟಾಸ್ಕ್ ಪೋರ್ಸ್ ಕಾರ್ಯನಿರತವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಟಾಸ್ಕ್ ಪೋರ್ಸ್ ಸಭೆಗಳ ವಿಡಿಯೋ ಕಾನ್ಫೆರೆನ್ಸ್ ಗಳು ಇಲ್ಲಿಂದಲೇ ಜರುಗುತ್ತವೆ.