ಎಲ್ಲಾ ಸರ್ಕಾರಿ ಸೇವೆ ಆನ್ ಲೈನ್ ಮೂಲಕವೇ ನಡೆಯಲಿ
ಸರಕಾರದ ಯಶಸ್ವಿ ಯೋಜನೆಯಾದ ಸಕಾಲ ಸೇವೆಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವಿಧಾನ ಸೌಧದಲ್ಲಿ ಇಂದು ನಡೆದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಎಲ್ಲ ಸೇವೆಗಳು ಜನತೆಗೆ ಆನ್ ಲೈನ್ ಮೂಲಕ ತಲುಪುವಂತಾಗಬೇಕು ಎಂಬುದೇ ಸರ್ಕಾರದ ಆಶಯವಾಗಿದೆ. ಈಗ ಸದ್ಯಕ್ಕೆ 135 ಸೇವೆಗಳು ಆನ್ ಲೈನ್ ನಲ್ಲಿ ಮಾತ್ರ ಲಭ್ಯವಾಗುತ್ತಿವೆ. ಒಟ್ಟಾರೆ ಸಕಾಲದಲ್ಲಿ 478 ಸೇವೆಗಳು ಲಭ್ಯವಾಗುತ್ತಿವೆ ಎಂದು ಅವರು ಹೇಳಿದರು.
ಇದುವರೆಗೆ 5 ಕೋಟಿ ಅರ್ಜಿಗಳು ಸಕಾಲ ಯೋಜನೆ ವ್ಯಾಪ್ತಿಯಡಿ ಬಂದಿದ್ದು, ಶೇ. 98ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಎಲ್ಲ ತಾಲೂಕು ಕಚೇರಿ ಮುಂದೆ ಸಕಾಲ ಗಡಿಯಾರಗಳನ್ನು ಹಾಕಬೇಕು. ಸಕಾಲ ಯೋಜನೆಯ ಲಾಭವನ್ನು ಜನಸಾಮಾನ್ಯರು ಪಡೆದುಕೊಳ್ಳುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೆಚ್ಚಿನ ತಿಳಿವಳಿಕೆ ನೀಡಬೇಕು ಎಂದರು.
ಸಕಾಲ ನಿರ್ದೇಶಕಿ ಶಾಲಿನಿ ರಜನೀಶ್ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ನಮ್ಮ ಜಿಲ್ಲೆಗೆ ಬಂದು ಸುತ್ತಾಡಿದ ನಂತರ ಅವರ ಬಣ್ಣವೇ ಬದಲಾಗಿ ಹೋಗಿತ್ತು. ಅಷ್ಟರ ಮಟ್ಟಿಗೆ ಅವರು ಸಕಾಲ ಯೋಜನೆಯ ಬಗ್ಗೆ ಶ್ರಮ ಹಾಕಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ 9,000 ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಈ ಕಚೇರಿಗಳ ಮೂಲಕವೂ ಸಕಾಲ ಸೇವೆಯನ್ನು ಜಾರಿಗೆ ತರಬೇಕು ಎಂದು ಅವರು ಸಲಹೆ ಮಾಡಿದರು.