ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ: ಕಾಗೋಡು ತಿಮ್ಮಪ್ಪ
ಬೆಂಗಳೂರು, ಜನವರಿ 24: ಅಕ್ರಮ ಸಕ್ರಮ ಕುರಿತಂತೆ ಗ್ರಾಮೀಣ ಭಾಗದಲ್ಲಿ 94 ಸಿ, ನಗರ ಪ್ರದೇಶಗಳಲ್ಲಿ 94 ಸಿಸಿ ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ 50x80ರ ನಿವೇಶನಕ್ಕೆ ಮೊತ್ತವನ್ನು 6 ಸಾವಿರದಿಂದ 3 ಸಾವಿರಕ್ಕೆ ಕಡಿತ ಮಾಡಿದ್ದು, 30x40 ರ ನಿವೇಶನದ ಮೊತ್ತವನ್ನು ಎರಡು ಸಾವಿರಕ್ಕೆ ಹಾಗೂ 20x30 ಅಳತೆಯ ನಿವೇಶನ ಸಕ್ರಮದ ದರವನ್ನು ಒಂದು ಸಾವಿರಕ್ಕೆ ರೂ.ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಅಂಗವಿಕಲರಿಗೆ ಕ್ರಮವಾಗಿ 1500, 1000 ಹಾಗೂ 500 ರುಪಾಯಿಗೆ ನಿವೇಶನಗಳ ಸಕ್ರಮ ಮೊತ್ತವನ್ನು ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವ ದಿನವನ್ನು ಫೆಬ್ರವರಿ 21 ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನಗರ ಪ್ರದೇಶಗಳಲ್ಲಿನ 94 ಸಿಸಿ ಕಾಯ್ದೆ ಅನ್ವಯ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 20x30ರ ನಿವೇಶನಕ್ಕೆ ಹತ್ತು ಸಾವಿರದ ಬದಲು ಐದು ಸಾವಿರ, ಪರಿಶಿಷ್ಟ ಜಾತಿ- ಪಂಗಡದವರಿಗೆ 2500 ದರ ನಿಗದಿ ಮಾಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಫೆಬ್ರವರಿ 27ರ ವರೆಗೆ ಅವಕಾಶ ನೀಡಲಾಗಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.