ಸಂಪತ್ ರಾಜ್ ಬಂಧನ; ಅಖಂಡ ಶ್ರೀನಿವಾಸ ಮೂರ್ತಿ ಪ್ರತಿಕ್ರಿಯೆ ಏನು?
ಬೆಂಗಳೂರು, ನವೆಂಬರ್ 17: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಬಂಧನದ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
"ಸಂಪತ್ ರಾಜ್ ಬಂಧನದಿಂದ ನನಗೆ ನ್ಯಾಯ ಸಿಕ್ಕಿದೆ. ನನ್ನ ಮನೆ ಸುಟ್ಟಿರುವುದು ನನಗೆ ದುಃಖ ಆಗುವುದಿಲ್ಲವಾ? ಈ ಪ್ರಕರಣದಲ್ಲಿರುವ ಎಲ್ಲರಿಗೂ ಶಿಕ್ಷೆ ಆಗಲೇಬೇಕು" ಎಂದಿದ್ದಾರೆ.
ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲು ಬುಧವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಾಗಿಯೂ ತಿಳಿಸಿದ್ದಾರೆ. "ನಮ್ಮ ಪಕ್ಷದ ಅಧ್ಯಕ್ಷರನ್ನೂ ಭೇಟಿ ಮಾಡುತ್ತೇನೆ. ಅವರಿಗೆ ನ್ಯಾಯಕ್ಕಾಗಿ ಮನವಿ ಮಾಡುತ್ತೇನೆ" ಎಂದು ಹೇಳಿದ್ದಾರೆ. ಮುಂದೆ ಓದಿ...
"ಜನರಿಂದ ನನ್ನನ್ನು ದೂರ ಮಾಡಲು ಹೊರಟಿದ್ದರು"
"ಜನರನ್ನು ನನ್ನಿಂದ ದೂರ ಮಾಡಲು ಕಾರ್ಪೊರೇಟರ್ ಗಳು ಹೊರಟಿದ್ದರು. ಆದರೆ ನಮ್ಮ ಕ್ಷೇತ್ರದಲ್ಲಿ ಎಲ್ಲರೂ ನನ್ನನ್ನು ನಂಬಿದ್ದಾರೆ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದನ್ನು ಸಹಿಸದೇ ಇಂಥ ಕೃತ್ಯ ಎಸಗಿದ್ದಾರೆ" ಎಂದು ಸಂಪತ್ ರಾಜ್ ವಿರುದ್ಧ ಆರೋಪಿಸಿದರು. ಅವರು ತಪ್ಪು ಮಾಡಿಲ್ಲವೆಂದಿದ್ದರೆ ತಲೆ ಮರೆಸಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ಎಸ್ಕೇಪ್ ಚರಿತ್ರೆ !
"ಈಗಲಾದರೂ ನನ್ನ ಪರ ನಿಲ್ಲಿ"
ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಮಾಧ್ಯಮಗಳ ಎದುರು, ಬಿಜೆಪಿ ಪಕ್ಷದವರ ಎದುರು ಮಾತನಾಡುವುದಲ್ಲ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ನೋವಿದ್ದರೆ ನನ್ನ ಬಳಿ ಬಂದು ಮಾತನಾಡಲಿ, ಮಾಧ್ಯಮದ ಎದುರು ಮಾತನಾಡುವುದು ಶಿಸ್ತಲ್ಲ ಎಂದು ಡಿ.ಕೆ. ಶಿವಕುಮಾರ್ ಅವರು ಗರಂ ಆಗಿದ್ದರು. ಈ ನಡುವೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಇದೀಗ ಸಂಪತ್ ರಾಜ್ ಬಂಧನವಾಗಿದ್ದು, ಈಗಲಾದರೂ ನನ್ನ ಪರ ಅವರು ನಿಲ್ಲಲಿ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲವೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ನಾನು ಎರಡು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ನಾಳೆಯೂ ಅವರನ್ನು ಭೇಟಿ ಮಾಡುತ್ತೇನೆ" ಎಂದು ಹೇಳಿದರು.
"ಸಿದ್ದರಾಮಯ್ಯ, ಜಮೀರ್ ನ್ಯಾಯ ಕೊಡಿಸುತ್ತಾರೆ"
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿದ್ದರಾಮಯ್ಯ, ಜಮೀರ್ ಅವರ ಜೊತೆ ಚರ್ಚೆ ನಡೆಸುತ್ತೇನೆ. ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಯಾರು ಓಡಿಸಿದರೆ ಏನು, ನಾನು ಇಲ್ಲೇ ಇರ್ತೇನೆ. ಸಿದ್ದರಾಮಯ್ಯ, ಜಮೀರ್ ಅವರು ನನ್ನನ್ನು ಕಾಂಗ್ರೆಸ್ ಗೆ ಕರೆತಂದವರು. ಅದಕ್ಕೇ ನಾನು ಟಾರ್ಗೆಟ್ ಆಗ್ತಿದ್ದೇನಾ ಗೊತ್ತಿಲ್ಲ ಎಂದರು.
ಬೆಂಗಳೂರು ಗಲಭೆ: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ಡಿಕೆಶಿ ಗರಂ!
ಸೋಮವಾರ ಸಂಪತ್ ರಾಜ್ ಬಂಧನ
ಪ್ರವಾದಿ ನಿಂದನೆ ಆರೋಪದಲ್ಲಿ ಆಗಸ್ಟ್ ನಲ್ಲಿ ಡಿಜೆ ಹಳ್ಳಿಯಲ್ಲಿ ವ್ಯಾಪಕ ಗಲಭೆ ನಡೆದಿತ್ತು. ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಅವರ ನಿವಾಸದ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಸ್ಥಳೀಯ ನಾಯಕ ಸಂಪತ್ ರಾಜ್ ಅವರ ಮೇಲೆ ಆರೋಪ ಕೇಳಿ ಬಂದಿದ್ದವು. ನಂತರ ಆರೋಪಿ ಸಂಪತ್ ರಾಜ್ ತಲೆ ಮರೆಸಿಕೊಂಡಿದ್ದರು. ತಿಂಗಳ ಬಳಿಕ ಸೋಮವಾರ ಸಿಸಿಬಿ ಅಧಿಕಾರಿಗಳು ಸಂಪತ್ ರಾಜ್ ಬಂಧಿಸಿದ್ದಾರೆ.
Recommended Video