ಬೆಂಗಳೂರು; ಹುಕ್ಕಾ ಬಾರ್ ಮೇಲೆ ಪೊಲೀಸರ ದಾಳಿ, ಮೂವರ ಬಂಧನ
ಬೆಂಗಳೂರು, ಮೇ. 10: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಹುಕ್ಕಾ ಬಾರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕನ್ನಮಂಗಲ ಗೇಟ್ ಬಳಿ ಅಕ್ರಮ ಹುಕ್ಕಾ ಬಾರ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ಕೆಫೆ ರನ್ ವೇ ಎಂಬ ಹುಕ್ಕಾ ಬಾರ್ ನಡೆಸುತ್ತಿದ್ದರು. ಹುಕ್ಕಾಬಾರ್ ನಡೆಸಲು ಇರುವ ನಿಯಮ ಉಲ್ಲಂಘನೆ ಮಾಡಿ ಆರೋಗ್ಯಕ್ಕೆ ಹಾನಿ ಮಾಡುವ ರಾಸಾಯನಿಕಗಳನ್ನು ಹಾಕಿ ಗ್ರಾಹಕರಿಗೆ ಪೂರೈಸುತ್ತಿದ್ದರು.
ಅನಧಿಕೃತ ಹುಕ್ಕಾಬಾರ್ನಲ್ಲಿ ಹೆಚ್ಚಿನ ಹಣ ಪಡೆದು ಗ್ರಾಹಕರಿಗೆ ಹುಕ್ಕಾ ನೀಡುತ್ತಿದ್ದರು ಎಂಬ ಆರೋಪವೂ ಇದೆ. ಯಾವುದೇ ಅನುಮತಿ ಇಲ್ಲದೇ ಹುಕ್ಕಾಬಾರ್ ನಡೆಸುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಅತಿಕುರ್ ರೆಹಮಾನ್, ಅಯೂಬ್ ಖಾನ್, ಗಣೇಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. 12 ಹುಕ್ಕಾ ಚಿಲುಮೆ, ಹುಕ್ಕಾ ಪೈಪು, ಫ್ಲೇವರ್ಸ್, ಕಿಂಗ್ ಸಿಗರೇಟ್ ಪ್ಯಾಕ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಫೆ ರನ್ ವೇ ಮಾಲೀಕರು ವಾಸೀಂ ಅಹಮದ್, ಮಹಮದ್ ಸಲಾಂ ಎಂಬುವರಾಗಿದ್ದು, ಅವರ ವಿರುದ್ದವೂ ಕೇಸು ದಾಖಲಾಗಿದೆ.
Recommended Video