AirLift: ಮೇ 8ರಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜನ ಆಗಮನ
ಬೆಂಗಳೂರು, ಮೇ 6: ಕೊರೊನಾ ಲಾಕ್ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಸುಮಾರು 2 ಲಕ್ಷ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಮೊದಲ ಹಂತದಲ್ಲಿ 12 ದೇಶಗಳಿಂದ ಸುಮಾರು 15 ಸಾವಿರ ಭಾರತೀಯರನ್ನು 64 ವಿಮಾನಗಳಲ್ಲಿ ಕರೆತರಲಿದೆ. ಮೇ 7 ರಿಂದ ಈ ಕಾರ್ಯಾಚರಣೆ ಆರಂಭವಾಗಲಿದೆ.
ಹೀಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೇ 8ರಿಂದ ಸಾವಿರಾರು ಭಾರತೀಯರು ವಿದೇಶದಿಂದ ಬರಲಿದ್ದಾರೆ. ಕೋವಿಡ್ ತಡೆಗಟ್ಟುವ ನಿಯಮಾವಳಿಗಳ ಪ್ರಕಾರ ಆಗಮಿಸುವ ಪ್ರಯಾಣಿಕರನ್ನು ಕಡ್ಡಾಯವಾಗಿ 21 ದಿನಗಳ ಕಾಲ ಸರ್ಕಾರ ಸೂಚಿಸಿದ ಸ್ಥಳದಲ್ಲಿ ಕ್ವಾರಂಟೈನ್ನಲ್ಲಿ ಇಡಬೇಕಾಗಿದೆ.
ವಿದೇಶಗಳಲ್ಲಿ ಭಾರತೀಯರು: ಅತಿದೊಡ್ಡ AirLift ಗೆ ಮುಂದಾದ ಭಾರತ
ಇದಕ್ಕಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗತ್ಯ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಆರಂಭಿಸಿದ್ದಾರೆ.
ಹೆಲ್ಪ್ ಡೆಸ್ಕ್ ರಚನೆ
ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೇನ್ ಸೌಲಭ್ಯ (Qurantine Facilities) ಒದಗಿಸುವ ಹಿನ್ನೆಲೆಯಲ್ಲಿ ಹೆಲ್ಪ್ ಡೆಸ್ಕ್ (Help Desk) ಆಗಿ ಕಾರ್ಯನಿರ್ವಹಿಸಲು ತಂಡವನ್ನು ರಚಿಸಲಾಗಿದೆ. ತಂಡವು ಬರುವ ಪ್ರಯಾಣಿಕರಿಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಿದೆ ಹಾಗೂ ಮೇಲ್ವಿಚಾರಣೆ ನಡೆಸಲಿದೆ. ಮೇ 8 ರ ರಾತ್ರಿ 8 ಗಂಟೆಯಿಂದ ಮೇ 9 ರ ಬೆಳಗ್ಗೆ 8 ಗಂಟೆಯವರೆಗೆ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಜಂಟಿ ನಿರ್ದೇಶಕ ನರೇಂದ್ರಬಾಬು.ಎನ್ (9845248733) ಅವರನ್ನು ಹಾಗೂ ಸದರಿ ಅಧಿಕಾರಿಯವರ ಅಧೀನ ಸಿಬ್ಬಂದಿಗಳನ್ನೊಳಗೊಂಡ ತಂಡವು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ದಲ್ಲಿ ಹಾಜರಿದ್ದು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಮೇ 9 ರ ರಾತ್ರಿ 8 ಗಂಟೆಯಿಂದ ಮೇ 10 ರ ಬೆಳಗ್ಗೆ 8 ಗಂಟೆಯವರೆಗೆ ಜಿಲ್ಲಾ ಸರ್ವೇ ದಾಖಲೆಗಳ ಉಪ ನಿರ್ದೇಶಕ ಎಂ.ಸಿ.ಕೇಶವಮೂರ್ತಿ (9480326010) ಅವರನ್ನು ಹಾಗೂ ಸದರಿ ಅಧಿಕಾರಿಯವರ ಅಧೀನ ಸಿಬ್ಬಂದಿಗಳನ್ನೊಳಗೊಂಡ ತಂಡವು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ದಲ್ಲಿ ಹಾಜರಿದ್ದು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.
ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳ ನೇಮಕ
ವಿದೇಶಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 8 ರಿಂದ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಪ್ರಯಾಣಿಕರು ಆಗಮಿಸಲಿದ್ದು, ಅವರ ತಪಾಸಣೆ ಹಾಗೂ ಕ್ವಾರಂಟೇನ್ ಮಾಡುವ ಸಲುವಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮೂವರು ಹಿರಿಯ ಅಧಿಕಾರಿಗಳು
ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಅಜಿತ್ ಕುಮಾರ್.ಎಸ್ (9000001368) ಅವರನ್ನು ಮುಖ್ಯ ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಯಾಗಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತಾಧಿಕಾರಿ ಡಾ. ಶಿವರಾಜ್ ಹೆಡೆ (9341896005) ಮತ್ತು ದೇವನಹಳ್ಳಿ ತಾಲ್ಲೂಕು ನಿಯೋಜಿತ ಆಹಾರ ಸಂರಕ್ಷಣಾಧಿಕಾರಿ ಡಾ. ಎ.ಶ್ರೀನಿವಾಸಲು (7892103746) ಅವರನ್ನು ಸಹಾಯಕ ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಆದೇಶಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡಬೇಡಿ
ವಿದೇಶಗಳಿಂದ ಬರುವ ಹೊರ ಜಿಲ್ಲೆಯ ಜನರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡದಿರಲು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕೆಂಪು ವಲಯದಿಂದ ಬದಲಾಯಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಶಾಸಕರು, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ವತಿಯಿಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.