ಕರ್ನಾಟಕ ಕಾಂಗ್ರೆಸ್ನಲ್ಲಿ 5 ಮಹತ್ವದ ಬದಲಾವಣೆ: ಎಐಸಿಸಿ ಆದೇಶ
ಮೈತ್ರಿ ಸರ್ಕಾರ ಪತನದ ನಂತರ ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಕೂಗು ಬಹಳ ಜೋರಾಗಿ ಸದ್ದು ಮಾಡುತ್ತಿತ್ತು. 15 ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸೋಲು ಕಾಂಗ್ರೆಸ್ಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ಬಳಿಕ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದ ಎಐಸಿಸಿ ಅಂತಿಮವಾಗಿ ಡಿಕೆ ಶಿವಕುಮಾರ್ಗೆ ಕರ್ನಾಟಕ ಕಾಂಗ್ರೆಸ್ ಜವಾಬ್ದಾರಿ ನೀಡಿದೆ.
ಎಂಬಿ ಪಾಟೀಲ್, ಕೆಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಕರ್ನಾಟಕದ ಘಟಾನುಘಟಿ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅದ್ಯಾವಾಗ ಡಿಕೆಶಿ ತಿಹಾರ್ ಜೈಲು ಸೇರಿದರೂ, ಅಲ್ಲಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕನಕಪುರ ರಾಜನಿಗೆ ಕೈತಪ್ಪಲಿದೆ ಎಂಬ ಅನುಮಾನ ಮೂಡಿತ್ತು.
ಕೆಪಿಸಿಸಿ ಅಧ್ಯಕ್ಷ ಸ್ಥಾನ: ರಾಜ್ಯ ನಾಯಕರ ಎಲ್ಲಾ ಲೆಕ್ಕಾಚಾರ ಉಲ್ಟಾಪಲ್ಟ ಮಾಡಿದ ಹೈಕಮಾಂಡ್?
ಆದರೆ, ಎಐಸಿಸಿ ಲೆಕ್ಕಾಚಾರವೇ ಇದೆಲ್ಲವನ್ನು ಉಲ್ಟಾಪಲ್ಟ ಮಾಡಿದೆ. ಗಮನಿಸಬೇಕಾದ ವಿಚಾರ ಅಂದ್ರೆ ಕನಕಪುರ ಬಂಡೆಗೆ ಕೆಪಿಸಿಸಿ ಅಧಿಕಾರ ನೀಡುವುದರ ಜೊತೆಗೆ ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತಷ್ಟು ಮಹತ್ವದ ಬದಲಾವಣೆ ಕೈಗೊಂಡಿದೆ ಎಐಸಿಸಿ. ಏನದು? ಮುಂದೆ ಓದಿ....
ಮೂರು ಕಾರ್ಯಧ್ಯಕ್ಷರ ನೇಮಕ
ಡಿಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿರುವ ಎಐಸಿಸಿ ಮೂರು ಜನರನ್ನು ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪ್ರಬಲ ಆಕಾಂಕ್ಷಿಗಳಲ್ಲಿ ಅತೃಪ್ತಿ ಮೂಡಬಾರದು ಹಾಗೂ ಜಾತಿವಾರು ಲೆಕ್ಕದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರನ್ನು ಕಾರ್ಯಧ್ಯಕ್ಷರ ಸ್ಥಾನದ ಜವಾಬ್ದಾರಿ ನೀಡಿದೆ. ಸತೀಶ್ ಜಾರಕಿಹೊಳಿ (ಹಿಂದುಳಿದ ವರ್ಗ), ಸಲೀಂ ಅಹ್ಮದ್ (ಅಲ್ಪಾ ಸಂಖ್ಯಾತ) ಹಾಗೂ ಈಶ್ವರ್ ಖಂಡ್ರೆ (ಲಿಂಗಾಯಿತ) ನೂತನ ಕಾರ್ಯಧ್ಯಕ್ಷರಾಗಿದ್ದಾರೆ.
ವಿಧಾನಸಭೆ ಮುಖ್ಯ ಸಚೇತಕ
ಅಧಿವೇಶನ ಸಂದರ್ಭಗಳಲ್ಲಿ ಕಲಾಪ ಸುಸೂತ್ರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿಧಾನಸಭೆ ಮುಖ್ಯ ಸಚೇತಕ ಸ್ಥಾನಕ್ಕೆ ಅಜಯ್ ಸಿಂಗ್ ಅವರನ್ನು ಆಯ್ಕೆ ಮಾಡಿದೆ. ಅಜಯ್ ಸಿಂಗ್ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ. ಜೇವರ್ಗಿ ಶಾಸಕ ಅಜಯ್ ಸಿಂಗ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಸಿದ್ದರಾಮಯ್ಯಗೆ ಎರಡು ದೊಡ್ಡ ಜವಾಬ್ದಾರಿ ಕೊಟ್ಟ ಎಐಸಿಸಿ
ವಿಧಾನ ಪರಿಷತ್ ಮುಖ್ಯ ಸಚೇತಕ
ವಿಧಾನಸಭೆಯಂತೆ ವಿಧಾನ ಪರಿಷತ್ನಲ್ಲೂ ಮುಖ್ಯ ಸಚೇತಕ ಸ್ಥಾನವಿದ್ದು, ಈ ಸ್ಥಾನಕ್ಕಾಗಿ ವಿಧಾನ ಪರಿಷತ್ ಸದಸ್ಯ ಎಂ ನಾರಾಯಣ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ಅಂತೆ-ಕಂತೆ, ಸಾಧ್ಯ-ಅಸಾಧ್ಯಗಳ ನಡುವೆ ಕನಕಪುರ ಕಾಂಗ್ರೆಸ್ ಶಾಸಕ ಹಾಗೂ ಒಕ್ಕಲಿಗ ಸಮುದಾಯ ಪ್ರಬಲ ನಾಯಕ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ನೀಡಲಾಗಿದೆ. ಕಳೆದ ಕೆಲವು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ನಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದಾದ ಕರ್ನಾಟಕ ಕಾಂಗ್ರೆಸ್ ಪಟ್ಟ ಡಿಕೆಶಿ ಕೈತಪ್ಪಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಟ್ರಬಲ್ ಶೂಟರ್ ಗೆ ರೆಡ್ ಕಾರ್ಪೆಟ್ ಹಾಕಿ ಸಿಂಹಾಸನದಲ್ಲಿ ಕೂರಿಸಿದೆ.
ಎರಡು ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಕೆ
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಷ್ಟು ದಿನ ಎಐಸಿಸಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ, ಈ ಕುತೂಹಲಕ್ಕೆ ತೆರೆ ಎಳೆದಿದ್ದು, ಸಿದ್ದರಾಮಯ್ಯ ಅವರ ರಾಜೀನಾಮೆ ತಿರಸ್ಕರಿಸಿದೆ. ಈಗ ಇರುವಂತೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ.