ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ತಂದವರು ಯಾರು? ಅವರೇ ಹೇಳಿದ್ದಾರೆ ನೋಡಿ
ಬೆಂಗಳೂರು, ಆಗಸ್ಟ್ 20: ಗೆಳೆಯ ವಿಶ್ವನಾಥ್ಗೆ ಮೋಸ ಮಾಡಿದರು ಎಂಬುದು ಸಿದ್ದರಾಮಯ್ಯ ಅವರ ಮೇಲಿರುವ ಆರೋಪಗಳಲ್ಲಿ ಒಂದು ಆದರೆ ಇದನ್ನು ಸಿದ್ದರಾಮಯ್ಯ ಅಲ್ಲಗಳೆದು ಕಾರಣವನ್ನೂ ನೀಡಿದ್ದಾರೆ.
ಕಾಂಗ್ರೆಸ್ನಲ್ಲಿದ್ದ ವಿಶ್ವನಾಥ್ ಅವರು, ಜೆಡಿಎಸ್ನಲ್ಲಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ತಂದರು ಆದರೆ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರನ್ನು ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಎತ್ತರಕ್ಕೆ ಏರಿದರು ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿ ಅಪ್ರಸ್ತುತರಾಗಿಬಿಟ್ಟರು. ಆದರೆ ಸಿದ್ದರಾಮಯ್ಯ ಹೇಳುವ ಪ್ರಕಾರ ಇದು ಸುಳ್ಳಂತೆ.
ಸಿದ್ದರಾಮಯ್ಯಗೆ ಎಚ್ಡಿಕೆ ಟಾಂಗ್, ಶಾಧಿ ಭಾಗ್ಯಕ್ಕೆ ಅನುದಾನ ಕಡಿತ
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ತಂದವರು ವಿಶ್ವನಾಥ್ ಅಲ್ಲ ಅಹ್ಮದ್ ಪಟೇಲ್ ಎಂದು ಸ್ವತಃ ಅವರೇ ಹೇಳಿದ್ದಾರೆ.
ಕುರುಬ ಸಂಘದ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ ಅವರು, ನನ್ನನ್ನು ಬೇರೆ ಯಾರೂ ಕಾಂಗ್ರೆಸ್ಗೆ ತಂದಿಲ್ಲ ನಾನು ಕಾಂಗ್ರೆಸ್ಗೆ ಬರಲು ಕಾರಣ ಅಹ್ಮದ್ ಪಟೇಲ್ ಎಂದು, ವಿಶ್ವನಾಥ್ ಅವರಿಗೆ ಛಾಟಿ ಬೀಸಿದ್ದಾರೆ.
ಈ ಹಿಂದೆ ನಾನೂ ಕುರುಬನೇ ನನಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಈಗ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ವಿಶ್ವನಾಥ್ ಅವರು ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ತಮ್ಮ ಚುನಾವಣಾ ಸೋಲಿನ ಬಗ್ಗೆಯೂ ಮಾತನಾಡಿರುವ ಸಿದ್ದರಾಮಯ್ಯ, 'ನಾನು ಜಾತಿಗಳನ್ನು ಒಡೆಯುತ್ತೇನೆ ಎಂದು ಹೇಳಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರು, ಕೋಮುವಾದಿಗಳ ವಿರುದ್ಧ ನಿಲ್ಲಬೇಕಿದ್ದ ಜಾತ್ಯಾತೀತರು, ಹಿಂದುಳಿದ ಸಮಾಜದವರು ಸಹ ಸೂಕ್ತ ಪ್ರಮಾಣದಲ್ಲಿ ಪ್ರತಿಕ್ರಿಯಿಸದ ಕಾರಣ ನನಗೆ ಸೋಲಾಯಿತು' ಎಂದು ಮನದ ಮಾತನ್ನಾಡಿದ್ದಾರೆ.