ಅ.24 ರಿಂದ ಜಿಕೆವಿಕೆಯಲ್ಲಿ ಕೃಷಿ ಮೇಳ: ಈ ಬಾರಿ ಹಲವು ಹೊಸತು
ಬೆಂಗಳೂರು, ಅಕ್ಟೋಬರ್ 23: ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಯಲ್ಲಿ ನಾಳೆ (ಗುರುವಾರ) ದಿಂದ ಕೃಷಿ ಮೇಳ ಆರಂಭವಾಗಲಿದೆ.
'ನಿಖರ ಕೃಷಿ-ಸುಸ್ಥಿರ ಅಭಿವೃದ್ಧಿ' ಧ್ಯೇಯ ಈ ಬಾರಿಯ ಕೃಷಿ ಮೇಳ ನಡೆಯಲಿದ್ದು, ಅಕ್ಟೋಬರ್ 24 ರಿಂದ 27 ರವರೆಗೆ ನಡೆಯಲಿದೆ. ಕೃಷಿ ಮೇಳವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಈ ಬಾರಿಯ ಕೃಷಿ ಮೇಳದಲ್ಲಿ ಹಲವು ಹೊಸತು ಇರಲಿವೆ ಎಂದು ಜಿಕೆವಿಕೆ ವಿವಿ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ಹೇಳಿದ್ದು, 'ಮೇಳದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕವೇ ಕೃಷಿಯ ನೂತನ ವಿಧಾನಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ನಿಖರ ಮಾಹಿತಿ ನೀಡಲಿದ್ದೇವೆ' ಎಂದರು.
ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನಕ್ಕಾಗಿ 700ಕ್ಕೂ ಅಧಿಕ ಮಳಿಗೆಗಳುಇರಲಿವೆ. ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ, ಜಲಾನಯನ ಅಭಿವೃದ್ಧಿ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ತೋಟಗಾರಿಕೆ, ಕೃಷಿ ಮಾರುಕಟ್ಟೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಹಾಲು ಮಹಾಮಂಡಳಿ, ಸ್ವ-ಸಹಾಯ ಸಂಘಗಳು ಭಾಗವಹಿಸಲಿವೆ. 12 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ' ಎಂದು ಕುಲಪತಿಗಳು ಮಾಹಿತಿ ನೀಡಿದ್ದಾರೆ.
ಅನಾನುಕೂಲಗಳನ್ನು ತಪ್ಪಿಸಲು ಜಿಕೆವಿಕೆ ಪ್ರವೇಶ ದ್ವಾರದಿಂದ ಎರಡು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಬಳಿಗೆ ಬರಲು ಇದು ಅನುಕೂಲಕರವಾಗಲಿದೆ. ರೈತರ ಸಂಚಾರಕ್ಕೆ ಬಗ್ಗೀಸ್ ಸೇವೆ, ರೈತರಿಗೆ ಉಚಿತ ಆರೋಗ್ಯ ತಪಾಸಣೆ, ಎರಡು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಕೃಷಿ ಮೇಳದ ಸಂಪೂರ್ಣ ಮಾಹಿತಿ ಪಡೆಯಲು ಜಿಪಿಎಸ್ ಆಧರಿತ 'krishimela2019' ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ರೈತರು ಹಾಗೂ ಮೇಳಕ್ಕೆ ಭೇಟಿ ನೀಡುವವರು ತಮ್ಮ ಮೊಬೈಲ್ ಮೂಲಕವೇ ಕೃಷಿ ಮೇಳದಲ್ಲಿ ಎಲ್ಲೆಲ್ಲಿ ಏನೇನಿದೆ? ಎಂಬುದರ ಮಾಹಿತಿ ಪಡೆದುಕೊಳ್ಳಬಹುದು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಲಭ್ಯ ಎಂದು ಕುಲಪತಿಗಳು ತಿಳಿಸಿದರು.